ದತ್ತು ಸ್ವೀಕೃತಿಯ ಪರಿಣಾಮಗಳು

ನೀವು ಯಾವುದೇ ಕಾನೂನಿನಡಿಯಲ್ಲಿ ದತ್ತು ಪಡೆದಿರಲಿ, ಅದರ ಪರಿಣಾಮಗಳು ಹೀಗಿವೆ:

  • ದತ್ತು ತಂದೆ-ತಾಯಿಯ ಮಗು: ಎಲ್ಲ ಉದ್ದೇಶಗಳಿಗೆ, ಮಗು ದತ್ತು ತಂದೆ-ತಾಯಿಯರದ್ದು, ಹಾಗು ದತ್ತು ತಂದೆ-ತಾಯಿಯರು ಮಗುವಿನ ಜೈವಿಕ ತಂದೆ-ತಾಯಿಯರಂತೆ ಕಾನೂನು ಪರಿಗಣಿಸುತ್ತದೆ.
  • ಮಗುವಿನ ಕೌಟುಂಬಿಕ ಸಂಪರ್ಕಗಳು: ಮಗುವಿನ ಹುಟ್ಟು ಕುಟುಂಬದ ನೆಂಟರ ಜೊತೆಗಿನ ಸಂಪರ್ಕಗಳು ಮುರಿದು, ದತ್ತು ಕುಟುಂಬದ ಸದಸ್ಯರೊಡನೆ ಸಂಪರ್ಕಗಳು ಗುರುತಿಸಲಾಗುತ್ತವೆ. ಆದರೆ, ಹಿಂದೂ ಕಾನೂನಿನ ಪ್ರಕಾರ, ದತ್ತು ಕೊಟ್ಟ ವ್ಯಕಿ, ತನ್ನ ಹುಟ್ಟು ಕುಟುಂಬದ ಯಾವುದೇ ನಿಷೇಧಿತ ಸದಸ್ಯರನ್ನು ಮದುವೆಯಾಗಲಾರರು.
  • ಮಗುವಿನ ಆಸ್ತಿ ಹಕ್ಕು: ದತ್ತು ಕೊಡುವುದಕ್ಕೆ ಮುನ್ನ ಆ ವ್ಯಕ್ತಿಯ ಹೆಸರಿನ ಮೇಲಿದ್ದ ಎಲ್ಲ ಆಸ್ತಿ ಅವರದ್ದೇ ಆಗಿರುತ್ತದೆ, ಆ ಆಸ್ತಿಯ ಜೊತೆಗಿದ್ದ ಕಟ್ಟುಪಾಡುಗಳ ಸಹಿತ (ಜೈವಿಕ ಕುಟುಂಬದ ಸದಸ್ಯರ ಆರೈಕೆಯ ಕರ್ತವ್ಯ ಸೇರಿದಂತೆ).

ಆದಾಗ್ಯೂ, ಹಿಂದೂ ದತ್ತು ಸ್ವೀಕಾರ ಕಾನೂನಿನ ಪ್ರಕಾರ, ಮಗುವಿನ ದತ್ತು ಸ್ವೀಕೃತಿ ಆದೇಶ ಹೊರಡಿಸಿದ ದಿನದಿಂದ:

  • ಮಗುವಿನ ಆಸ್ತಿ ಹಕ್ಕು: ಮಗುವಿನ ದತ್ತು ತೆಗೆದುಕೊಳ್ಳುವ ಮುಂಚೆ ಯಾರಿಗೆ ಆಸ್ತಿ ಹಾಕು ಇತ್ತೋ, ಅವರಿಂದ ಆ ದತ್ತುಕ ವ್ಯಕ್ತಿ ಆಸ್ತಿ ಪಾಲು ಕೇಳಲಾರರು. ಹಾಗು, ದತ್ತು ತಂದೆ-ತಾಯಿಯರು ತಮ್ಮ ಉಯಿಲಿನ ಮುಖಾಂತರ ಅಥವಾ ಇನ್ನಿತರ ಕಾನೂನುಗಳ ಸಹಾಯದಿಂದ ತಮ್ಮ ಆಸ್ತಿಯ ಒಡೆತನ ಬೇರೆಯವರ ಹೆಸರಲ್ಲಿ ಕೂಡ ವರ್ಗಾವಣೆ ಮಾಡಬಹುದು.
  • ಮಾನ್ಯ ದತ್ತು ಸ್ವೀಕೃತಿಯನ್ನು ರದ್ದುಪಡಿಸುವುದು: ದತ್ತು ತಂದೆ-ತಾಯಿ ಅಥವಾ ಬೇರೋರ್ವ ವ್ಯಕ್ತಿ ಮಾನ್ಯ ದತ್ತು ಸ್ವೀಕೃತಿಯನ್ನು ರದ್ದು ಪಡಿಸಲು ಸಾಧ್ಯವಿಲ್ಲ. ಒಮ್ಮೆ ದತ್ತು ಪಡೆದ ಮೇಲೆ ಆ ಮಗು ದತ್ತುಕ ಕುಟುಂಬವನ್ನು ತಿರಸ್ಕರಿಸಿ, ಜೈವಿಕ ಕುಟುಂಬಕ್ಕೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ.

ಗಂಡ ಜೀವನಾಂಶ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ವಿಚ್ಛೇದನ

ಗಂಡ ಜೀವನಾಂಶ ಕೊಟ್ಟಿಲ್ಲ ಎಂದಲ್ಲಿ ಮುಸ್ಲಿಂ ಕಾನೂನಿನಡಿ ವಿಚ್ಛೇದನದ ಅವಕಾಶವಿದೆ.

ನಿಮ್ಮ ಗಂಡ ಎರಡು ವರ್ಷಗಳ ಕಾಲ ನಿಮಗೆ ಜೀವನಾಂಶ ಕೊಟ್ಟಿಲ್ಲವೆಂದಲ್ಲಿ ನೀವು ಕೋರ್ಟಿಗೆ ವಿಚ್ಛೇದನದ ಅರ್ಜಿ ಸಲ್ಲಿಸಬಹುದು.

ತಾತ್ಕಾಲಿಕ ಜೀವನಾಂಶ

ಮಾಸಿಕವಾಗಿ, ನಿಮ್ಮ ಮಕ್ಕಳು/ ನೆಂಟರು ನಿಮಗೆ ತಾತ್ಕಾಲಿಕ ಜೀವನಾಂಶ ಕೊಡಬೇಕೆಂದು ನೀವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ನಿಮ್ಮ ಮಕ್ಕಳು/ನೆಂಟರಿಗೆ ನಿಮ್ಮ ಅರ್ಜಿಯ ಬಗ್ಗೆ ತಿಳಿಸಿದ ೯೦ ದಿನಗಳ ಒಳಗೆ ನಿಮಗೆ ತಾತ್ಕಾಲಿಕ ಜೀವನಾಂಶ ಸಿಗುವುದೋ ಇಲ್ಲವೋ ಎಂದು ನ್ಯಾಯಾಲಯವು ತೀರ್ಮಾನಿಸುತ್ತದೆ. ವಿಶೇಷ ಸಂದರ್ಭಗಳಲ್ಲಿ ಈ ಸಮಯಾವಧಿಯನ್ನು ಇನ್ನೂ ೩೦ ದಿನಗಳ ವರೆಗೆ ನ್ಯಾಯಾಲಯವು ಹೆಚ್ಚಿಸಬಹುದಾಗಿದೆ. ನಿಮಗೆ ಸಿಕ್ಕಬಹುದಾದ ಅಂತಿಮ ಜೀವನಾಂಶದ ಮೊತ್ತ ಇದಲ್ಲ. ನಿಮಗೆ ಯಾವುದೇ ಜೀವನಾಂಶ ಸಿಗುವುದಿಲ್ಲ ಎಂದೂ, ಅಥವಾ ಜೀವನಾಂಶದ ಮೊತ್ತವನ್ನು ಹೆಚ್ಚಿಸಬೇಕು ಅಥವಾ ಕಡಿಮೆ ಮಾಡಬೇಕು ಎಂದು ನ್ಯಾಯಾಲಯವು ಅಂತಿಮ ಆದೇಶದಲ್ಲಿ ನಿರ್ಧರಿಸಬಹುದು.

ಬಾಲ್ಯ ವಿವಾಹದಿಂದ ಹುಟ್ಟಿದ ಮಕ್ಕಳು

ಬಾಲ್ಯ ವಿವಾಹವು ರದ್ದುಗೊಂಡಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಕಾನೂನು, ಬಾಲ್ಯ ವಿವಾಹದಿಂದಾಗಿ ಹುಟ್ಟಿದ ಎಲ್ಲ ಮಕ್ಕಳನ್ನು ಧರ್ಮಜ ಮಕ್ಕಳನ್ನಾಗಿ ಪರಿಗಣಿಸುತ್ತದೆ.

ಮಕ್ಕಳ ಪಾಲನೆ-ಪೋಷಣೆ:

ಮಕ್ಕಳ ಪಾಲನೆ-ಪೋಷಣೆಯ ಹೊಣೆ ಯಾರದ್ದಾಗಿರಬೇಕು ಎಂಬುದನ್ನು ಜಿಲ್ಲಾ ನ್ಯಾಯಾಲಯವು ಮದುವೆ ರದ್ದು ಮಾಡುವ ಮನವಿಯನ್ನು ಕೇಳುವ ಸಮಯದಲ್ಲಿ ತೀರ್ಮಾನಿಸುತ್ತದೆ. ಈ ನಿರ್ಣಯವನ್ನು ಮಾಡುವ ಹೊತ್ತಿನಲ್ಲಿ ನ್ಯಾಯಾಲಯವು ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬಹುದು:

  • ನ್ಯಾಯಾಲಯವು ಪಾಲನೆ-ಪೋಷಣೆಯ ನಿರ್ಣಯವನ್ನು ಮಾಡುತ್ತಿರುವಾಗ ಅತಿಮುಖ್ಯವಾಗಿ ಮಗುವಿನ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡುತ್ತದೆ.
  • ಮಗುವಿನ ಯೋಗಕ್ಷೇಮಕ್ಕೆ ಸರಿ ಎನಿಸಿದರೆ ವಿರುದ್ಧ ಪಕ್ಷದವರಿಗೆ ಮಗುವನ್ನುಆಗಾಗ್ಗೆ ಭೇಟಿಯಾಗಲು ಅನುಮತಿ ನೀಡುತ್ತದೆ.
  • ಜಿಲ್ಲಾ ನ್ಯಾಯಾಲಯವು ಗಂಡನಿಗೆ, ಅಥವಾ ಅವನ ತಂದೆ-ತಾಯಿ/ಪೋಷಕರಿಗೆ (ಗಂಡ ಅಪ್ರಾಪ್ತ ವಯಸ್ಕನಿದ್ದಾಗ), ಅವನ ಹೆಂಡತಿಯಾದ ಹುಡುಗಿಗೆ ಜೀವನಾಂಶ ಕೊಡುವುದಾಗಿ ಆದೇಶಿಸಬಹುದು.

ಸಂಗಾತಿಯಿಂದ ನಂಬಿಕೆ ದ್ರೋಹ ಹಾಗು ಹಿಂದೂ ವಿವಾಹ ಕಾಯಿದೆ

ನಿಮ್ಮ ಸಂಗಾತಿಯು ನಿಮಗೆ ನಂಬಿಕೆ ದ್ರೋಹ ಬಗೆದಲ್ಲಿ ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ವಿವಾಹದ ಸನ್ನಿವೇಶದಲ್ಲಿ ನಂಬಿಕೆ ದ್ರೋಹವೆಂದರೆ ನಿಮ್ಮ ಸಂಗಾತಿಯು ಸ್ವಯಂ ಪ್ರೇರಿತವಾಗಿ ಬೇರೆಯವರ ಜೊತೆ ಅನೈತಿಕ ಲೈಂಗಿಕ ಸಂಬಂಧ ಬೆಳೆಸುವುದು ಎಂದರ್ಥ.

ಇದನ್ನು ವ್ಯಭಿಚಾರ ಎಂದೂ ಕರೆಯಬಹುದು. ಇದರಡಿ ನಿಮಗೆ ವಿಚ್ಛೇದನ ಬೇಕಾದಲ್ಲಿ, ನಿಮ್ಮ ಸಂಗಾತಿ ಹಾಗು ಬೇರೆಯವರ ನಡುವೆ ಸ್ವಯಂ ಪ್ರೇರಿತವಾಗಿ, ಲೈಂಗಿಕ ಸಂಭೋಗ ನಡೆದಿದೆ ಎಂದು ಕೋರ್ಟಿನೆದುರು ನೀವು ಸಾಬೀತುಪಡಿಸಬೇಕಾಗುತ್ತದೆ. ಕೆಲವೇ ದಿನಗಳ ಹಿಂದಿನವರೆಗೆ ವಿವಾಹೇತರ ಅನೈತಿಕ ಲೈಂಗಿಕ ಸಂಬಂಧ ಬೆಳೆಸುವುದು ಅಪರಾಧವಾಗಿತ್ತು.

ಆದರೆ ಈಗ, ಅದು ಕಾನೂನಿನಡಿಯಲ್ಲಿ ಅಪರಾಧವಲ್ಲ. ಇದಾಗ್ಯೂ ನೀವು ಈ ಕಾರಣಕ್ಕಾಗಿ ವಿಚ್ಛೇದನವನ್ನು ಪಡೆಯಬಹುದಾಗಿದೆ.

ಭಾರತದಾದ್ಯಂತವೂ ಕ್ರಿಶ್ಚಿಯನ್ ಮದುವೆಯ ಕಾರ್ಯವಿಧಾನವು ಒಂದೇ ತರಹವಿದೆಯೇ?

ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ ಕ್ರಿಶ್ಚಿಯನ್ ಮದುವೆಗಳಿಗೆ ಸಂಬಂದ್ಧಿಸಿದ್ದು, ಟ್ರಾವಂಕೋರ್-ಕೊಚಿನ್ ಮತ್ತು ಮಣಿಪುರ್ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲ ಕಡೆ ಅನ್ವಯವಾಗುತ್ತದೆ.

  • ಮಣಿಪುರದಲ್ಲಿ ಕ್ರಿಶ್ಚಿಯನ್ ಮದುವೆಗಳು ಸಾಂಪ್ರದಾಯಿಕ ನಿಯಮಗಳು ಮತ್ತು ವೈಯಕ್ತಿಕ ಕಾನೂನುಗಳ ಆಧಾರದ ಮೇಲೆ ನಡೆಯುತ್ತವೆ.
  • ಟ್ರಾವಂಕೋರ್-ಕೊಚಿನ್ ಪ್ರಸ್ತುತದಲ್ಲಿ ಕೇರಳ ಮತ್ತು ತಮಿಳು ನಾಡು ರಾಜ್ಯಗಳ ಭಾಗವಾಗಿದೆ. ಕೇರಳದ ಕೊಚಿನ್ ಪ್ರದೇಶದಲ್ಲಿ ಕ್ರಿಶ್ಚಿಯನ್ ಮದುವೆಗಳು ಕೊಚಿನ್ ಕ್ರಿಶ್ಚಿಯನ್ ನಾಗರಿಕ ವಿವಾಹ ಕಾಯಿದೆ, ೧೯೨೦ರ ಪ್ರಕಾರ ನಡೆಯುತ್ತವೆ. ಮಾಜಿ ರಾಜ್ಯದ ಟ್ರಾವಂಕೋರ್ ಪ್ರದೇಶ ಕೇರಳ ಹಾಗು ತಮಿಳು ನಾಡಿನ ದಕ್ಷಿಣ ಭಾಗದಲ್ಲಿ ವಿಸ್ತಾರಗೊಂಡಿದೆ. ಹೀಗಿರುವಾಗ, ತಮಿಳು ನಾಡು ಭಾರತೀಯ ಕ್ರಿಶ್ಚಿಯನ್ ವಿವಾಹ ಕಾನೂನನ್ನು ಅದರ ಟ್ರಾವಂಕೋರ್ ಭಾಗವನ್ನು ಸೇರಿಸಿ ಇಡೀ ರಾಜ್ಯಕ್ಕೆ ಅನ್ವಯಿಸಿದರೆ, ಕೇರಳ ಹಾಗೆ ಮಾಡಿಲ್ಲ. ಆದ್ದರಿಂದ ಕೇರಳದ ದಕ್ಷಿಣ ಭಾಗದಲ್ಲಿ (ಮಾಜಿ ಟ್ರಾವಂಕೋರ್) ಕ್ರಿಶ್ಚಿಯನ್ ಮದುವೆಗಳು ಬೇರೆ-ಬೇರೆ ಪಂಗಡಗಳ ಚರ್ಚುಗಳ ಆಂತರಿಕ ಕಾನೂನುಗಳನ್ನಾಧರಿಸಿ ನಡೆಯುತ್ತವೆ.

 

ಸಾಗರೋತ್ತರ ಭಾರತೀಯ ನಾಗರಿಕರು, ಅಥವಾ ಭಾರತದಲ್ಲಿ ನೆಲೆಸಿದ ವಿದೇಶಿಯರು ದತ್ತು ಸ್ವೀಕಾರ ಮಾಡುವ ಪ್ರಕ್ರಿಯೆ (ಧಾರ್ಮಿಕೇತರ ಕಾನೂನು)

ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದು, ಮಗುವನ್ನು ದತ್ತು ಪಡೆಯಬೇಕೆಂದರೆ ಕೆಳಕಂಡ ಪ್ರಕ್ರಿಯೆಯನ್ನು ಪಾಲಿಸಿ:

ಹಂತ ೧: ನೀವು ದತ್ತು ಪಡೆಯಲು ಅರ್ಹರಿದ್ದೀರೋ ಇಲ್ಲವೋ ಎಂಬುದನ್ನು ನಿಗದಿ ಪಡಿಸಬೇಕು. ನೀವು ಸಾಗರೋತ್ತರ ಭಾರತೀಯ ನಾಗರೀಕರಾಗಿದ್ದಲ್ಲಿ, ಅಥವಾ ರೋಢಿಗತವಾಗಿ ಭಾರತದಲ್ಲಿ ನೆಲೆಸಿದ್ದ ವಿದೇಶೀಯರಾಗಿದ್ದಲ್ಲಿ ಮಾತ್ರ ಈ ಪ್ರಕ್ರಿಯೆಯ ಮೂಲಕ ಮಗುವನ್ನು ದತ್ತು ಪಡೆಯಬಹುದು.

ಹಂತ ೨: ಕೇಂದ್ರೀಯ ದತ್ತು ಸ್ವೀಕೃತಿ ಸಂಪನ್ಮೂಲ ಅಧಿಕಾರದ ಜಾಲತಾಣದ ಮೇಲೆ ನೀವು ನಿಮ್ಮ ಹೆಸರನ್ನು ನೋಂದಾಯಿಸಬೇಕು. ಹೀಗೆ ಮಾಡಿದಾಗ ಆ ಜಾಲತಾಣ ನಿಮ್ಮನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಗೆ ಮರುನಿರ್ದೇಶಿಸುತ್ತದೆ. ಇಲ್ಲಿ ನಿಮ್ಮ ಅರ್ಜಿಯನ್ನು ನೀವು ಸಲ್ಲಿಸಬೇಕು.

ಹಂತ ೩: ನಿಮ್ಮ ಅರ್ಜಿಯ ಜೊತೆ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು:

  • ನಿಮ್ಮ ಭಾವಚಿತ್ರ
  • ಪಾನ್ ಕಾರ್ಡ್
  • ನಿಮ್ಮ ಜನ್ಮ ಪುರಾವೆ (ಮದುವೆಯಾದ ದಂಪತಿಯಾದಲ್ಲಿ ನಿಮ್ಮ ಸಂಗಾತಿಯ ಜನ್ಮ ಪುರಾವೆ ಕೂಡ ಬೇಕು)
  • ನಿವಾಸದ ಪುರಾವೆ (ಆಧಾರ್ ಕಾರ್ಡ್/ವೋಟರ್ ಕಾರ್ಡ್/ಪಾಸ್ಪೋರ್ಟ್/ವಿದ್ಯುತ್ ಬಿಲ್/ದೂರವಾಣಿ ಬಿಲ್)
  • ಹಿಂದಿನ ವರ್ಷದ ಆದಾಯದ ಪುರಾವೆ (ಸಂಬಳ ಚೀಟಿ/ಸರ್ಕಾರ ನೀಡುವ ಆದಾಯ ಪ್ರಮಾಣಪತ್ರ/ ಆದಾಯ ತೆರಿಗೆ ರಿಟರ್ನ್ಸ್)
  • ನಿಮಗೆ ಯಾವುದೇ ದೀರ್ಘಕಾಲದ, ಸಾಂಕ್ರಾಮಿಕ, ಅಥವಾ ಮಾರಣಾಂತಿಕ ರೋಗವಿಲ್ಲೆಂದು ಮತ್ತು ನೀವು ದತ್ತು ಪಡೆಯಲ್ಲೂ ಯೋಗ್ಯವಿದ್ದೀರಿ ಎಂದು ಘೋಷಿಸುವ ವೈದ್ಯಕೀಯ ಪ್ರಮಾಣಪತ್ರ (ಮದುವೆಯಾಗಿದ್ದಲ್ಲಿ ನಿಮ್ಮ ಸಂಗಾತಿಯ ವೈದ್ಯಕೀಯ ಪ್ರಮಾಣಪತ್ರವೂ ಬೇಕು)
  • ವಿವಾಹ ಪ್ರಮಾಣಪತ್ರ/ವಿಚ್ಛೇದನಾ ತೀರ್ಪು/ವೈಯಕ್ತಿಕ ಕಾನೂನಿನಡಿ ವಿಚ್ಛೇದನ ಪಡೆದಿರುವಂತೆ ನ್ಯಾಯಾಲಯದ ಘೋಷಣೆ ಅಥವಾ ಶಪಥಪತ್ರ/ ಸಂಗಾತಿಯ ಮರಣ ಪ್ರಮಾಣಪತ್ರ – ಸಂದರ್ಭಾನುಸಾರ.

ಹಂತ ೪: ವಿಶೇಷ ದತ್ತು ಸ್ವೀಕಾರ ಸಂಸ್ಥೆ ನಿಮ್ಮ ಮನೆಗೆ ಭೇಟಿ ನೀಡಿ ನಿಮ್ಮ ಜೀವನದ ಬಗ್ಗೆ ಅಧ್ಯಯನ ನಡೆಸುತ್ತದೆ. ಇದರ ಅನುಗುಣವಾಗಿ ನಿಮ್ಮ ಅರ್ಜಿಯನ್ನು ಸ್ವೀಕರಿಸಬಹುದು, ಅಥವಾ ತಿರಸ್ಕರಿಸಬಹುದು. ಫಲಿತಾಂಶವನ್ನು “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ.

ಹಂತ ೫: ನಿಮ್ಮ ಅರ್ಜಿ ಸ್ವೀಕಾರಗೊಂಡಲ್ಲಿ, ನಿಮ್ಮ ವರಿಷ್ಟತೆಯ ಅನುಗುಣವಾಗಿ, ದತ್ತು ಸ್ವೀಕಾರ ಸಂಸ್ಥೆಯು, “ಮಕ್ಕಳ ದತ್ತು ಸ್ವೀಕೃತಿ ಸಂಪನ್ಮೂಲ ಮಾಹಿತಿ ಮತ್ತು ಮಾರ್ಗದರ್ಶನ ವ್ಯವಸ್ಥೆ”ಯ ಜಾಲತಾಣದ ಮೂಲಕ ನಿಮಗೆ ೩ ಮಕ್ಕಳ ನಡುವೆ ಆಯ್ಕೆ ಮಾಡಲು ಅನುಮತಿ ನೀಡುತ್ತದೆ. ನೀವು ಇವರಲ್ಲಿ ಒಂದು ಮಗುವನ್ನು ೪೮ ಗಂಟೆಗಳಲ್ಲಿ ದತ್ತು ತೆಗೆದುಕೊಳ್ಳಲು ಮೀಸಲಿಡಬಹುದು. ಇದರ ನಂತರ ನಿಮ್ಮ ಮತ್ತು ಮಗುವಿನ ಹೊಂದಾಣಿಕೆಯ ಸೂಕ್ತತೆಯನ್ನು ಕಂಡುಹಿಡಿಯಲು ಮೀಟಿಂಗ್ ನಡೆಸಲಾಗುತ್ತದೆ. ಈ ಪ್ರಕ್ರಿಯೆ ೨೦ ದಿನಗಳ ವರೆಗೆ ನಡೆಯುತ್ತದೆ. ಒಂದು ವೇಳೆ ನೀವು ಮಗುವನ್ನು ಒಪ್ಪಿಕೊಳ್ಳದಿದ್ದರೆ, ನಿಮ್ಮ ಹೆಸರನ್ನು ವರಿಷ್ಠತಾ ಪಟ್ಟಿಯ ಕೊನೆಯಲ್ಲಿ ಸೇರಿಸಲಾಗುತ್ತದೆ.

ಹಂತ ೬: ವಿಶೇಷ ದತ್ತು ಸ್ವೀಕಾರ ಸಂಸ್ಥೆಯು ದತ್ತು ಸ್ವೀಕೃತಿಯ ಪ್ರಕ್ರಿಯೆಯನ್ನು ಅರ್ಧವಾರ್ಷಿಕ ವರದಿಗಳ ಮೂಲಕ, ೨ ವರ್ಷಗಳ ಕಾಲ ದಾಖಲಿಸುತ್ತದೆ. ಏನಾದರೂ ಸಮಸ್ಯೆಗಳು ಎದುರಾದಲ್ಲಿ ಸಮಾಲೋಚನೆ ನೀಡಲಾಗುತ್ತದೆ. ದತ್ತು ಸ್ವೀಕೃತಿಯ ನಂತರ ತೊಂದರೆಗಳು ಉಂಟಾದಲ್ಲೂ ದತ್ತು ಸ್ವೀಕೃತಿಯನ್ನು ರದ್ದು ಗೊಳಿಸಿ, ಮಗುವನ್ನು ಪುನಃ ಇನ್ನೋರ್ವ ಭಾವೀ ದತ್ತು ತಂದೆ-ತಾಯಂದಿರಿಗೆ ದತ್ತು ಕೊಡಲು ಯೋಗ್ಯವೆಂದು ಘೋಷಿಸಲಾಗುತ್ತದೆ.

ಗಂಡನ ಸೆರೆವಾಸದ ಕಾರಣ ಮುಸ್ಲಿಂ ವಿಚ್ಛೇದನ

ಗಂಡನ ಸೆರೆವಾಸದ ಸಂದರ್ಭದಲ್ಲಿ, ಮುಸ್ಲಿಂ ಕಾನೂನಿನಡಿ ವಿಚ್ಛೇದನದ ಅವಕಾಶವಿದೆ. ನಿಮ್ಮ ಗಂಡ ಅಪರಾಧಿ ಎಂದು ಸಾಬೀತುಗೊಂಡು ಕನಿಷ್ಠ ೭ ವರ್ಷಗಳ ಕಾಲ ಜೈಲಿನಲ್ಲಿದ್ದರೆ, ನೀವು ವಿಚ್ಛೇದನಾ ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಬಹುದು.

ನಿಮ್ಮ ಗಂಡನ ಸೆರೆವಾಸದ ದಂಡನೆ ಅಂತಿಮವಿದ್ದಲ್ಲಿ ಮಾತ್ರ ಇಂತಹ ವಿಚ್ಛೇದನಾ ತೀರ್ಪು ಕೊಡಲಾಗುವುದು.

ಟ್ರಿಬ್ಯೂನಲ್ ನಿಂದ ಜೀವನಾಂಶ ಪಡೆದುಕೊಳ್ಳುವುದು

ತಂದೆ-ತಾಯಿ ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯಿದೆ, ೨೦೦೭ರ ಅಡಿಯಲ್ಲಿನ ಜೀವನಾಂಶ ಟ್ರಿಬ್ಯೂನಲ್ ಗೆ ನೀವು ಜೀವನಾಂಶದ ಅರ್ಜಿ ಸಲ್ಲಿಸಬಹುದು. ಕೆಳಕಂಡ ಪ್ರದೇಶಗಳ ಟ್ರಿಬ್ಯೂನಲ್ ಗೆ ನೀವು ಅರ್ಜಿ ಸಲ್ಲಿಸಬಹುದು:

  • ನಿಮ್ಮ ಪ್ರಸ್ತುತ ವಾಸ ಸ್ಥಳ, ಅಥವಾ
  • ನಿಮ್ಮ ಮಾಜಿ ವಾಸ ಸ್ಥಳ, ಅಥವಾ
  • ನಿಮ್ಮ ಮಕ್ಕಳು/ ನೆಂಟರು ವಾಸಿಸುವ ಸ್ಥಳ

ಒಮ್ಮೆ ನೀವು ಟ್ರಿಬ್ಯೂನಲ್ ನಲ್ಲಿ ಅರ್ಜಿ ಸಲ್ಲಿಸಿದಲ್ಲಿ, ದಂಡ ಪ್ರಕ್ರಿಯಾ ಸಂಹಿತೆ, ೧೯೭೩ರ ಸೆಕ್ಷನ್ ೧೨೫ರ ಅಡಿಯಲ್ಲಿ (ಜೀವನಾಂಶದ ಹಕ್ಕು ಇದರದಿಯೂ ಇದೆ) ನೀವು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ಅರ್ಜಿ ಸಲ್ಲಿಸಿದ ನಂತರದ ಪ್ರಕ್ರಿಯೆ: ನೀವು ಅರ್ಜಿ ಸಲ್ಲಿಸಿದ ನಂತರ ನ್ಯಾಯಾಲಯವು ಇದರ ಬಗ್ಗೆ ನಿಮ್ಮ ಮಕ್ಕಳಿಗೆ ಸೂಚಿಸುತ್ತದೆ. ತದನಂತರ, ನ್ಯಾಯಾಲಯವು ಎರಡೂ ಪಕ್ಷಗಳು ಸ್ನೇಹಪರ ಒಪ್ಪಂದಕ್ಕೆ ಬರುವಂತೆ ಸಂಧಾನಾಧಿಕಾರಿಗಳ ನೇಮಕಾತಿ ಮಾಡಬಹುದು. ಒಂದು ವೇಳೆ ಇಂತಹ ಅಧಿಕಾರಿಗಳ ನೇಮಕಾತಿ ನ್ಯಾಯಾಲಯವು ಮಾಡದಿದ್ದರೆ, ಸ್ವತಃ ನ್ಯಾಯಾಧೀಶರು ಎರಡೂ ಪಕ್ಷಗಳ ಹೇಳಿಕೆಗಳನ್ನು ಕೇಳುತ್ತಾರೆ.

ನಿಮಗೆ ಎಷ್ಟು ಜೀವನಾಂಶ ಕೊಡಬೇಕೆಂದು ತೀರ್ಮಾನಿಸಲು ನ್ಯಾಯಾಲಯವು ವಿಚಾರಣೆಯನ್ನು ನಡೆಸುತ್ತದೆ. ಈ ವಿಚಾರಣೆ ಪೂರ್ಣ ಪ್ರಮಾಣದ ಕಾನೂನು ಕ್ರಮವಲ್ಲ. ಇಂತಹ ನ್ಯಾಯಾಲಯಗಳಲ್ಲಿ ವಕೀಲರ ಪ್ರಾತಿನಿಧ್ಯ ಕಾನೂನು ನಿಷೇಧಿಸಿದ್ದರೂ, ಹಲವು ಉಚ್ಚ ನ್ಯಾಯಾಲಯಗಳ ತೀರ್ಪುಗಳ ಪ್ರಕಾರ ವಕೀಲರ ಈ ಹಕ್ಕನ್ನು ನಿರ್ಬಂಧಿಸಲು ಆಗುವುದಿಲ್ಲ. ಈ ನ್ಯಾಯಾಲಯವು ಅನೌಪಚಾರಿಕವಾಗಿದ್ದರೂ ಕೂಡ, ಇದರ ಬಳಿ ಸಿವಿಲ್ ನ್ಯಾಯಾಲಯದ ಎಲ್ಲ ಅಧಿಕಾರಗಳು ಇರುತ್ತವೆ. ಉದಾಹರಣೆಗೆ, ಸಾಕ್ಷಿದಾರರ ಹಾಜರಿಯ ಆದೇಶ ನೀಡುವುದು, ಪ್ರಮಾಣವಚನದ ಮೇಲೆ ಸಾಕ್ಷಿ ತೆಗೆದುಕೊಳ್ಳುವುದು, ಇತ್ಯಾದಿ.

ನಿಮ್ಮ ಮಕ್ಕಳು/ ನೆಂಟರು ನಿಮ್ಮ ಕಾಳಜಿ ವಹಿಸಲು ನಿರ್ಲಕ್ಷಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿದು ಬಂದಲ್ಲಿ ಅವರು ನಿಮಗೆ ಮಾಸಿಕ ಜೀವನಾಂಶ ಕೊಡಬೇಕೆಂದು ನ್ಯಾಯಾಲಯವು ಆದೇಶಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ದಿನಾಂಕದಿಂದ ಜೀವನಾಂಶದ ಮೊತ್ತದ ಮೇಲೆ ೫-೮% ಬಡ್ಡಿಯನ್ನು ಕೊಡುವುದಾಗಿಯೂ ನ್ಯಾಯಾಲಯವು ಆದೇಶಿಸಬಹುದು. ನ್ಯಾಯಾಲಯದ ಆದೇಶದ ನಂತರವೂ ನಿಮ್ಮ ಮಕ್ಕಳು ನಿಮಗೆ ಜೀವನಾಂಶ ಕೊಡದಿದ್ದಲ್ಲಿ ನೀವು ಜೀವನಾಂಶ ಟ್ರಿಬ್ಯೂನಲ್ ಅಥವಾ ಇನ್ನಿತರ ನ್ಯಾಯಾಲಯಕ್ಕೆ ಹೋಗಿ ಈ ಆದೇಶವನ್ನು ಕಾರ್ಯಗತಗೊಳಿಸಬಹುದು.

ಬಾಲ್ಯ ವಿವಾಹವಾದ ಹೆಣ್ಣು ಮಕ್ಕಳಿಗೆ ರಕ್ಷಣೆ

೧೮ರ ಕೆಳಗಿನ ಹೆಣ್ಣು ಮಕ್ಕಳು ಮದುವೆಯಾದಲ್ಲಿ, ಹಾಗು ಅವರು ಮದುವೆಯನ್ನು ರದ್ದು ಮಾಡುವುದಾಗಿ ಮನವಿ ಸಲ್ಲಿಸಿದಲ್ಲಿ, ಅವರಿಗೆ ಕಾನೂನು ರಕ್ಷಣೆ ನೀಡುತ್ತದೆ.

ಜೀವನಾಂಶ ಕೊಡುವುದು:

ಅವಳ ಗಂಡ, ಅಥವಾ ಗಂಡನ ತಂದೆ-ತಾಯಿ/ಪೋಷಕರು (ಗಂಡ ಅಲ್ಪವಯಸ್ಕನಿದ್ದಾಗ) ಅವಳಿಗೆ ನಿಗದಿ ಪಡಿಸಿದ ಹಣವನ್ನು ಜೀವನಾಂಶವಾಗಿ ಕೊಡುವುದಾಗಿ ಜಿಲ್ಲಾ ನ್ಯಾಯಾಲಯವು ನಿರ್ದೇಶಿಸಬಹುದು.

ಈ ಜೀವನಾಂಶದ ಮೊತ್ತವನ್ನು ನಿರ್ಧರಿಸುವಾಗ, ಆಕೆಯ ಜೀವನಶೈಲಿ ಮತ್ತು ಜೀವನಾಂಶ ಕೊಡುವವರ ಆದಾಯವನ್ನು ನ್ಯಾಯಾಲಯವು ಪರಿಗಣಿಸುತ್ತದೆ. ಆ ಹುಡುಗಿ ಪುನರ್ವಿವಾಹವಾಗುವ ತನಕ ಈ ಜೀವನಾಂಶ ಕೊಡಬೇಕಾಗುತ್ತದೆ.

ನಿವಾಸಕ್ಕಾಗಿ ವ್ಯವಸ್ಥೆ:

ಆ ಹುಡುಗಿ ಪುನರ್ವಿವಾಹವಾಗುವವರೆಗೆ ಅವಳಿಗೆ ಸೂಕ್ತ ನಿವಾಸದ ವ್ಯವಸ್ಥೆ ಮಾಡಬೇಕೆಂದೂ ಸಹ ನ್ಯಾಯಾಲಯವು ನಿರ್ದೇಶಿಸಬಹುದು.