ಕೌಟುಂಬಿಕ ಹಿಂಸೆಯ ವಿರುದ್ಧ ತಕ್ಷಣದ ರಕ್ಷಣೆ ಹೇಗೆ ಪಡೆಯಬಹುದು?

ಕೌಟುಂಬಿಕ ಹಿಂಸೆಯ ವಿರುದ್ಧ ತಕ್ಷಣ ರಕ್ಷಣೆ ಬೇಕೆಂದಲ್ಲಿ ನೀವು ವಕೀಲರು ಅಥವಾ ರಕ್ಷಾಧಿಕಾರಿಗಳ ನೆರವಿನಿಂದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು. ಹೀಗೆ ಮಾಡಿದಾಗ, ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯಿಂದ ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗಾಗಿ ನ್ಯಾಯಾಲಯವು “ರಕ್ಷಣಾ ಆದೇಶ”ವನ್ನು ಹೊರಡಿಸುತ್ತದೆ. ಈ ಆದೇಶವು ತಾತ್ಕಾಲಿಕವಾಗಿದ್ದು, ಬದಲಾದ ಸಂದರ್ಭಗಳ ಕಾರಣ ಇನ್ನು ಈ ಆದೇಶದ ಅಗತ್ಯವಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸುವ ತನಕ, ಒಂದು ನಿರ್ದಿಷ್ಟ ಕಾಲದವರೆಗೆ ಅನ್ವಯಿಸುತ್ತದೆ.

ಬೇಕಾದಲ್ಲಿ ಈ ಆದೇಶದ ಅವಧಿಯನ್ನು ಹೆಚ್ಚಿಸಲು ನಿಮ್ಮ ವಕೀಲರ ನೆರವನ್ನು ತೆಗೆದುಕೊಳ್ಳಬಹುದು. ಈ ರಕ್ಷಣಾ ಆದೇಶ ನಿಮಗೆ

ಕೆಳಿಗಿನಂತೆ ಸಹಾಯವಾಗುತ್ತದೆ:

೧. ಕೌಟುಂಬಿಕ ಹಿಂಸೆಯನ್ನು ನಿಲ್ಲಿಸುವುದು. ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ಯಾವುದೇ ರೀತಿಯ ಕೌಟುಂಬಿಕ ಹಿಂಸೆಯನ್ನು ಮಾಡುವುದು/ ಮಾಡಲು ಸಹಾಯ ಮಾಡುವುದು
  • ನಿಮಗೆ ಬೆಂಬಲಿಸುತ್ತಿರುವ ನಿಮ್ಮ ಸ್ನೇಹಿತರು, ನೆಂಟರು, ಅಥವಾ ಇನ್ನ್ಯಾರೋ ವ್ಯಕ್ತಿಯ ವಿರುದ್ಧ ಹಿಂಸೆ ಎಸಗುವುದು

೨. ಯಾವುದೇ ರೀತಿಯ ದೌರ್ಜನ್ಯ ಅಥವಾ ಅಡಚಣೆಯನ್ನು ಒಡ್ಡದಂತೆ ತಡೆಗಟ್ಟುವುದು: ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ನಿಮ್ಮ ವಾಸದ ಸ್ಥಳ, ಉದ್ಯೋಗ ಸ್ಥಳ, ಅಥವಾ ಇನ್ನ್ಯಾವುದೋ ಜಾಗದಲ್ಲಿ ನಿಮಗೆ ಕಿರುಕುಳ ನೀಡುವುದು/ ಅಡಚಣೆಗಳನ್ನುಂಟು ಮಾಡುವುದು
  • ನಿಮ್ಮ ಮಗುವಿಗೆ ಶಾಲೆಯಲ್ಲಿ, ಅಥವಾ ಇತರೆ ಜಾಗದಲ್ಲಿ ತೊಂದರೆ ಕೊಡುವುದು
  • ನಿಮ್ಮನ್ನು ಈ-ಮೇಲ್, ದೂರವಾಣಿ, ಆನ್ಲೈನ್, ಇನ್ನಿತರೇ ಮಾರ್ಗಗಳಿಂದ ಸಂಪರ್ಕ ಮಾಡುವುದು

೩. ನಿಮ್ಮ ಆಸ್ತಿ ಹಾಗು ಹಣಕಾಸಿನ ವ್ಯವಹಾರಗಳನ್ನು ರಕ್ಷಿಸುವುದು:

ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ: 

  • ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಆಸ್ತಿ, ಮದುವೆಯ ಉಡುಗೊರೆಗಳು, ಸ್ತ್ರೀಧನ, ಇತ್ಯಾದಿಗಳನ್ನು ಮಾರುವುದು ಅಥವಾ ದಾನ ಮಾಡುವುದು
  • ನಿಮ್ಮ ಒಪ್ಪಿಗೆಯಿಲ್ಲದೆ, ಮತ್ತು ನ್ಯಾಯಾಲಯಕ್ಕೆ ತಿಳಿಸದೇ, ನಿಮ್ಮ ಸ್ವಂತ/ಜಂಟಿ ಬ್ಯಾಂಕ್ ಖಾತೆಯನ್ನು , ಅಥವಾ ನಿಮ್ಮ ಸ್ವಂತ/ಜಂಟಿ ಬ್ಯಾಂಕ್ ಲಾಕರನ್ನು ಉಪಯೋಗಿಸುವುದು

೪. ನಿಮಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಯ ನಡುವಳಿಕೆಯನ್ನು ನಿಯಂತ್ರಿಸುವುದು:

ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯು ಕೆಳಗಿನ ಕ್ರಿಯೆಗಳನ್ನು ಮಾಡಬಾರದು ಎಂದು ಆದೇಶ ಹೊರಡಿಸಲಾಗುತ್ತದೆ:

  • ನಿಮಗೆ ನೋವುಂಟುಮಾಡಬಲ್ಲ ಬಂದೂಕುಗಳು, ಶಸ್ತ್ರಾಸ್ತ್ರಗಳು, ಅಥವಾ ಇನ್ನಿತರೇ ಅಪಾಯಕಾರಿ ವಸ್ತುಗಳನ್ನು ಉಪಯೋಗಿಸುವುದು. ಇಂತಹ ವಸ್ತುಗಳನ್ನು ನೇರವಾಗಿ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು ಎಂದು ಕೂಡ ನ್ಯಾಯಾಲಯ ಆದೇಶ ಹೊರಡಿಸಬಹುದು.
  • ಕೌಟುಂಬಿಕ ಹಿಂಸೆಗೆ ಕಾರಣವಾಗಬಲ್ಲ, ಸಾರಾಯಿ, ಅಫೀಮು, ಇನ್ನಿತರೇ ಅಮಲೇರಿಸುವಂತಹ ಪದಾರ್ಥಗಳ ಸೇವನೆ ಮಾಡುವುದು

ರಕ್ಷಣಾ ಆದೇಶದ ನಂತರವೂ ಕಿರುಕುಳ ತಪ್ಪದಿದ್ದಲ್ಲಿ, ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಇದನ್ನು ತಿಳಿಸಬಹುದು. ಹೀಗೆ ಮಾಡಿದಲ್ಲಿ, ಕಿರುಕುಳ ನೀಡುತ್ತಿರುವ ವ್ಯಕ್ತಿಗೆ ನ್ಯಾಯಾಲಯ, ಒಂದು ವರ್ಷದ ಸೆರೆಮನೆ ವಾಸ ಅಥವಾ ೨೦೦೦೦ ರೂಪಾಯಿಗಳ ಜುಲ್ಮಾನೆಯ ದಂಡ ವಿಧಿಸುತ್ತದೆ.

 

 

ವೈದ್ಯಕೀಯ ಸೌಲಭ್ಯಗಳು ಮತ್ತು ಆಶ್ರಯ ಮನೆಗಳು ಎಂದರೇನು?

ವೈದ್ಯಕೀಯ ಸೌಲಭ್ಯಗಳು:

ನಿಮಗೆ ಕೌಟುಂಬಿಕ ಹಿಂಸೆ ಆಗಿದ್ದಲ್ಲಿ, ವೈದ್ಯಕೀಯ ಸಹಾಯ ಪಡೆಯುವುದು ನಿಮ್ಮ ಹಕ್ಕಾಗಿದೆ. ನಿಮಗೆ ಅಥವಾ ನಿಮ್ಮ ಮಗುವಿಗೆ ವೈದ್ಯಕೀಯ ಸಹಾಯ ಬೇಕಾದಲ್ಲಿ, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳು, ಅಥವಾ ಮಹಿಳಾ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಿ. ಇದಾದ ನಂತರ ನಿಮ್ಮ/ನಿಮ್ಮ ಮಗುವಿನ ವೈದ್ಯಕೀಯ ವರದಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮತ್ತು ನ್ಯಾಯಾಲಯಕ್ಕೆ ಕಳಿಸಲಾಗುತ್ತದೆ.

ವೈದ್ಯಕೀಯ ಸೌಕರ್ಯದ ಪಾತ್ರ:

  • ಕೌಟುಂಬಿಕ ಹಿಂಸೆಗೆ ಬಲಿಯಾದ ವ್ಯಕ್ತಿಗೆ ವೈದ್ಯಕೀಯ ಸಹಾಯ ನೀಡುವುದು. ಈ ಸೇವೆಯನ್ನು ಯಾವ ವೈದ್ಯಕೀಯ ಸೌಕರ್ಯವೂ ಕೂಡ ನಿರಾಕರಿಸಲಾಗುವುದಿಲ್ಲ.
  • ಡಿ.ಐ.ಆರ್.ಅನ್ನು ಇನ್ನೂ ದಾಖಲಿಸದ್ದಿದ್ದಲ್ಲಿ, ಅದನ್ನು ದಾಖಲಿಸಿ ಸಂಬಂಧಪಟ್ಟ ರಕ್ಷಣಾಧಿಕಾರಿಗಳಿಗೆ ಕಳಿಸುವುದು.
  • ವೈದ್ಯಕೀಯ ವರದಿಯ ಉಚಿತ ಪ್ರತಿಯನ್ನು ಆ ಮಹಿಳೆ/ಮಗುವಿಗೆ ಕೊಡುವುದು

ಆಶ್ರಯ ಮನೆಗಳು:

ಆಶ್ರಯ ಮನೆಗಳನ್ನು ರಾಜ್ಯ ಸರ್ಕಾರಗಳು, ಮಹಿಳೆಯರ ಸುರಕ್ಷಿತ ವಾಸಕ್ಕಾಗಿ ನಿರ್ಮಿಸಿವೆ. ಬಲಾತ್ಕಾರ, ಲೈಂಗಿಕ ಅಪರಾಧಗಳು, ಕೌಟುಂಬಿಕ ಹಿಂಸೆ, ಇತ್ಯಾದಿಗಳಂತಹ ಯಾವುದೇ ರೀತಿಯ ದೌರ್ಜನ್ಯಕ್ಕೊಳಗಾದ ಮಹಿಳೆಯರು ಈ ಆಶ್ರಯ ಮನೆಗಳಲ್ಲಿ ಇರಬಹುದು. ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿ ನಿಮ್ಮ ಮನೆಯಲ್ಲಿ ವಾಸವಾಗಿದ್ದರಿಂದ, ನೀವು ಹಿಂತಿರುಗಿ ನಿಮ್ಮ ಮನೆಗೆ ಹೋಗಲು ಬರಲಾರದಂತಹ ಪರಿಸ್ಥಿತಿಯಲ್ಲಿ ರಕ್ಷಣಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರು ನಿಮಗೆ ಆಶ್ರಯ ಮನೆಗೆ ಹೋಗಲು ಸಲಹೆ ನೀಡಬಹುದು. ಆಶ್ರಯ ಮನೆಯನ್ನು ಹುಡುಕಲು, ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ

ಅವರ ಬಳಿ ಜಿಲ್ಲಾ ಮಟ್ಟದ ಆಶ್ರಯ ಮನೆಗಳ ಪಟ್ಟಿ ಇರುತ್ತದೆ.

ನೀವು ಡಿ.ಐ.ಆರ್.ಅನ್ನು ದಾಖಲಿಸದಿದ್ದರೂ ಕೂಡ, ರಕ್ಷಣಾಧಿಕಾರಿಗಳ ಸಹಾಯದಿಂದ, ಯಾವುದೇ ಸರ್ಕಾರಿ ಆಶ್ರಯ ಮನೆಗೆ ನೀವು ಹೋಗಬಹುದು, ಮಾತು ಆ ಆಶ್ರಯ ಮನೆ, ನೀವು ಡಿ.ಐ.ಆರ್. ದಾಖಲಿಸಿಲ್ಲ ಎಂಬ ಓರ್ವ ಕಾರಣಕ್ಕೆ ನಿಮಗೆ ಆಶ್ರಯ ಕೊಡುವುದಿಲ್ಲ ಎನ್ನಲು ಬರುವುದಿಲ್ಲ. ಬೇಕೆಂದಲ್ಲಿ, ನಿಮಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯಿಂದ ನಿಮ್ಮ ಗುರುತನ್ನು ಆಶ್ರಯ ಮನೆ ಮುಚ್ಚಿಡಬಹುದು.

ಕೌಟುಂಬಿಕ ಹಿಂಸೆ ಕಾನೂನಿನಡಿ ಸಮಾಲೋಚನೆ (counseling) ಎಂದರೇನು?

ಸಮಾಲೋಚನೆಯ ಪ್ರಕ್ರಿಯೆಯಿಂದ ಕೌಟುಂಬಿಕ ಹಿಂಸೆ ನಡೆದ ಘಟನೆ ಪುನರಾವರ್ತಿಸುವುದಿಲ್ಲ ಎಂಬ ಆಶ್ವಾಸನೆ ಹುಟ್ಟುತ್ತದೆ. ಸಮಾಲೋಚನೆಯ ಸಂದರ್ಭದಲ್ಲಿ ಮತ್ತೆ ನಿಮಗೆ ಕಿರುಕುಳ ಉಂಟು ಮಾಡಿದಲ್ಲಿ, ಸಲಹೆಗಾರರಿಗೆ ನೀವು ಇದರ ಬಗ್ಗೆ ಹೇಳಿದರೆ, ಅವರು ನ್ಯಾಯಾಧೀಶರಿಂದ ಹಿಂಸೆಯನ್ನು ತಡೆಯುವಂತೆ ಸೂಕ್ತ ಆದೇಶವನ್ನು ಹೊರಡಿಸಬಲ್ಲರು.

ನಿಮ್ಮ ಮತ್ತು ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಯ ನಡುವೆ ನಡೆದ ಕೌಟುಂಬಿಕ ಹಿಂಸೆಯ ಸಮಸ್ಯೆಯನ್ನು ಪರಿಹರಿಸಲು, ಇನ್ನು ಮುಂದೆ ಯಾವುದೇ ರೀತಿಯ ಹಿಂಸೆ ನಡೆಯುವುದಿಲ್ಲ ಎಂದು ಲಿಖಿತವಾಗಿ ಖಾತರಿ ಪಡೆದುಕೊಳ್ಳಲು, ಮತ್ತು ಕೌಟುಂಬಿಕ ಹಿಂಸೆಯನ್ನು ತಡೆಯಲು ಸಾಧ್ಯವಾದಷ್ಟು ಅತ್ತ್ಯುತ್ತಮವಾದ ಪರಿಹಾರವನ್ನು ಕಂಡುಕೊಳ್ಳಲು, ಸಲಹೆಗಾರರು ನಿಮಗೆ ನೀಡುವ ವೃತ್ತಿಪರ ಮಾರ್ಗದರ್ಶನಕ್ಕೆ ಸಮಾಲೋಚನೆ ಎನ್ನುತ್ತಾರೆ.

ನಿಮ್ಮನ್ನುದ್ದೇಶಿಸಿ ಅಥವಾ ನಿಮಗೆ ಕಿರುಕುಳ ನೀಡಿದ ವ್ಯಕ್ತಿಯನ್ನುದ್ದೇಶಿಸಿ, ಒಬ್ಬೊಬ್ಬರಾಗಿ ಅಥವಾ ಜೊತೆಯಾಗಿ ನೀವು ನ್ಯಾಯಾಲಯ ನೇಮಿಸಿದ ಸಲಹೆಗಾರರೊಡನೆ ಸಮಾಲೋಚನೆ ಮಾಡಬೇಕು ಎಂದು ನ್ಯಾಯಾಧೀಶರು ಆದೇಶ ಹೊರಡಿಸುತ್ತಾರೆ.

ಕೆಳಗಿನವರು ನಿಮ್ಮ ಪ್ರಕರಣದಲ್ಲಿ ಸಲಹೆಗಾರರಾಗಲು ಬರುವುದಿಲ್ಲ:

  • ೧. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ, ಅಥವಾ ನಿಮ್ಮಿಬರ ಒಪ್ಪಿಗೆಯಿಲ್ಲದೆ, ನಿಮ್ಮ/ನಿಮಗೆ ಕಿರುಕುಳ ನೀಡಿದ ವ್ಯಕ್ತಿಗೆ ಸಂಬಂಧಿಸಿದವರು.
  • ೨. ನಿಮಗೆ ಕಿರುಕುಳ ನೀಡಿದ ವ್ಯಕ್ತಿಯ ಪರ ವಾದಿಸಿದ ವಕೀಲರು

ಯಾವುದೇ ಕಾರಣಕ್ಕೆ ನಿಮಗೆ ನೇಮಕಗೊಂಡ ಸಲಹೆಗಾರರು ಹಿಡಿಸಲಿಲ್ಲವೆಂದಲ್ಲಿ, ಈ ಮಾಹಿತಿಯನ್ನು ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಬೇಕು. ಹೀಗೆ ಮಾಡಿದಾಗ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು.

ಸಲಹೆಗಾರರ ಪಾತ್ರ:

ಸಲಹೆಗಾರರ ಪಾತ್ರ ಕೆಳಗಿನಂತಿವೆ:

  • ೧. ನಿಮಗೆ ಮತ್ತು ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಗೆ ಸಮಂಜಸವಾದ ಜಾಗದಲ್ಲಿ, ನಿಮ್ಮೊಬರೊಡನೆ ಅಥವಾ ನಿಮ್ಮಿಬರೊಡನೆ ಸಂಧಾನ ನಡೆಸುವುದು.
  • ೨. ಕೌಟುಂಬಿಕ ಹಿಂಸೆಯ ಘಟನೆ ಮರುಕಳಿಸಬಾರದು ಎಂಬ ಗುರಿಯನ್ನು ಮುಂದಿಟ್ಟುಕೊಂಡು ಸಲಹೆಗಾರರು ಸಮಾಲೋಚನೆಯ ಪ್ರಕ್ರಿಯೆಯನ್ನು ನಡೆಸಬೇಕು. ಈ ನಿಟ್ಟಿನಲ್ಲಿ, ಕೆಳಗಿನ ಭರವಸೆಗಳುಳ್ಳ ದಾಖಲಾ ಪಾತ್ರವನ್ನು ನಿಮಗೆ ಕಿರುಕುಳ ನೀಡಿದ ವ್ಯಕ್ತಿಯಿಂದ

ಅವರು ತೆಗೆದುಕೊಳ್ಳಬಹುದು:

  • – ಮತ್ತೆ ಎಂದೂ ಕೌಟುಂಬಿಕ ಹಿಂಸೆಯನ್ನು ಪುನರಾವರ್ತಿಸುವುದಿಲ್ಲ
  • – ನಿಮ್ಮನ್ನು ಪತ್ರಗಳು, ದೂರವಾಣಿ, ಈ-ಮೇಲ್, ಅಥವಾ ಇನ್ನ್ಯಾವುದೋ ಮಾಧ್ಯಮದ ಮುಖಾಂತರ ಭೇಟಿಯಾಗಲು, ಅಥವಾ ಸಂಪರ್ಕಿಸಲು ಪ್ರಯತ್ನಿಸುವುದಿಲ್ಲ (ನ್ಯಾಯಾಧೀಶರು ಅನುವು ಮಾಡಿಕೊಟ್ಟ ಮಾಧ್ಯಮಗಳು, ಅಥವಾ ಸಲಹೆಗಾರರ ಉಪಸ್ಥಿತಿಯಲ್ಲಿ ಭೇಟಿಯಾಗುವುದನ್ನು ಹೊರತುಪಡಿಸಿ)
  • – ನ್ಯಾಯಾಲಯದ ಹೊರಗೆ ಒಪ್ಪಂದದ ಮೇರೆಗೆ ನಿಮ್ಮ ಸಮಸ್ಯೆಯನ್ನು ಬಗೆಹರಿಸಿ, ಪ್ರಕರಣವನ್ನು ಅಂತ್ಯಗೊಳಿಸುವುದಾಗಿ ನೀವು ನಿಶ್ಚಯಿಸಿದಲ್ಲಿ, ಸಲಹೆಗಾರರಿಗೆ ಇದನ್ನು ತಿಳಿಸಬೇಕು. ಆಗ ಅವರು ಎಲ್ಲರಿಗೂ ಸಮಂಜಸವೆನಿಸುವ ಪರಿಹಾರವನ್ನು ಸೂಚಿಸುತ್ತಾರೆ.

ಸಮಾಲೋಚನೆಯ ಸಂದರ್ಭದಲ್ಲಿ, ನಿಮಗೆ ಹಿಂಸೆ ನೀಡಿದ ವ್ಯಕ್ತಿ, ಯಾಕೆ ಹಾಗೆ ಮಾಡಿದರು ಎಂದು ಸಮರ್ಥನೆ ನೀಡಲು ಅವಕಾಶವಿರುವುದಿಲ್ಲ. ಸಮಾಲೋಚನೆಯ ನಂತರ, ಸಲಹೆಗಾರರು ನಡೆದ ಪ್ರಕ್ರಿಯೆಯ ವರದಿಯನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ. ಹಾಗು, ಸಮಾಲೋಚನೆ ಮುಗಿದ ೨ ತಿಂಗಳುಗಳೊಳಗೆ, ನ್ಯಾಯಾಲಯವು ಪ್ರಕರಣದ ಮುಂದಿನ ದಿನಾಂಕವನ್ನು ನಿಶ್ಚಯಿಸುತ್ತದೆ. ಒಂದು ವೇಳೆ ಸಮಾಲೋಚನೆಯ ಮುಖಾಂತರ ಒಪ್ಪಂದ ಆಗಲಿಲ್ಲವೆಂದರೆ, ಕಾರಣಗಳನ್ನು ಸಲಹೆಗಾರರು ನ್ಯಾಯಾಲಯಕ್ಕೆ ಹೇಳಬೇಕಾಗುತ್ತದೆ.

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ಹೇಗೆ ದಾಖಲಿಸಬಹುದು?

ಯಾವುದೇ ರೀತಿಯ ಕೌಟುಂಬಿಕ ಹಿಂಸೆಯ ವಿರುದ್ಧ ದೂರು ದಾಖಲಿಸಲು, ನೀವು ಅಥವಾ ನಿಮ್ಮ ಪ್ರತಿ ಬೇರೆ ಯಾರಾದರೂ, ಕೆಳಗೆ ಪಟ್ಟಿ ಮಾಡಿರುವ ಅಧಿಕಾರಿಗಳನ್ನು ಭೇಟಿ ಮಾಡಬಹುದು:

೧. ಪೊಲೀಸ್ ಠಾಣೆಗೆ ಹೋಗುವುದು:

ನಿಮ್ಮ ವಾಸದ ಜಾಗದಲ್ಲಿನ ಪೊಲೀಸ್ ಠಾಣೆ, ಅಥವಾ ಬೇರೆ ಯಾವುದಾದರೂ ಪೊಲೀಸ್ ಠಾಣೆಗೆ ಹೋಗಿ ಕೌಟುಂಬಿಕ ಹಿಂಸೆಯ ವಿರುದ್ಧ ನಿಮ್ಮ ದೂರನ್ನು ದಾಖಲಿಸಬಹುದು. ಪೊಲೀಸರು ಎಫ್.ಐ.ಆರ್./ಡೀ.ಐ/ಆರ್.ಅನ್ನು ದಾಖಲಿಸುತ್ತಾರೆ, ಅಥವಾ ಮುಂದಿನ ಪ್ರಕ್ರಿಯೆಯನ್ನು ಅನುಸರಿಸಲು ಸಹಾಯವಾಗುವಂತೆ ನಿಮ್ಮ ಜಿಲ್ಲೆಯ ರಕ್ಷಣಾಧಿಕಾರಿಗಳಿಗೆ ಭೇಟಿ ನೀಡಲು ನಿರ್ದೇಶಿಸುತ್ತಾರೆ.

೨. ರಕ್ಷಣಾಧಿಕಾರಿಗಳನ್ನು ಭೇಟಿ ಆಗುವುದು:

ದೂರು ದಾಖಲಿಸಲು, ರಕ್ಷಣಾಧಿಕಾರಿಗಳು ನಿಮಗೆ ಮೊದಲನೆಯ ಸಂಪರ್ಕ ಬಿಂದು ಆಗುತ್ತಾರೆ. ಡಿ.ಐ.ಆರ್. ದಾಖಲಿಸಲು, ವಿತ್ತೀಯ ಪರಿಹಾರ, ರಕ್ಷಣೆ, ಇತ್ಯಾದಿ ಪರಿಹಾರಗಳನ್ನು ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವುದು – ಇಂತಹ ಕೆಲಸಗಳಿಗೆ ಅವರು ನಿಮಗೆ ಸಹಯಾ ಮಾಡುತ್ತಾರೆ. ನಿಮ್ಮ ಕ್ಷೇತ್ರದ ರಕ್ಷಣಾಧಿಕಾರಿಗಳು ನಿಮಗೆ ಸಿಗಲಿಲ್ಲವೆಂದಲ್ಲಿ, ಅವರನ್ನು ಹುಡುಕಲು ಯಾವುದೇ ಸರ್ಕಾರೇತರ ಸಂಸ್ಥೆಗಳು ಅಥವಾ ಸಾಮಾಜಿಕ ಕಾರ್ಯಕರ್ತರ ಸಹಾಯವನ್ನು ನೀವು ಪಡೆಯಬಹುದು.

೩. ರಾಷ್ಟ್ರೀಯ/ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸುವುದು:

ರಾಷ್ಟ್ರೀಯ ಮಹಿಳಾ ಆಯೋಗವು, ಮಹಿಳೆಯರಿಗೆ ಉಂಟಾಗುವ ಕೌಟುಂಬಿಕ ಹಿಂಸೆ, ವರದಕ್ಷಿಣೆಗೆ ಸಂಬಂಧಿಸಿದ ಕಿರುಕುಳ, ಬಲಾತ್ಕಾರ, ಇನ್ನಿತರೇ ಅಪರಾಧಗಳ ದೂರುಗಳ ಮೇಲೆ ತನಿಖೆ ನಡೆಸುವ ಅಧಿಕಾರವುಳ್ಳ ರಾಷ್ಟ್ರೀಯ-ಮಟ್ಟದ ಸರ್ಕಾರಿ ಸಂಸ್ಥೆಯಾಗಿದೆ. ಕೆಳಗಿನಂತೆ

ರಾಷ್ಟ್ರೀಯ ಮಹಿಳಾ ಆಯೋಗವು ನಿಮ್ಮ ಸಹಾಯಕ್ಕೆ ಬರಬಹುದು:

  1. ಪೊಲೀಸರು ನಡೆಸುತ್ತಿರುವ ತನಿಖೆಗಳ ಮೇಲ್ವಿಚಾರಣೆ ಮತ್ತು ತನಿಖೆಯ ವೇಗ ಹೆಚ್ಚಿಸುವುದು
  2. ಎರಡೂ ಪಕ್ಷಗಳ ಮಧ್ಯೆಯ ಸಮಸ್ಯೆಯನ್ನು ಬಗೆಹರಿಸಲು ಸಮಾಲೋಚನೆ ಅಥವಾ ವಿಚಾರಣೆ ನಡೆಸುವುದು
  3. ಸ್ಥಾನೀಯ ವಿಚಾರಣೆ ನಡೆಸಿ, ಸಾಕ್ಷಿದಾರರನ್ನು ಪರಿಶೀಲಿಸಿ, ಪುರಾವೆಗಳನ್ನು ಸಂಗ್ರಹಿಸಿ, ಸಲಹೆಗಳುಳ್ಳ ವರದಿಯನ್ನು ಒಪ್ಪಿಸಲು ವಿಚಾರಣಾ ಸಮಿತಿಯನ್ನು ನೇಮಿಸುವುದು

೧೦೯೧ ಸಹಾಯವಾಣಿಯ ಮೂಲಕ, ಅಥವಾ e-mail ಮೂಲಕ, ಅಥವಾ ಆನ್ಲೈನ್ ದೂರು ದಾಖಲಿಸುವ ಮೂಲಕ ನೀವು ರಾಷ್ಟ್ರೀಯ ಮಹಿಳಾ ಆಯೋಗವನ್ನು ಸಂಪರ್ಕಿಸಬಹುದು. ರಾಷ್ಟ್ರೀಯ ಮಹಿಳಾ ಆಯೋಗ ದೆಹಲಿಯಲ್ಲಿರುವ ಕಾರಣ, ಕರ್ನಾಟಕದ ಮಹಿಳಾ ಆಯೋಗವನ್ನು ಕೂಡ ನೀವು ಸಂಪರ್ಕಿಸಬಹುದು.

ಕೌಟುಂಬಿಕ ಹಿಂಸೆಯ ನಿಮಿತ್ತ ಯಾರ ವಿರುದ್ಧ ದೂರು ದಾಖಲಿಸಬಹುದು?

ಕೌಟುಂಬಿಕ ಹಿಂಸೆಯ ನಿಮಿತ್ತ ನೀವು ಪುರುಷರು ಮತ್ತು ಮಹಿಳೆಯರ ವಿರುದ್ಧ ದೂರು ದಾಖಲಿಸಬಹುದು. ಕೆಳಗಿನವರ ವಿರುದ್ಧ ನೀವು ದೂರು ದಾಖಲಿಸಬಹುದು:

೧. ನಿಮ್ಮ ಕುಟುಂಬ: ಕೆಳಗಿನ ಸಂದರ್ಭಗಳಲ್ಲಿ, ನಿಮ್ಮ ಕುಟುಂಬದವರು ನಿಮಗೆ ಕೌಟುಂಬಿಕ ಹಿಂಸೆ ನೀಡುತ್ತಿದ್ದಲ್ಲಿ, ಅವರ ವಿರುದ್ಧ ದೂರನ್ನು ದಾಖಲಿಸಬಹುದು:

  • ಕಿರುಕುಳ ನೀಡುತ್ತಿರುವ ವ್ಯಕ್ತಿ ನಿಮ್ಮ ರಕ್ತ ಸಂಬಂಧಿಕರಾಗಿದ್ದರೆ. ಉದಾಹರಣೆಗೆ, ನಿಮ್ಮ ಅಪ್ಪ, ಅಣ್ಣ, ಇತ್ಯಾದಿ. – ಕಿರುಕುಳ ನೀಡುತ್ತಿರುವ ವ್ಯಕ್ತಿ ನಿಮ್ಮ ಮದುವೆಯಿಂದ ಸಂಬಂಧಿಕರಾಗಿದ್ದರೆ. ಉದಾಹರಣೆಗೆ, ಗಂಡ, ಅತ್ತೆ-ಮಾವ, ಇತ್ಯಾದಿ.
  • ಒಂದೇ ಮನೆಯಲ್ಲಿ ಅವಿಭಜಿತ ಕುಟುಂಬದ ಸದಸ್ಯರಾಗಿ ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿ ಹಾಗು ನೀವು ವಾಸವಾಗಿದ್ದಲ್ಲಿ. ಉದಾಹರಣೆಗೆ, ನಿಮ್ಮ ಅಜ್ಜಿ, ಸೋದರ ಮಾವ, ದತ್ತುಕ ಅಣ್ಣ/ತಮ್ಮ, ಇತ್ಯಾದಿ. ಆದಾಗ್ಯೂ, ಯಾರು ಹಿಂಸಾತ್ಮಕ ಕ್ರಿಯೆಯನ್ನು ಮಾಡುವಲ್ಲಿ ತೊಡಗಿರುತ್ತಾರೋ/ಮಾಡಲು ಸಹಾಯ ಮಾಡಿರುತ್ತಾರೋ, ಅವರ ವಿರುದ್ಧ ಮಾತ್ರ ನೀವು ದೂರು ದಾಖಲಿಸಬಹುದು. ಉದಾಹರಣೆಗೆ, ನೀವು ಹತ್ತು ಮಂದಿಯ ಅವಿಭಜಿತ ಕುಟುಂಬದ ಸದಸ್ಯರಾಗಿ ಒಂದೇ ಸೂರಿನಡಿ ವಾಸವಾಗಿದ್ದು, ನಿಮಗೆ ಕೇವಲ ನಿಮ್ಮ ಗಂಡ ಹಾಗು ಅತ್ತೆ ಕೌಟುಂಬಿಕ ಹಿಂಸೆ ಮಾಡಿದ್ದಲ್ಲಿ, ಇವರಿಬ್ಬರ ವಿರುದ್ಧ ಮಾತ್ರ ದೂರನ್ನು ಸಲ್ಲಿಸಬಹುದು.
  • ನಿಮ್ಮ ಲಿವ್-ಇನ್ ಸಂಗಾತಿ: ನಿಮ್ಮ ಲಿವ್-ಇನ್ ಸಂಗಾತಿ ನಿಮಗೆ ನೋವುಂಟು ಮಾಡಿದಲ್ಲಿ/ಕಿರುಕುಳ ಕೊಟ್ಟಲ್ಲಿ, ಅವರ ವಿರುದ್ಧ ದೂರು ದಾಖಲಿಸಬಹುದು.
  • ಅಲ್ಪವಯಸ್ಕರು: ಅಲ್ಪವಯಸ್ಕರು ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಎಸಗಿದರೆ, ಅವರ ವಿರುದ್ಧ ಕೂಡ ನೀವು ದೂರು ಸಲ್ಲಿಸಬಹುದು. ಉದಾಹರಣೆಗೆ, ನಿಮ್ಮ ಕುಟುಂಬದ ಒಬ್ಬ ೧೬ ವರ್ಷದ ಹುಡುಗ ನಿಮ್ಮ ಮೇಲೆ ಹಿಂಸೆ ಎಸಗಿದರೆ, ಅವನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಬಹುದು.

ನ್ಯಾಯಾಲಯಕ್ಕೆ ಹೋಗುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ, ನಿಮ್ಮ ಮೇಲೆ ಹಿಂಸೆ ಮಾಡಿರುವ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿರಬೇಕು, ಮತ್ತು ನೀವಿಬ್ಬರೂ ಒಂದೇ ಸೂರಿನಡಿ ವಾಸವಾಗಿದ್ದಿರಬೇಕು.

 

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡುವ ಸಮಯದ ಮಿತಿ

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡಲು ಯಾವುದೇ ನಿರ್ದಿಷ್ಟ ಸಮಯದ ಮಿತಿ ಇಲ್ಲ. ಆದರೆ, ಹಿಂಸೆ ನಡೆದ ಕಾಲಾವಧಿಯಲ್ಲಿ ನೀವು ಕಿರುಕುಳ ನೀಡಿದ ವ್ಯಕ್ತಿಯ ಜೊತೆ ಕೌಟುಂಬಿಕ ಸಂಬಂಧದಲ್ಲಿದ್ದೀರಿ ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ. ಆದಾಗ್ಯೂ, ದೂರು ನೀಡಲು ತಡವಾಗಿದ್ದಲ್ಲಿ, ಅದರ ಕಾರಣಗಳನ್ನು ವಿವರಿಸಬೇಕಾಗಿ ನ್ಯಾಯಾಲಯವು ನಿಮಗೆ ಕೇಳಬಹುದು.

ಕೆಳಗಿನ ಸಂದರ್ಭಗಳಲ್ಲಿ ನೀವು ಕೌಟುಂಬಿಕ ಹಿಂಸೆಯ ದೂರನ್ನು ನೀಡಬಹುದು:

೧. ೨೦೦೫ರ ಮುಂಚೆ ನಡೆದ ಘಟನೆಗಳ ವಿರುದ್ಧ ದೂರು ನೀಡುವುದು:

ಕೌಟುಂಬಿಕ ಹಿಂಸೆ ಕಾನೂನು ೨೦೦೫ರಲ್ಲಿ ಜಾರಿಗೆ ಬಂದಿದ್ದರೂ ಕೂಡ, ೨೦೦೫ರ ಹಿಂದೆ ನಡೆದ ಹಿಂಸಾತ್ಮಕ ಘಟನೆಗಳ ವಿರುದ್ಧವೂ ಕೂಡ ರಕ್ಷಣೆ/ಪರಿಹಾರದ ಅರ್ಜಿ ಸಲ್ಲಿಸಲು ಕಾನೂನು ಅನುವು ಮಾಡಿಕೊಟ್ಟಿದೆ.

ನೀವು ಮಹಿಳೆಯಾಗಿದ್ದು, ೨೦೦೫ರ ಹಿಂದೆ ಹಿಂಸೆಗೆ ಒಳಗಾಗಿದ್ದಲ್ಲಿ, ಕಾನೂನಿನಡಿ ರಕ್ಷಣೆಗೆ ನೀವು ಅರ್ಹರಿದ್ದೀರಿ. ಈ ನಿಟ್ಟಿನಲ್ಲಿ, ನ್ಯಾಯಾಲಯದಲ್ಲಿ ನೀವು ಪ್ರಕರಣವನ್ನು ಹೂಡಬಹುದು. ಉದಾಹರಣೆಗೆ, ಸೀತಾ ಎಂಬ ಮಹಿಳೆ ೨೦೦೧ರಲ್ಲಿ ತಮ್ಮ ಅತ್ತೆಯಿಂದ ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದು, ಕೌಟುಂಬಿಕ ಹಿಂಸೆಯ ಕಾನೂನು ಅವರ ಮೇಲೆ ಹಿಂಸೆ ನಡೆದ ಮೇಲೆ ಜಾರಿಗೆ ಬಂದಿದ್ದರೂ ಕೂಡ, ಅವರು ನ್ಯಾಯಾಲಯಕ್ಕೆ ಹೋಗಿ ಪ್ರಕರಣ ಹೂಡುವ ಅರ್ಹತೆಯನ್ನು ಹೊಂದಿದ್ದಾರೆ.

೨. ವಿಚ್ಛೇದನದ ನಂತರ ದೂರು ನೀಡುವುದು:

ನೀವು ವಿಚ್ಛೇದನದ ನಂತರವೂ ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸಬಹುದು. ಉದಾಹರಣೆಗೆ, ಸೀಮಾ 2012 ರಲ್ಲಿ ಮದುವೆಯಾದರು. ತದನಂತರ, ಎರಡು ವರ್ಷಗಳ ಕಾಲ ಅವರ ಗಂಡನಿಂದ ಶಾರೀರಿಕ ಹಿಂಸೆಗೆ ಬಲಿಯಾದರು. ೨೦೧೪ರಲ್ಲಿ ಅವರು ತಮ್ಮ ಗಂಡಿಂದ ವಿಚ್ಛೇದನ ಪಡೆದರು. ೨೦೧೪ರ ನಂತರ ಅವರ ಮಾಜಿ ಗಂಡನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸುವ ಹಕ್ಕು ಸೀಮಾರಿಗೆ ಇದೆ. ಯಾಕೆಂದರೆ, ಹಿಂಸೆ ನಡೆದ ಸಮಯದಲ್ಲಿ, ಅವರು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ (ಗಂಡನ) ಜೊತೆ ಕೌಟುಂಬಿಕ ಸಂಬಂಧದಲ್ಲಿ ಇದ್ದರು.

 

ಡಿ.ಐ.ಆರ್. ಎಂದರೇನು?

ಒಬ್ಬ ಮಹಿಳೆಯಿಂದ ಕೌಟುಂಬಿಕ ಹಿಂಸೆಯ ದೂರು ಸಿಕ್ಕ ತಕ್ಷಣ ದಾಖಲಿಸುವ ವರದಿಯನ್ನು ಡಿ.ಐ.ಆರ್. ಎನ್ನುತ್ತಾರೆ. ಈ ವರದಿಯನ್ನು ರಕ್ಷಣಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರು ದಾಖಲಿಸುತ್ತಾರೆ. ಡಿ.ಐ.ಆರ್.ನಲ್ಲಿ ಸಂತ್ರಸ್ತೆಯ ಹೆಸರು, ವಯಸ್ಸು, ಕಿರುಕುಳ ಕೊಟ್ಟವರ ವಿವರಗಳು, ಹಿಂಸಾತ್ಮಕ ಘಟನೆಯ ವಿವರಗಳು, ಇತ್ಯಾದಿ ಮಾಹಿತಿಗಳು ಇರುತ್ತವೆ. ಡಿ.ಐ.ಆರ್.ಅನ್ನು ದಾಖಲಿಸಲು ಕೆಳಗಿನ ಅಧಿಕಾರಿಗಳನ್ನು ಭೇಟಿ ನೀಡಿ:

ರಕ್ಷಣಾಧಿಕಾರಿಗಳು:

ದೂರು ಸಿಕ್ಕ ನಂತರ ಡಿ.ಐ.ಆರ್.ಅನ್ನು ದಾಖಲಿಸಿ, ನಿಮ್ಮ ಕಾನೂನಾತ್ಮಕ ಹಕ್ಕುಗಳನ್ನು ನಿಮಗೆ ಪರಿಚಯಿಸುವುದು ರಕ್ಷಣಾಧಿಕಾರಿಗಳ ಜವಾಬ್ದಾರಿ. ನಿಮ್ಮ ಹತ್ತಿರ ಇಟ್ಟುಕೊಳ್ಳಲು ನಿಮಗೆ ಡಿ.ಐ.ಆರ್.ನ ಉಚಿತ ಪ್ರತಿಯನ್ನು ನೀಡಲಾಗುತ್ತದೆ. ಇದಾದಮೇಲೆ, ಡಿ.ಐ.ಆರ್. ಮತ್ತು ಸಂಬಂಧಿತ ಅರ್ಜಿಯನ್ನು ಪ್ರಕರಣವನ್ನು ಹೂಡಲು ನ್ಯಾಯಾಲಯಕ್ಕೆ ಕಳಿಸಲಾಗುತ್ತದೆ. ಡಿ.ಐ.ಆರ್.ಅನ್ನು ಪೊಲೀಸ್ ಅಧಿಕಾರಿಗಳು ಮತ್ತು ಸೇವಾ ಕಾರ್ಯಕರ್ತರಿಗೆ ಕೂಡ ಕಳಿಸಲಾಗುತ್ತದೆ.

ಸೇವಾ ಕಾರ್ಯಕರ್ತರು:

ನಿಮ್ಮಿಂದ ದೂರು ಸಿಕ್ಕ ತಕ್ಷಣ ಡಿ.ಐ.ಆರ್.ಅನ್ನು ದಾಖಲಿಸಿ, ನಿಮ್ಮನ್ನು ರಕ್ಷಣಾಧಿಕಾರಿಗಳ ಬಳಿ, ಅಥವಾ ನ್ಯಾಯಾಲಯಕ್ಕೆ ಕಳಿಸಬೇಕಾದದ್ದು ಸೇವಾ ಕಾರ್ಯಕರ್ತರ ಕರ್ತವ್ಯ. ನಿಮಗೆ ಶಾರೀರಿಕ ನೋವು ಉಂಟಾಗಿದ್ದಲ್ಲಿ, ವೈದ್ಯಕೀಯ ತಪಾಸಣೆ ನಡೆಸಲು ಸಹಾಯ ಮಾಡಿ, ನಿಮ್ಮ ವರದಿಯನ್ನು ರಕ್ಷಣಾಧಿಕಾರಿಗಳಿಗೆ, ಅಥವಾ ಪೊಲೀಸ್ ಥಾಣೆ ಕಳಿಸುವುದು ಕೂಡ ಅವರ ಕರ್ತವ್ಯ. ನಿಮಗೆ ಕಿರುಕುಳ ನೀಡಿರುವ ವ್ಯಕ್ತಿಯಿಂದ ದೂರವಿರಲು ಅವರು ನಿಮಗೆ ಆಶ್ರಯ ಮನೆಗಳನ್ನು ಸಂಪರ್ಕಿಸಲು ಕೂಡ ಸಹಾಯ ಮಾಡುತ್ತಾರೆ.

ಪೊಲೀಸ್ ಅಧಿಕಾರಿಗಳು:

ರಕ್ಷಣಾಧಿಕಾರಿಗಳು, ಅಥವಾ ಸೇವಾ ಕಾರ್ಯಕರ್ತರು ನಿಮಗೆ ಸಿಗಲಿಲ್ಲವೆಂದಲ್ಲಿ, ಹತ್ತಿರದ ಪೊಲೀಸ್ ಠಾಣೆಯನ್ನು ನೀವು ಸಂಪರ್ಕಿಸಬಹುದು. ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಕೆಳಗಿನ ವರದಿಗಳನ್ನು ದಾಖಲಿಸಲು ಪೊಲೀಸ್ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ:

೧. ಎಫ್.ಐ.ಆರ್.:

ಎಫ್.ಐ.ಆರ್.ಅನ್ನು ದಾಖಲಿಸಿ ಅಪರಾಧಿಕ ಪ್ರಕರಣವನ್ನು ಕಿರುಕುಳ ಕೊಟ್ಟ ವ್ಯಕ್ತಿಯ ವಿರುದ್ಧ ಹೂಡಬಹುದು. ನಿಮಗೆ ಅಪರಾಧಿಕ ದೂರನ್ನು ದಾಖಲಿಸುವ ಇಚ್ಛೆ ಇದ್ದಲ್ಲಿ, ಪ್ರಕರಣದ ಯಾವ ಹಂತದಲ್ಲಾದರೂ ಎಫ್.ಐ.ಆರ್.ಅನ್ನು ದಾಖಲಿಸುವ ಆಯ್ಕೆಯನ್ನು ಪೊಲೀಸ್ ಅಧಿಕಾರಿಗಳು ನಿಮಗೆ ಕೊಡುತ್ತಾರೆ.

೨. ಡಿ.ಐ.ಆರ್.:

ನಿಮಗೆ ಅಪರಾಧಿಕ ದೂರನ್ನು ದಾಖಲಿಸುವ ಇಚ್ಛೆ ಇಲ್ಲದಿದ್ದಲ್ಲಿ, ರಕ್ಷಣಾಧಿಕಾರಿಗಳು ಕಳಿಸಿದ ಡಿ.ಐ.ಆರ್.ನಲ್ಲಿನ ವಿವರಣೆಗಳ ಪ್ರಕಾರ ನಿಮ್ಮ ಜೊತೆಯಾದ ಕೌಟುಂಬಿಕ ಹಿಂಸೆಯ ವಿವರಗಳನ್ನು ತಮ್ಮ ದಿನಚರಿಯ ಡೈರಿಯಲ್ಲಿ ನಮೂದಿಸಬೇಕಾಗುತ್ತದೆ. ಈ ಮಾಹಿತಿ ಅವರ ಬಳಿ ಇಲ್ಲದಿದ್ದಲ್ಲಿ, ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಡಿ.ಐ.ಆರ್.ಅನ್ನು ದಾಖಲಿಸಿ, ಅದರಲ್ಲಿರುವ ವಿವರಣೆಗಳ ಪ್ರಕಾರ ತಮ್ಮ ದಿನಚರಿಯ ಡೈರಿಯಲ್ಲಿ ವಿವರಗಳನ್ನು ನಮೂದಿಸುತ್ತಾರೆ.

ವೈದ್ಯಕೀಯ ಸೌಲಭ್ಯದ ಉಸ್ತುವಾರಿ ವ್ಯಕ್ತಿಗಳು:

ನೀವು ವೈದ್ಯಕೀಯ ಸೌಲಭ್ಯಕ್ಕೆ, ಡಿ.ಐ.ಆರ್.ಅನ್ನು ದಾಖಲಿಸದೆ ಭೇಟಿ ನೀಡಿದರೆ, ಆ ಸೌಲಭ್ಯದ ಉಸ್ತುವಾರಿ ಮುಖ್ಯಸ್ಥರು ಡಿ.ಐ.ಆರ್.ಅನ್ನು ದಾಖಲಿಸಿ, ರಕ್ಷಣಾಧಿಕಾರಿಗಳಿಗೆ ಅದನ್ನು ಕಳಿಸಬೇಕು.

ರಕ್ಷಣಾಧಿಕಾರಿಗಳ ಪಾತ್ರವೇನು?

ನೀವು ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸುವುದಾಗಿ ನಿರ್ಧರಿಸಿದ್ದಲ್ಲಿ, ರಕ್ಷಣಾಧಿಕಾರಿಗಳು ನಿಮ್ಮ ಮೊದಲ ಸಂಪರ್ಕ ಬಿಂದು ಆಗಿರುತ್ತಾರೆ. ನೀವು, ಅಥವಾ ನಿಮಗೆ ಗೊತ್ತಿರುವವರಿನ್ಯಾರಾದರೂ, ನಿಮ್ಮ ಜಿಲ್ಲೆಯ ಅಥವಾ ಹತ್ತಿರದ ಸ್ಥಳದ ರಕ್ಷಣಾಧಿಕಾರಿಗಳನ್ನು ಭೇಟಿ ನೀಡಿ, ಕರೆ ಮಾಡಿ, ಅಥವಾ ಪತ್ರದ ಮೂಲಕ, ಹಿಂಸೆಯ ದೂರನ್ನು ದಾಖಲಿಸಿ, ರಕ್ಷಣೆಯ ಮನವಿ ಮಾಡಬಹುದು. ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ನೀವು:

  • ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಕೇಳಿಕೊಳ್ಳಬಹುದು.
  • ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೋಗಬಹುದು ಅಥವಾ ಕರೆ ಮಾಡಬಹುದು
  • ರಾಷ್ಟ್ರೀಯ/ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿ.
  • ಸರ್ಕಾರೇತರ ಸಂಸ್ಥೆಗಳು ಅಥವಾ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಿ.

ನಿಮ್ಮ ದೂರನ್ನು ರಕ್ಷಣಾಧಿಕಾರಿಗಳು ದಾಖಲಿಸುತ್ತಾರೆ. ನಿಮ್ಮ ಬಳಿ ಇಟ್ಟುಕೊಳ್ಳಲು ದೂರಿನ ಉಚಿತ ಪ್ರತಿಯನ್ನು ನೀವು ಅವರಿಂದ ಪಡೆಯಬಹುದು. ರಕ್ಷಣಾಧಿಕಾರಿಗಳು ಕೆಳಗಿನಂತೆ ನಿಮಗೆ ಸಹಾಯ ಮಾಡುತ್ತಾರೆ:

೧. ದೂರು ದಾಖಲಿಸುವುದು:

ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿವರಗಳು, ಸಂತ್ರಸ್ತೆಯ ವಿವರಗಳು, ಇತ್ಯಾದಿ ವಿವರಣೆಗಳುಳ್ಳ, ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ದಾಖಲಿಸಲಾಗುವ “ಡಿ.ಐ.ಆರ್.” ಎಂಬ ಒಂದು ವಿಶೇಷ ವರದಿಯನ್ನು ದಾಖಲಿಸಲು ರಕ್ಷಣಾಧಿಕಾರಿಗಳು ನಿಮ್ಮ ಸಹಾಯ ಮಾಡುತ್ತಾರೆ. ನ್ಯಾಯಾಲಯದಲ್ಲಿ ನೇರವಾಗಿ ದೂರು ಸಲ್ಲಿಸಿ, ಕಾನೂನು ನೆರವು ಪಡೆಯುವಲ್ಲಿಯೂ ಸಹ ಅವರು ನಿಮ್ಮ ಸಹಾಯ ಮಾಡಬಲ್ಲರು.

೨. ಪೊಲೀಸರಿಗೆ ಮಾಹಿತಿ ನೀಡುವುದು:

ನೀವು ಹಿಂಸೆಗೆ ಒಳಗಾದ ಜಾಗದ ಪೊಲೀಸ್ ಠಾಣೆಗೆ, ಡಿ.ಐ.ಆರ್. ಮತ್ತು ನಿಮ್ಮ ವೈದ್ಯಕೀಯ ವರದಿಯ ಪ್ರತಿಗಳನ್ನು (ನಿಮ್ಮ ವೈದ್ಯಕೀಯ ತಪಾಸಣೆ ಆದಲ್ಲಿ) ಕಳಿಸುತ್ತಾರೆ. ಇದಾದಮೇಲೆ, ನಿಮಗೆ ಕಿರುಕುಳ ಕೊಟ್ಟವರಿಂದ ಇನ್ನು ಮೇಲೆ ಹಿಂಸೆ ಮುಂದುವರೆಯದಂತೆ, ಪೊಲೀಸರು ನೋಡಿಕೊಳ್ಳುತ್ತಾರೆ.

೩. ತಕ್ಷಣದ ರಕ್ಷಣೆ ಮತ್ತು ಆಸರೆ ನೀಡುವುದು:

ಕೆಳಗಿನಂತೆ ರಕ್ಷಣಾಧಿಕಾರಿಗಳು ನಿಮ್ಮ ಸಹಾಯ ಮಾಡಬಲ್ಲರು:

  • ನಿಮ್ಮ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಮತ್ತು ನ್ಯಾಯಾಲಯದಿಂದ ನೀವು ಪಡೆಯಬಯಸುವ ಆದೇಶಗಳುಳ್ಳ “ರಕ್ಷಣಾ ಉಪಾಯವನ್ನು” ತಯಾರಿಸುವುದು
  • ನಿಮಗೆ/ನಿಮ್ಮ ಮಗುವಿಗೆ ಶಾರೀರಿಕವಾಗಿ ಪೆಟ್ಟು ಬಿದ್ದಲ್ಲಿ, ಯಾವುದೇ ವೈದ್ಯಕೀಯ ಸೌಲಭ್ಯದಿಂದ ನಿಮಗೆ ವೈದ್ಯಕೀಯ ನೆರವನ್ನು ಕಲ್ಪಿಸಿಕೊಡುವುದು
  • ಕಾನೂನು ನೆರವು, ಸಮಾಲೋಚನೆ, ವೈದ್ಯಕೀಯ ಸೌಲಭ್ಯಗಳು, ಆಶ್ರಯ ಮನೆ, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸೇವಾ ಕಾರ್ಯಕರ್ತರನ್ನು ನಿಮಗೆ ಪರಿಚಯಿಸುವುದು

೪. ನಿಮ್ಮ ಕಾನೂನಾತ್ಮಕ ಹಕ್ಕುಗಳ ಬಗ್ಗೆ ನಿಮಗೆ ಮಾಹಿತಿ ನೀಡುವುದು:

ನಿಮ್ಮ ಜೊತೆ ಏನಾಗಿದೆ ಎಂದು ಸ್ಪಷ್ಟವಾಗಿ ನೀವು ತಿಳಿದುಕೊಳ್ಳಲೆಂದು ಬೇರೆ-ಬೇರೆ ರೀತಿಗಳ ಕೌಟುಂಬಿಕ ಹಿಂಸೆಗಳ ಬಗ್ಗೆ ನಿಮಗೆ ತಿಳಿಹೇಳುತ್ತಾರೆ. ಇದನ್ನು ಡಿ.ಐ.ಆರ್.ನಲ್ಲಿ ದಾಖಲಿಸಲಾಗುತ್ತದೆ. ಇದಾದಮೇಲೆ, ದೂರು ನೀಡಿದ ಬಳಿಕ ನೀವು ಕಾನೂನಿನಡಿ ಚಲಾಯಿಸಬಲ್ಲ ಹಕ್ಕುಗಳಾವುವು, ಮತ್ತು ನಿಮಗೆ ಸಿಗಬಲ್ಲ ಬೇರೆ-ಬೇರೆ ಪರಿಹಾರಗಳಾವುವು ಎಂಬುದನ್ನು ತಿಳಿಹೇಳುತ್ತಾರೆ.

೫. ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ನಿಮಗೆ ಬೆಂಬಲ ನೀಡುವುದು:

ರಕ್ಷಣಾಧಿಕಾರಿಗಳು:

  • ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಪಡೆಯುವಲ್ಲಿ ನಿಮ್ಮ ಸಹಾಯ ಮಾಡಬಲ್ಲರು
  • ನ್ಯಾಯಾಲಯದ ಪ್ರಕ್ರಿಯೆಯ ಸಂದರ್ಭದಲ್ಲಿ ನಿಮಗೆ/ನಿಮ್ಮ ಮಗುವಿಗೆ ಕಿರುಕುಳ ಕೊಟ್ಟವರಿಂದ ಒತ್ತಡ/ಹಿಂಸೆ ಆಗಲಾರದಂತೆ ನೋಡಿಕೊಳ್ಳಬಲ್ಲರು

ಕೌಟುಂಬಿಕ ಹಿಂಸೆಯ ಕಾರಣ ನ್ಯಾಯಾಲಯಕ್ಕೆ ಹೇಗೆ ಹೋಗಬಹುದು?

ನೀವು ಕೌಟುಂಬಿಕ ಹಿಂಸೆಯನ್ನು ಅನುಭವಿಸಿದ್ದಲ್ಲಿ, ತಕ್ಷಣದ ಸಹಾಯ ಮತ್ತು ರಕ್ಷಣೆಗಾಗಿ ನ್ಯಾಯಾಲಯದಲ್ಲಿ (ಸಿವಿಲ್ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ಅಥವಾ ಸತ್ರ ನ್ಯಾಯಾಲಯ) ಅರ್ಜಿ ಸಲ್ಲಿಸಬಹುದು. ಇದನ್ನು ಮಾಡಲು ವಕೀಲರ ನೆರವನ್ನು ಪಡೆಯಿರಿ. ನಿಮ್ಮ ಬಳಿ ವಕೀಲರಿಲ್ಲದಿದ್ದರೆ, ರಕ್ಷಣಾಧಿಕಾರಿಗಳನ್ನು, ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ – ಅವರು ನಿಮಗೆ ಕಾನೂನು ನೆರವು ಸೇವೆಯ ಸಂಪರ್ಕ ದೊರಕಿಸಿಕೊಡುತ್ತಾರೆ.

ಕಾನೂನಿನಡಿ ನಿಮ್ಮ ಪ್ರಕರಣ ಕೌಟುಂಬಿಕ ಹಿಂಸೆಯದ್ದಾಗಿದೆಯೋ ಇಲ್ಲವೋ ಎಂದು ನಿರ್ಧರಿಸಲು ನ್ಯಾಯಾಲಯ ಕೆಳಗಿನ ಅಂಶಗಳನ್ನು ಪರಿಗಣಿಸುತ್ತದೆ:

  • ನೀವು ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆಯಾಗಿದ್ದೀರಿ.
  • ಹಿಂಸೆ ನಡೆದಾಗ, ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿತ್ತು
  • ಕಿರುಕುಳ ಕೊಟ್ಟ ವ್ಯಕತಿಯ ಜೊತೆ ನೀವು ಒಂದೇ ಮನೆಯಲ್ಲಿ ಹಿಂದೆ ವಾಸವಾಗಿದ್ದಿರಿ/ ಇನ್ನೂ ವಾಸಿಸುತ್ತಿದ್ದೀರಿ

ಅರ್ಜಿ ಸಲ್ಲಿಸಿದ ೩ ದಿನಗಳೊಳಗೆ, ರಕ್ಷಣಾಧಿಕಾರಿಗಳ ನೆರವಿನಿಂದ, ನಿಮಗೆ ಕಿರುಕುಳ ಕೊಟ್ಟವರಿಗೆ ಸೂಚನೆ ಕಳಿಸಲಾಗುತ್ತದೆ ಮತ್ತು ನಿಮ್ಮ ಪ್ರಕರಣವನ್ನು ದಾಖಲಿಸಲಾಗುತ್ತದೆ. ನಿಮಗೆ ರಕ್ಷಣೆ, ಧನ ಸಹಾಯ, ಅಥವಾ ಇನ್ನಿತರೇ ಸಹಾಯಗಳನ್ನು, ತಾತ್ಕಾಲಿಕ ಆದೇಶಗಳ ಮೂಲಕ ನ್ಯಾಯಾಲಯವು ದೊರಕಿಸಿಕೊಡುತ್ತದೆ.

ನ್ಯಾಯಾಲಯದ ಆದೇಶಗಳು:

ಒಮ್ಮೆ ನಿಮ್ಮ ಪ್ರಕರಣ ಕೌಟುಂಬಿಕ ಹಿಂಸೆಯದ್ದು ಎಂದು ನ್ಯಾಯಾಲಯಕ್ಕೆ ಖಾತರಿ ಆದಾಗ, ನಿಮ್ಮ ವಕೀಲರು ನ್ಯಾಯಾಲಯಕ್ಕೆ ಕೆಳಗಿನ ಮನವಿಗಳನ್ನು ಮಾಡಬಹುದು:

  • ಹಿಂಸೆಯ ವಿರುದ್ಧ ಕಿರುಕುಳ ಕೊಟ್ಟವರಿಂದ ರಕ್ಷಣೆ. ಇದಕ್ಕೆ ರಕ್ಷಣಾ ಆದೇಶ ಎನ್ನುತ್ತಾರೆ.
  • ನಿಮಗೆ ಮತ್ತು ನಿಮ್ಮ ಮಗುವಿಗೆ ಧನ ಸಹಾಯ. ಇದಕ್ಕೆ ಜೀವನೋಪಾಯದ ಆದೇಶ ಎನ್ನುತ್ತಾರೆ.
  • ನಿಮ್ಮ ಮನೆಯಲ್ಲಿ ವಾಸ ಮಾಡುವ ಆದೇಶ. ಇದಕ್ಕೆ ನಿವಾಸದ ಆದೇಶ ಎನ್ನುತ್ತಾರೆ.

ಕೌಟುಂಬಿಕ ಹಿಂಸೆ ಕಾನೂನಿನಡಿ ನಿವಾಸದ ಆದೇಶವೆಂದರೇನು?

ನಿಮ್ಮನ್ನು ಕಿರುಕುಳ ಕೊಡುತ್ತಿರುವವರು ಮನೆಯಿಂದಾಚೆ ತಳ್ಳುತ್ತಿದ್ದಲ್ಲಿ, ಅಥವಾ ನಿಮಗೆ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂದು ಅನಿಸಿದ್ದಲ್ಲಿ, ನಿಮ್ಮ ವಕೀಲರು ಅಥವಾ ರಕ್ಷಣಾಧಿಕಾರಿಗಳ ಸಹಾಯದಿಂದ ನ್ಯಾಯಾಲಯದ ಸಹಾಯ ಪಡೆಯಬಹುದು. ನಿವಾಸದ ಆದೇಶ ಕೆಳಗಿನಂತೆ ನಿಮಗೆ ಅನುಕೂಲವಾಗುತ್ತದೆ:

೧. ಮನೆಯಲ್ಲಿ ವಾಸ ಮಾಡುವುದು:

ನಿವಾಸದ ಆದೇಶದ ಮೇರೆಗೆ, ಕಿರುಕುಳ ಕೊಡುತ್ತಿರುವವರು ನಿಮ್ಮನ್ನು ಮನೆಯಿಂದ ಆಚೆ ತಳ್ಳುವಂತಿಲ್ಲ, ಅಥವಾ ಆಚೆ ಹೋಗು ಅಂತ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿಸಬಹುದು. ನೀವು ದಂಪತಿಗಳಾಗಿ (ಗಂಡ-ಹೆಂಡತಿ, ಅಥವಾ ಲಿವ್-ಇನ್ ಸಂಗಾತಿಗಳಾಗಿ) ಯಾವ ಮನೆಯಲ್ಲಿ ವಾಸವಾಗಿದ್ದಿರೋ, ಆ ಮನೆಯಲ್ಲಿ ವಾಸಿಸುವ ಹಕ್ಕು, ಕೆಳಗಿನ ಸಂದರ್ಭಗಳಲ್ಲೂ ನಿಮಗಿದೆ:

  • ಆ ಮನೆಯ ಮೇಲೆ ನಿಮಗೆ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ
  • ಕಿರುಕುಳ ಕೊಟ್ಟವರು ಆ ಮನೆಯಲ್ಲಿ ಇನ್ನು ವಾಸವಾಗಿಲ್ಲದಿದ್ದರೂ
  • ಕಿರುಕುಳ ಕೊಟ್ಟವರಿಗೆ ಆ ಮನೆಯಲ್ಲಿ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ

೨. ಕಿರುಕುಳ ಕೊಟ್ಟವರಿಂದ ನಿಮ್ಮನ್ನು ದೂರವಿಡುವುದು:

ಕಿರುಕುಳ ಕೊಟ್ಟವರಿಗೆ ಕೆಳಗಿನ ಆದೇಶಗಳನ್ನು ನ್ಯಾಯಾಲಯ ಕೊಡಬಹುದು:

  • ಮನೆಯನ್ನು ಬಿಟ್ಟು ಹೋಗುವುದಾಗಿ. ಈ ಆದೇಶ ಕಿರುಕುಳ ಕೊಟ್ಟವರ ನೆಂಟರನ್ನುದ್ದೇಶಿಸಿ ಕೂಡ ಕೊಡಬಹುದಾಗಿದೆ. ಆದರೆ, ಕೇವಲ ಪುರುಷರ ವಿರುದ್ಧ ಈ ಆದೇಶವನ್ನು ಹೊರಡಿಸಬಹುದು.
  • ಮನೆಯಲ್ಲಿ ಕಾಲಿಡದಂತೆ ಆದೇಶ ಹೊರಡಿಸುವುದು

೩. ನಿಮಗೆ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಿಕೊಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಸೌಲಭ್ಯಗಳನ್ನು ನಿಮಗೆ ಒದಗಿಸಲಿ ಎಂದು ಆದೇಶ ಹೊರಡಿಸುವುದು:

  • ಆರಾಮದಾಯಕ ಮತ್ತು ಗೌರವಾಂವಿತ ವಸತಿಗೆ ಬೇಕಾದ ಎಲ್ಲ ಅಗತ್ಯವಾದ ಸೌಲಭ್ಯಗಳುಳ್ಳ ಮನೆಯ ಒಂದು ಭಾಗ ನಿಮಗೆ ಕೊಟ್ಟು, ಆ ಭಾಗವನ್ನು ಅವರು ಪ್ರವೇಶಿಸುವಂತಿಲ್ಲ ಎಂದು ಆದೇಶಿಸುವುದು
  • ನಿಮಗೋಸ್ಕರ ಬೇರೆ ಮನೆ ಖರೀದಿಸಿ, ಅಥವಾ ಬಾಡಿಗೆಗೆ ಧನ ಸಹಾಯ ಮಾಡಬೇಕೆಂಬ ಆದೇಶ.

೪. ನಿಮ್ಮ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳನ್ನು ಕಾಪಾಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಕೆಲಸಗಳನ್ನು ಮಾಡಬಾರದೆಂದು ನ್ಯಾಯಾಲಯ ಆದೇಶಿಸಬಹುದು:

  • ಮನೆಯನ್ನು ಮಾರುವುದು, ಗುತ್ತಿಗೆಗೆ ಕೊಡುವುದು, ಅಥವಾ ಅಡುವು ಇಡುವುದು.
  • ಜಂಟಿ-ಮಾಲೀಕತ್ವದಲ್ಲಿನ ಮನೆಯ ಮೇಲಿನ ಹಕ್ಕುಗಳನ್ನು ತ್ಯಜಿಸುವುದು. ಉದಾಹರಣೆಗೆ, ಆ ಮನೆಯನ್ನು ಮಾರುವುದು.

ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗೆ ಬೇಕಾದ ಬೇರೆ ಯಾವ ಶರತ್ತುಗಳನ್ನಾದರೂ ಪಾಲಿಸಬೇಕೆಂದು ನ್ಯಾಯಾಲಯವು ಆದೇಶಿಸಬಹುದು.