ಎಲ್ಲ ಕೌಟುಂಬಿಕ ಪ್ರಕರಣಗಳಲ್ಲಿ ನ್ಯಾಯಾಲಯವು ದಂಪತಿಗಳ ನಡುವೆ ರಾಜಿ ಮಾಡಿಸಲು ಯತ್ನಿಸುತ್ತದೆ.
ರಾಜಿಯಾಗುವ ಪರಿಣಾಮಗಳು:
ರಾಜಿಯಾದ ನಂತರ ಈ ಎರಡು ಪರಿಣಾಮಗಳು ಸಂಭವಿಸುವವು:
- ನೀವು ಮತ್ತು ನಿಮ್ಮ ಸಂಗಾತಿ ಒಂದಾಗಿ ನಿಮ್ಮ ವೈವಾಹಿಕ ಸಂಬಂಧವನ್ನು ಮುಂದುವರೆಸಬಹುದು, ಅಥವಾ
- ನೀವು ಮತ್ತು ನಿಮ್ಮ ಸಂಗಾತಿ ಶಾಂತಿಯುತವಾಗಿ ನಿಮ್ಮ ವಿವಾಹವನ್ನು ಅಂತ್ಯಗೊಳಿಸಿ ವಿಚ್ಛೇದನ ಪಡೆಯಬಹುದು.
ಭಾರತದಲ್ಲಿ ರಾಜಿಯಾಗುವ ಮೂರು ವಿಧಾನಗಳಿವೆ:
ಮಧ್ಯಸ್ಥಿಕೆ:
ಸಂಘರ್ಷಗಳ ಕಾರಣಗಳನ್ನು ಗುರುತಿಸಿ, ಅವುಗಳನ್ನು ಪರಿಹರಿಸಲು ತಂತ್ರಗಳನ್ನು ರೂಪಿಸುವುದಕ್ಕೆ ಮಧ್ಯಸ್ಥಿಕೆ ಮಾಡುವುದು ಎನ್ನುತ್ತಾರೆ.ಈ ಪ್ರಕ್ರಿಯೆಯನ್ನು ಮಧ್ಯಸ್ಥಿಕೆದಾರರು ಮಾಡುತ್ತಾರೆ. ಈ ಮಧ್ಯಸ್ಥಿಕೆದಾರರನ್ನು ವಿಚ್ಛೇದನಾ ಪ್ರಕರಣದ ಸಮಯದಲ್ಲಿ ನ್ಯಾಯಾಲಯವು ನೇಮಿಸುತ್ತದೆ, ಅಥವಾ ಕೋರ್ಟಿನ ಬಳಿ ಇರುವ ಮಧ್ಯಸ್ಥಿಕೆ ಕೇಂದ್ರದಿಂದ ಕರೆಸಿರುತ್ತಾರೆ.
ಸಂಧಾನ:
ಸಂಧಾನದ ಪ್ರಕ್ರಿಯೆಯಲ್ಲಿ ಸಂಧಾನಕಾರರನ್ನು ನೇಮಿಸಲಾಗುತ್ತದೆ. ಚರ್ಚೆಗಳ ಸಂದರ್ಭದಲ್ಲಿ ಅವರು ಸೂಚಿಸಿದ ಪರಿಹಾರಗಳನ್ನು ಎರಡೂ ಪಕ್ಷಗಳು ಒಪ್ಪುವಂತೆ ಒಡಂಬಡಿಸುವುದೇ ಈ ಸಂಧಾನಕಾರರ ಪಾತ್ರ.
ಕುಟುಂಬ ನ್ಯಾಯಾಲಯಗಳಲ್ಲಿ ಸಲಹೆಗಾರರು:
ವಿಚ್ಛೇದನ ಅಥವಾ ಇನ್ನಿತರ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಸಲಹೆ, ಸಹಾಯ, ಅಥವಾ ಪ್ರೋತ್ಸಾಹನೆ ನೀಡುವುದು ಸಲಹೆಗಾರರ ಕರ್ತವ್ಯ. ಕುಟುಂಬ ನ್ಯಾಯಾಲಯದಿಂದ ನೇಮಿಸಲಾದ ಸಲಹೆಗಾರರು ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರ ಹುಡುಕಲು ಯತ್ನಿಸುತ್ತಾರೆ:
- ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಪರಸ್ಪರ ಹೊಂದಾಣಿಕೆ ಯಾಕೆ ಆಗುತ್ತಿಲ್ಲ, ಅಥವಾ ಹೊಂದಾಣಿಕೆ ಆಗುತ್ತದೋ ಇಲ್ಲವೋ.
- ವೈದ್ಯರ ಮೂಲಕ ಮಾನಸಿಕ ಅಥವಾ ಮನೋವೈಜ್ನ್ಯಾನಿಕ ನೆರವಿನಿಂದ ಈ ಅಸಾಮರಸ್ಯವನ್ನು ಪರಿಹರಿಸಬಹುದೋ ಇಲ್ಲವೋ.
- ನೀವು ಮತ್ತು ನಿಮ್ಮ ಸಂಗಾತಿ ಬೇರೆಯವರ ಪ್ರಭಾವದಿಂದ ವಿಚ್ಛೇದನಕ್ಕೆ ಮನವಿ ಸಲ್ಲಿಸುತ್ತಿದ್ದೀರೋ ಹೇಗೆ
- ನೀವು ಮತ್ತು ನಿಮ್ಮ ಸಂಗಾತಿ ಸ್ವತಂತ್ರವಾಗಿ ಮತ್ತು ಸ್ವೇಚ್ಛೆಯಿಂದ ವಿಚ್ಛೇದನದ ನಿರ್ಧಾರ ತೆಗೆದುಕೊಳ್ಳುತ್ತಿದ್ದೀರೋ ಇಲ್ಲವೋ