ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ಯಾರಾದರೂ ಹೇಗೆ ಪೊಲೀಸ್ ದೂರು ದಾಖಲಿಸಬಹುದು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು.

ಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಲು ಒಬ್ಬ ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿದಾಗ, ಈ ಕೆಳಗಿನ ಪ್ರಕ್ರಿಯೆಯು ನಡೆಯುತ್ತದೆ:

  • ಪೊಲೀಸರು ದೂರಿನ ಲಿಖಿತ ದಾಖಲೆಯನ್ನು ತಯಾರಿಸುತ್ತಾರೆ.
  • ವರದಿಯ ಆಧಾರದ ಮೇಲೆ, ಮಗುವಿಗೆ ತಕ್ಷಣದ ಆರೈಕೆ ಮತ್ತು ಗಮನ ಬೇಕು ಎಂದು ಪೊಲೀಸರು ಭಾವಿಸಿದರೆ, ಅವರು ಮಗುವನ್ನು ಆಸ್ಪತ್ರೆ ಅಥವಾ ಆಶ್ರಯ ಮನೆಗೆ ಸ್ಥಳಾಂತರಿಸುತ್ತಾರೆ.

ಅಪರಾಧದ ಬಗ್ಗೆ ಸತ್ಯವಾದ ದೂರನ್ನು ನೀಡುವ ವ್ಯಕ್ತಿಯು ಅಪರಾಧಿಯು ತಪ್ಪಿತಸ್ಥ ಎಂದು ಸಾಬೀತಾಗದಿದ್ದರೆ ನ್ಯಾಯಾಲಯಕ್ಕೆ ಎಳೆಯಲ್ಪಡುವ ಬಗ್ಗೆ ಚಿಂತಿಸಬೇಕಾಗಿಲ್ಲ.

ಕೌಟುಂಬಿಕ ಹಿಂಸೆಯ ನಿಮಿತ್ತ ಯಾರ ವಿರುದ್ಧ ದೂರು ದಾಖಲಿಸಬಹುದು?

ಕೌಟುಂಬಿಕ ಹಿಂಸೆಯ ನಿಮಿತ್ತ ನೀವು ಪುರುಷರು ಮತ್ತು ಮಹಿಳೆಯರ ವಿರುದ್ಧ ದೂರು ದಾಖಲಿಸಬಹುದು. ಕೆಳಗಿನವರ ವಿರುದ್ಧ ನೀವು ದೂರು ದಾಖಲಿಸಬಹುದು:

೧. ನಿಮ್ಮ ಕುಟುಂಬ: ಕೆಳಗಿನ ಸಂದರ್ಭಗಳಲ್ಲಿ, ನಿಮ್ಮ ಕುಟುಂಬದವರು ನಿಮಗೆ ಕೌಟುಂಬಿಕ ಹಿಂಸೆ ನೀಡುತ್ತಿದ್ದಲ್ಲಿ, ಅವರ ವಿರುದ್ಧ ದೂರನ್ನು ದಾಖಲಿಸಬಹುದು:

  • ಕಿರುಕುಳ ನೀಡುತ್ತಿರುವ ವ್ಯಕ್ತಿ ನಿಮ್ಮ ರಕ್ತ ಸಂಬಂಧಿಕರಾಗಿದ್ದರೆ. ಉದಾಹರಣೆಗೆ, ನಿಮ್ಮ ಅಪ್ಪ, ಅಣ್ಣ, ಇತ್ಯಾದಿ. – ಕಿರುಕುಳ ನೀಡುತ್ತಿರುವ ವ್ಯಕ್ತಿ ನಿಮ್ಮ ಮದುವೆಯಿಂದ ಸಂಬಂಧಿಕರಾಗಿದ್ದರೆ. ಉದಾಹರಣೆಗೆ, ಗಂಡ, ಅತ್ತೆ-ಮಾವ, ಇತ್ಯಾದಿ.
  • ಒಂದೇ ಮನೆಯಲ್ಲಿ ಅವಿಭಜಿತ ಕುಟುಂಬದ ಸದಸ್ಯರಾಗಿ ನಿಮಗೆ ಕಿರುಕುಳ ಕೊಡುತ್ತಿರುವ ವ್ಯಕ್ತಿ ಹಾಗು ನೀವು ವಾಸವಾಗಿದ್ದಲ್ಲಿ. ಉದಾಹರಣೆಗೆ, ನಿಮ್ಮ ಅಜ್ಜಿ, ಸೋದರ ಮಾವ, ದತ್ತುಕ ಅಣ್ಣ/ತಮ್ಮ, ಇತ್ಯಾದಿ. ಆದಾಗ್ಯೂ, ಯಾರು ಹಿಂಸಾತ್ಮಕ ಕ್ರಿಯೆಯನ್ನು ಮಾಡುವಲ್ಲಿ ತೊಡಗಿರುತ್ತಾರೋ/ಮಾಡಲು ಸಹಾಯ ಮಾಡಿರುತ್ತಾರೋ, ಅವರ ವಿರುದ್ಧ ಮಾತ್ರ ನೀವು ದೂರು ದಾಖಲಿಸಬಹುದು. ಉದಾಹರಣೆಗೆ, ನೀವು ಹತ್ತು ಮಂದಿಯ ಅವಿಭಜಿತ ಕುಟುಂಬದ ಸದಸ್ಯರಾಗಿ ಒಂದೇ ಸೂರಿನಡಿ ವಾಸವಾಗಿದ್ದು, ನಿಮಗೆ ಕೇವಲ ನಿಮ್ಮ ಗಂಡ ಹಾಗು ಅತ್ತೆ ಕೌಟುಂಬಿಕ ಹಿಂಸೆ ಮಾಡಿದ್ದಲ್ಲಿ, ಇವರಿಬ್ಬರ ವಿರುದ್ಧ ಮಾತ್ರ ದೂರನ್ನು ಸಲ್ಲಿಸಬಹುದು.
  • ನಿಮ್ಮ ಲಿವ್-ಇನ್ ಸಂಗಾತಿ: ನಿಮ್ಮ ಲಿವ್-ಇನ್ ಸಂಗಾತಿ ನಿಮಗೆ ನೋವುಂಟು ಮಾಡಿದಲ್ಲಿ/ಕಿರುಕುಳ ಕೊಟ್ಟಲ್ಲಿ, ಅವರ ವಿರುದ್ಧ ದೂರು ದಾಖಲಿಸಬಹುದು.
  • ಅಲ್ಪವಯಸ್ಕರು: ಅಲ್ಪವಯಸ್ಕರು ನಿಮ್ಮ ಮೇಲೆ ಕೌಟುಂಬಿಕ ಹಿಂಸೆ ಎಸಗಿದರೆ, ಅವರ ವಿರುದ್ಧ ಕೂಡ ನೀವು ದೂರು ಸಲ್ಲಿಸಬಹುದು. ಉದಾಹರಣೆಗೆ, ನಿಮ್ಮ ಕುಟುಂಬದ ಒಬ್ಬ ೧೬ ವರ್ಷದ ಹುಡುಗ ನಿಮ್ಮ ಮೇಲೆ ಹಿಂಸೆ ಎಸಗಿದರೆ, ಅವನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಬಹುದು.

ನ್ಯಾಯಾಲಯಕ್ಕೆ ಹೋಗುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ, ನಿಮ್ಮ ಮೇಲೆ ಹಿಂಸೆ ಮಾಡಿರುವ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿರಬೇಕು, ಮತ್ತು ನೀವಿಬ್ಬರೂ ಒಂದೇ ಸೂರಿನಡಿ ವಾಸವಾಗಿದ್ದಿರಬೇಕು.

 

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಸುಳ್ಳು ವರದಿಗಳು ಅಥವಾ ದೂರುಗಳು ಯಾವುವು?

ಪ್ರಚೋದಕ ಎಚ್ಚರಿಕೆ: ಕೆಳಗಿನ ವಿಷಯವು ಲೈಂಗಿಕ ಮತ್ತು ದೈಹಿಕ ಹಿಂಸೆಯ ಮಾಹಿತಿಯನ್ನು ಒಳಗೊಂಡಿದೆ, ಇದು ಕೆಲವು ಓದುಗರಿಗೆ ತೊಂದರೆಯಾಗಬಹುದು

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಸುಳ್ಳು ದೂರು ನೀಡುವುದು ಅಥವಾ ಅವರು ಹಾಗೆ ಮಾಡದಿದ್ದಲ್ಲಿ ಅವರು ಒಂದು ಮಗುವನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿ ಇನ್ನೊಬ್ಬ ವ್ಯಕ್ತಿಯ ವಿರುದ್ಧ ಸುಳ್ಳು ಮಾಹಿತಿಯನ್ನು ಒದಗಿಸುವುದು ಕಾನೂನುಬಾಹಿರ. ಹೀಗೆ ಮಾಡಿದರೆ, ಶಿಕ್ಷೆಯು ಒಂದು ವರ್ಷ ಜೈಲು ಮತ್ತು/ಅಥವಾ ದಂಡ.

ಯಾರನ್ನಾದರೂ ಅವಮಾನಿಸುವ, ಸುಲಿಗೆ ಮಾಡುವ, ಬೆದರಿಕೆ ಹಾಕುವ, ಬ್ಲ್ಯಾಕ್‌ಮೇಲ್ ಮಾಡುವ ಅಥವಾ ಮಾನಹಾನಿ ಮಾಡುವ ಉದ್ದೇಶದಿಂದ ಸುಳ್ಳು ದೂರು ಅಥವಾ ತಪ್ಪು ಮಾಹಿತಿಯನ್ನು ನೀಡಿದರೆ, ದೂರುದಾರನಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು/ಅಥವಾ ದಂಡವನ್ನು ವಿಧಿಸಲಾಗುತ್ತದೆ.

ಆದರೆ, ಒಂದು ಮಗು ಸುಳ್ಳು ದೂರು ನೀಡಿದರೆ ಅಥವಾ ತಪ್ಪು ಮಾಹಿತಿ ನೀಡಿದರೆ, ಮಗುವನ್ನು ಶಿಕ್ಷಿಸಲಾಗುವುದಿಲ್ಲ.

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡುವ ಸಮಯದ ಮಿತಿ

ಕೌಟುಂಬಿಕ ಹಿಂಸೆಯ ವಿರುದ್ಧ ದೂರು ನೀಡಲು ಯಾವುದೇ ನಿರ್ದಿಷ್ಟ ಸಮಯದ ಮಿತಿ ಇಲ್ಲ. ಆದರೆ, ಹಿಂಸೆ ನಡೆದ ಕಾಲಾವಧಿಯಲ್ಲಿ ನೀವು ಕಿರುಕುಳ ನೀಡಿದ ವ್ಯಕ್ತಿಯ ಜೊತೆ ಕೌಟುಂಬಿಕ ಸಂಬಂಧದಲ್ಲಿದ್ದೀರಿ ಎಂದು ನೀವು ಸಾಬೀತುಪಡಿಸಬೇಕಾಗುತ್ತದೆ. ಆದಾಗ್ಯೂ, ದೂರು ನೀಡಲು ತಡವಾಗಿದ್ದಲ್ಲಿ, ಅದರ ಕಾರಣಗಳನ್ನು ವಿವರಿಸಬೇಕಾಗಿ ನ್ಯಾಯಾಲಯವು ನಿಮಗೆ ಕೇಳಬಹುದು.

ಕೆಳಗಿನ ಸಂದರ್ಭಗಳಲ್ಲಿ ನೀವು ಕೌಟುಂಬಿಕ ಹಿಂಸೆಯ ದೂರನ್ನು ನೀಡಬಹುದು:

೧. ೨೦೦೫ರ ಮುಂಚೆ ನಡೆದ ಘಟನೆಗಳ ವಿರುದ್ಧ ದೂರು ನೀಡುವುದು:

ಕೌಟುಂಬಿಕ ಹಿಂಸೆ ಕಾನೂನು ೨೦೦೫ರಲ್ಲಿ ಜಾರಿಗೆ ಬಂದಿದ್ದರೂ ಕೂಡ, ೨೦೦೫ರ ಹಿಂದೆ ನಡೆದ ಹಿಂಸಾತ್ಮಕ ಘಟನೆಗಳ ವಿರುದ್ಧವೂ ಕೂಡ ರಕ್ಷಣೆ/ಪರಿಹಾರದ ಅರ್ಜಿ ಸಲ್ಲಿಸಲು ಕಾನೂನು ಅನುವು ಮಾಡಿಕೊಟ್ಟಿದೆ.

ನೀವು ಮಹಿಳೆಯಾಗಿದ್ದು, ೨೦೦೫ರ ಹಿಂದೆ ಹಿಂಸೆಗೆ ಒಳಗಾಗಿದ್ದಲ್ಲಿ, ಕಾನೂನಿನಡಿ ರಕ್ಷಣೆಗೆ ನೀವು ಅರ್ಹರಿದ್ದೀರಿ. ಈ ನಿಟ್ಟಿನಲ್ಲಿ, ನ್ಯಾಯಾಲಯದಲ್ಲಿ ನೀವು ಪ್ರಕರಣವನ್ನು ಹೂಡಬಹುದು. ಉದಾಹರಣೆಗೆ, ಸೀತಾ ಎಂಬ ಮಹಿಳೆ ೨೦೦೧ರಲ್ಲಿ ತಮ್ಮ ಅತ್ತೆಯಿಂದ ಕೌಟುಂಬಿಕ ಹಿಂಸೆಗೆ ಬಲಿಯಾಗಿದ್ದು, ಕೌಟುಂಬಿಕ ಹಿಂಸೆಯ ಕಾನೂನು ಅವರ ಮೇಲೆ ಹಿಂಸೆ ನಡೆದ ಮೇಲೆ ಜಾರಿಗೆ ಬಂದಿದ್ದರೂ ಕೂಡ, ಅವರು ನ್ಯಾಯಾಲಯಕ್ಕೆ ಹೋಗಿ ಪ್ರಕರಣ ಹೂಡುವ ಅರ್ಹತೆಯನ್ನು ಹೊಂದಿದ್ದಾರೆ.

೨. ವಿಚ್ಛೇದನದ ನಂತರ ದೂರು ನೀಡುವುದು:

ನೀವು ವಿಚ್ಛೇದನದ ನಂತರವೂ ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸಬಹುದು. ಉದಾಹರಣೆಗೆ, ಸೀಮಾ 2012 ರಲ್ಲಿ ಮದುವೆಯಾದರು. ತದನಂತರ, ಎರಡು ವರ್ಷಗಳ ಕಾಲ ಅವರ ಗಂಡನಿಂದ ಶಾರೀರಿಕ ಹಿಂಸೆಗೆ ಬಲಿಯಾದರು. ೨೦೧೪ರಲ್ಲಿ ಅವರು ತಮ್ಮ ಗಂಡಿಂದ ವಿಚ್ಛೇದನ ಪಡೆದರು. ೨೦೧೪ರ ನಂತರ ಅವರ ಮಾಜಿ ಗಂಡನ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸುವ ಹಕ್ಕು ಸೀಮಾರಿಗೆ ಇದೆ. ಯಾಕೆಂದರೆ, ಹಿಂಸೆ ನಡೆದ ಸಮಯದಲ್ಲಿ, ಅವರು ಕಿರುಕುಳ ನೀಡುತ್ತಿದ್ದ ವ್ಯಕ್ತಿಯ (ಗಂಡನ) ಜೊತೆ ಕೌಟುಂಬಿಕ ಸಂಬಂಧದಲ್ಲಿ ಇದ್ದರು.

 

ಡಿ.ಐ.ಆರ್. ಎಂದರೇನು?

ಒಬ್ಬ ಮಹಿಳೆಯಿಂದ ಕೌಟುಂಬಿಕ ಹಿಂಸೆಯ ದೂರು ಸಿಕ್ಕ ತಕ್ಷಣ ದಾಖಲಿಸುವ ವರದಿಯನ್ನು ಡಿ.ಐ.ಆರ್. ಎನ್ನುತ್ತಾರೆ. ಈ ವರದಿಯನ್ನು ರಕ್ಷಣಾಧಿಕಾರಿಗಳು ಅಥವಾ ಸೇವಾ ಕಾರ್ಯಕರ್ತರು ದಾಖಲಿಸುತ್ತಾರೆ. ಡಿ.ಐ.ಆರ್.ನಲ್ಲಿ ಸಂತ್ರಸ್ತೆಯ ಹೆಸರು, ವಯಸ್ಸು, ಕಿರುಕುಳ ಕೊಟ್ಟವರ ವಿವರಗಳು, ಹಿಂಸಾತ್ಮಕ ಘಟನೆಯ ವಿವರಗಳು, ಇತ್ಯಾದಿ ಮಾಹಿತಿಗಳು ಇರುತ್ತವೆ. ಡಿ.ಐ.ಆರ್.ಅನ್ನು ದಾಖಲಿಸಲು ಕೆಳಗಿನ ಅಧಿಕಾರಿಗಳನ್ನು ಭೇಟಿ ನೀಡಿ:

ರಕ್ಷಣಾಧಿಕಾರಿಗಳು:

ದೂರು ಸಿಕ್ಕ ನಂತರ ಡಿ.ಐ.ಆರ್.ಅನ್ನು ದಾಖಲಿಸಿ, ನಿಮ್ಮ ಕಾನೂನಾತ್ಮಕ ಹಕ್ಕುಗಳನ್ನು ನಿಮಗೆ ಪರಿಚಯಿಸುವುದು ರಕ್ಷಣಾಧಿಕಾರಿಗಳ ಜವಾಬ್ದಾರಿ. ನಿಮ್ಮ ಹತ್ತಿರ ಇಟ್ಟುಕೊಳ್ಳಲು ನಿಮಗೆ ಡಿ.ಐ.ಆರ್.ನ ಉಚಿತ ಪ್ರತಿಯನ್ನು ನೀಡಲಾಗುತ್ತದೆ. ಇದಾದಮೇಲೆ, ಡಿ.ಐ.ಆರ್. ಮತ್ತು ಸಂಬಂಧಿತ ಅರ್ಜಿಯನ್ನು ಪ್ರಕರಣವನ್ನು ಹೂಡಲು ನ್ಯಾಯಾಲಯಕ್ಕೆ ಕಳಿಸಲಾಗುತ್ತದೆ. ಡಿ.ಐ.ಆರ್.ಅನ್ನು ಪೊಲೀಸ್ ಅಧಿಕಾರಿಗಳು ಮತ್ತು ಸೇವಾ ಕಾರ್ಯಕರ್ತರಿಗೆ ಕೂಡ ಕಳಿಸಲಾಗುತ್ತದೆ.

ಸೇವಾ ಕಾರ್ಯಕರ್ತರು:

ನಿಮ್ಮಿಂದ ದೂರು ಸಿಕ್ಕ ತಕ್ಷಣ ಡಿ.ಐ.ಆರ್.ಅನ್ನು ದಾಖಲಿಸಿ, ನಿಮ್ಮನ್ನು ರಕ್ಷಣಾಧಿಕಾರಿಗಳ ಬಳಿ, ಅಥವಾ ನ್ಯಾಯಾಲಯಕ್ಕೆ ಕಳಿಸಬೇಕಾದದ್ದು ಸೇವಾ ಕಾರ್ಯಕರ್ತರ ಕರ್ತವ್ಯ. ನಿಮಗೆ ಶಾರೀರಿಕ ನೋವು ಉಂಟಾಗಿದ್ದಲ್ಲಿ, ವೈದ್ಯಕೀಯ ತಪಾಸಣೆ ನಡೆಸಲು ಸಹಾಯ ಮಾಡಿ, ನಿಮ್ಮ ವರದಿಯನ್ನು ರಕ್ಷಣಾಧಿಕಾರಿಗಳಿಗೆ, ಅಥವಾ ಪೊಲೀಸ್ ಥಾಣೆ ಕಳಿಸುವುದು ಕೂಡ ಅವರ ಕರ್ತವ್ಯ. ನಿಮಗೆ ಕಿರುಕುಳ ನೀಡಿರುವ ವ್ಯಕ್ತಿಯಿಂದ ದೂರವಿರಲು ಅವರು ನಿಮಗೆ ಆಶ್ರಯ ಮನೆಗಳನ್ನು ಸಂಪರ್ಕಿಸಲು ಕೂಡ ಸಹಾಯ ಮಾಡುತ್ತಾರೆ.

ಪೊಲೀಸ್ ಅಧಿಕಾರಿಗಳು:

ರಕ್ಷಣಾಧಿಕಾರಿಗಳು, ಅಥವಾ ಸೇವಾ ಕಾರ್ಯಕರ್ತರು ನಿಮಗೆ ಸಿಗಲಿಲ್ಲವೆಂದಲ್ಲಿ, ಹತ್ತಿರದ ಪೊಲೀಸ್ ಠಾಣೆಯನ್ನು ನೀವು ಸಂಪರ್ಕಿಸಬಹುದು. ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಕೆಳಗಿನ ವರದಿಗಳನ್ನು ದಾಖಲಿಸಲು ಪೊಲೀಸ್ ಅಧಿಕಾರಿಗಳು ನಿಮಗೆ ಸಹಾಯ ಮಾಡುತ್ತಾರೆ:

೧. ಎಫ್.ಐ.ಆರ್.:

ಎಫ್.ಐ.ಆರ್.ಅನ್ನು ದಾಖಲಿಸಿ ಅಪರಾಧಿಕ ಪ್ರಕರಣವನ್ನು ಕಿರುಕುಳ ಕೊಟ್ಟ ವ್ಯಕ್ತಿಯ ವಿರುದ್ಧ ಹೂಡಬಹುದು. ನಿಮಗೆ ಅಪರಾಧಿಕ ದೂರನ್ನು ದಾಖಲಿಸುವ ಇಚ್ಛೆ ಇದ್ದಲ್ಲಿ, ಪ್ರಕರಣದ ಯಾವ ಹಂತದಲ್ಲಾದರೂ ಎಫ್.ಐ.ಆರ್.ಅನ್ನು ದಾಖಲಿಸುವ ಆಯ್ಕೆಯನ್ನು ಪೊಲೀಸ್ ಅಧಿಕಾರಿಗಳು ನಿಮಗೆ ಕೊಡುತ್ತಾರೆ.

೨. ಡಿ.ಐ.ಆರ್.:

ನಿಮಗೆ ಅಪರಾಧಿಕ ದೂರನ್ನು ದಾಖಲಿಸುವ ಇಚ್ಛೆ ಇಲ್ಲದಿದ್ದಲ್ಲಿ, ರಕ್ಷಣಾಧಿಕಾರಿಗಳು ಕಳಿಸಿದ ಡಿ.ಐ.ಆರ್.ನಲ್ಲಿನ ವಿವರಣೆಗಳ ಪ್ರಕಾರ ನಿಮ್ಮ ಜೊತೆಯಾದ ಕೌಟುಂಬಿಕ ಹಿಂಸೆಯ ವಿವರಗಳನ್ನು ತಮ್ಮ ದಿನಚರಿಯ ಡೈರಿಯಲ್ಲಿ ನಮೂದಿಸಬೇಕಾಗುತ್ತದೆ. ಈ ಮಾಹಿತಿ ಅವರ ಬಳಿ ಇಲ್ಲದಿದ್ದಲ್ಲಿ, ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ, ಡಿ.ಐ.ಆರ್.ಅನ್ನು ದಾಖಲಿಸಿ, ಅದರಲ್ಲಿರುವ ವಿವರಣೆಗಳ ಪ್ರಕಾರ ತಮ್ಮ ದಿನಚರಿಯ ಡೈರಿಯಲ್ಲಿ ವಿವರಗಳನ್ನು ನಮೂದಿಸುತ್ತಾರೆ.

ವೈದ್ಯಕೀಯ ಸೌಲಭ್ಯದ ಉಸ್ತುವಾರಿ ವ್ಯಕ್ತಿಗಳು:

ನೀವು ವೈದ್ಯಕೀಯ ಸೌಲಭ್ಯಕ್ಕೆ, ಡಿ.ಐ.ಆರ್.ಅನ್ನು ದಾಖಲಿಸದೆ ಭೇಟಿ ನೀಡಿದರೆ, ಆ ಸೌಲಭ್ಯದ ಉಸ್ತುವಾರಿ ಮುಖ್ಯಸ್ಥರು ಡಿ.ಐ.ಆರ್.ಅನ್ನು ದಾಖಲಿಸಿ, ರಕ್ಷಣಾಧಿಕಾರಿಗಳಿಗೆ ಅದನ್ನು ಕಳಿಸಬೇಕು.

ರಕ್ಷಣಾಧಿಕಾರಿಗಳ ಪಾತ್ರವೇನು?

ನೀವು ಕೌಟುಂಬಿಕ ಹಿಂಸೆಯ ದೂರನ್ನು ದಾಖಲಿಸುವುದಾಗಿ ನಿರ್ಧರಿಸಿದ್ದಲ್ಲಿ, ರಕ್ಷಣಾಧಿಕಾರಿಗಳು ನಿಮ್ಮ ಮೊದಲ ಸಂಪರ್ಕ ಬಿಂದು ಆಗಿರುತ್ತಾರೆ. ನೀವು, ಅಥವಾ ನಿಮಗೆ ಗೊತ್ತಿರುವವರಿನ್ಯಾರಾದರೂ, ನಿಮ್ಮ ಜಿಲ್ಲೆಯ ಅಥವಾ ಹತ್ತಿರದ ಸ್ಥಳದ ರಕ್ಷಣಾಧಿಕಾರಿಗಳನ್ನು ಭೇಟಿ ನೀಡಿ, ಕರೆ ಮಾಡಿ, ಅಥವಾ ಪತ್ರದ ಮೂಲಕ, ಹಿಂಸೆಯ ದೂರನ್ನು ದಾಖಲಿಸಿ, ರಕ್ಷಣೆಯ ಮನವಿ ಮಾಡಬಹುದು. ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಲು ನೀವು:

  • ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಕೇಳಿಕೊಳ್ಳಬಹುದು.
  • ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೋಗಬಹುದು ಅಥವಾ ಕರೆ ಮಾಡಬಹುದು
  • ರಾಷ್ಟ್ರೀಯ/ರಾಜ್ಯ ಮಹಿಳಾ ಆಯೋಗವನ್ನು ಸಂಪರ್ಕಿಸಿ.
  • ಸರ್ಕಾರೇತರ ಸಂಸ್ಥೆಗಳು ಅಥವಾ ಸೇವಾ ಕಾರ್ಯಕರ್ತರನ್ನು ಸಂಪರ್ಕಿಸಿ.

ನಿಮ್ಮ ದೂರನ್ನು ರಕ್ಷಣಾಧಿಕಾರಿಗಳು ದಾಖಲಿಸುತ್ತಾರೆ. ನಿಮ್ಮ ಬಳಿ ಇಟ್ಟುಕೊಳ್ಳಲು ದೂರಿನ ಉಚಿತ ಪ್ರತಿಯನ್ನು ನೀವು ಅವರಿಂದ ಪಡೆಯಬಹುದು. ರಕ್ಷಣಾಧಿಕಾರಿಗಳು ಕೆಳಗಿನಂತೆ ನಿಮಗೆ ಸಹಾಯ ಮಾಡುತ್ತಾರೆ:

೧. ದೂರು ದಾಖಲಿಸುವುದು:

ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿವರಗಳು, ಸಂತ್ರಸ್ತೆಯ ವಿವರಗಳು, ಇತ್ಯಾದಿ ವಿವರಣೆಗಳುಳ್ಳ, ಕೌಟುಂಬಿಕ ಹಿಂಸೆಯ ಪ್ರಕರಣಗಳಲ್ಲಿ ದಾಖಲಿಸಲಾಗುವ “ಡಿ.ಐ.ಆರ್.” ಎಂಬ ಒಂದು ವಿಶೇಷ ವರದಿಯನ್ನು ದಾಖಲಿಸಲು ರಕ್ಷಣಾಧಿಕಾರಿಗಳು ನಿಮ್ಮ ಸಹಾಯ ಮಾಡುತ್ತಾರೆ. ನ್ಯಾಯಾಲಯದಲ್ಲಿ ನೇರವಾಗಿ ದೂರು ಸಲ್ಲಿಸಿ, ಕಾನೂನು ನೆರವು ಪಡೆಯುವಲ್ಲಿಯೂ ಸಹ ಅವರು ನಿಮ್ಮ ಸಹಾಯ ಮಾಡಬಲ್ಲರು.

೨. ಪೊಲೀಸರಿಗೆ ಮಾಹಿತಿ ನೀಡುವುದು:

ನೀವು ಹಿಂಸೆಗೆ ಒಳಗಾದ ಜಾಗದ ಪೊಲೀಸ್ ಠಾಣೆಗೆ, ಡಿ.ಐ.ಆರ್. ಮತ್ತು ನಿಮ್ಮ ವೈದ್ಯಕೀಯ ವರದಿಯ ಪ್ರತಿಗಳನ್ನು (ನಿಮ್ಮ ವೈದ್ಯಕೀಯ ತಪಾಸಣೆ ಆದಲ್ಲಿ) ಕಳಿಸುತ್ತಾರೆ. ಇದಾದಮೇಲೆ, ನಿಮಗೆ ಕಿರುಕುಳ ಕೊಟ್ಟವರಿಂದ ಇನ್ನು ಮೇಲೆ ಹಿಂಸೆ ಮುಂದುವರೆಯದಂತೆ, ಪೊಲೀಸರು ನೋಡಿಕೊಳ್ಳುತ್ತಾರೆ.

೩. ತಕ್ಷಣದ ರಕ್ಷಣೆ ಮತ್ತು ಆಸರೆ ನೀಡುವುದು:

ಕೆಳಗಿನಂತೆ ರಕ್ಷಣಾಧಿಕಾರಿಗಳು ನಿಮ್ಮ ಸಹಾಯ ಮಾಡಬಲ್ಲರು:

  • ನಿಮ್ಮ ರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ಮತ್ತು ನ್ಯಾಯಾಲಯದಿಂದ ನೀವು ಪಡೆಯಬಯಸುವ ಆದೇಶಗಳುಳ್ಳ “ರಕ್ಷಣಾ ಉಪಾಯವನ್ನು” ತಯಾರಿಸುವುದು
  • ನಿಮಗೆ/ನಿಮ್ಮ ಮಗುವಿಗೆ ಶಾರೀರಿಕವಾಗಿ ಪೆಟ್ಟು ಬಿದ್ದಲ್ಲಿ, ಯಾವುದೇ ವೈದ್ಯಕೀಯ ಸೌಲಭ್ಯದಿಂದ ನಿಮಗೆ ವೈದ್ಯಕೀಯ ನೆರವನ್ನು ಕಲ್ಪಿಸಿಕೊಡುವುದು
  • ಕಾನೂನು ನೆರವು, ಸಮಾಲೋಚನೆ, ವೈದ್ಯಕೀಯ ಸೌಲಭ್ಯಗಳು, ಆಶ್ರಯ ಮನೆ, ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸೇವಾ ಕಾರ್ಯಕರ್ತರನ್ನು ನಿಮಗೆ ಪರಿಚಯಿಸುವುದು

೪. ನಿಮ್ಮ ಕಾನೂನಾತ್ಮಕ ಹಕ್ಕುಗಳ ಬಗ್ಗೆ ನಿಮಗೆ ಮಾಹಿತಿ ನೀಡುವುದು:

ನಿಮ್ಮ ಜೊತೆ ಏನಾಗಿದೆ ಎಂದು ಸ್ಪಷ್ಟವಾಗಿ ನೀವು ತಿಳಿದುಕೊಳ್ಳಲೆಂದು ಬೇರೆ-ಬೇರೆ ರೀತಿಗಳ ಕೌಟುಂಬಿಕ ಹಿಂಸೆಗಳ ಬಗ್ಗೆ ನಿಮಗೆ ತಿಳಿಹೇಳುತ್ತಾರೆ. ಇದನ್ನು ಡಿ.ಐ.ಆರ್.ನಲ್ಲಿ ದಾಖಲಿಸಲಾಗುತ್ತದೆ. ಇದಾದಮೇಲೆ, ದೂರು ನೀಡಿದ ಬಳಿಕ ನೀವು ಕಾನೂನಿನಡಿ ಚಲಾಯಿಸಬಲ್ಲ ಹಕ್ಕುಗಳಾವುವು, ಮತ್ತು ನಿಮಗೆ ಸಿಗಬಲ್ಲ ಬೇರೆ-ಬೇರೆ ಪರಿಹಾರಗಳಾವುವು ಎಂಬುದನ್ನು ತಿಳಿಹೇಳುತ್ತಾರೆ.

೫. ನ್ಯಾಯಾಲಯದ ಪ್ರಕ್ರಿಯೆಗಳಲ್ಲಿ ನಿಮಗೆ ಬೆಂಬಲ ನೀಡುವುದು:

ರಕ್ಷಣಾಧಿಕಾರಿಗಳು:

  • ಜಿಲ್ಲಾ ಕಾನೂನು ನೆರವು ಪ್ರಾಧಿಕಾರದ ವತಿಯಿಂದ ಉಚಿತ ಕಾನೂನು ನೆರವು ಪಡೆಯುವಲ್ಲಿ ನಿಮ್ಮ ಸಹಾಯ ಮಾಡಬಲ್ಲರು
  • ನ್ಯಾಯಾಲಯದ ಪ್ರಕ್ರಿಯೆಯ ಸಂದರ್ಭದಲ್ಲಿ ನಿಮಗೆ/ನಿಮ್ಮ ಮಗುವಿಗೆ ಕಿರುಕುಳ ಕೊಟ್ಟವರಿಂದ ಒತ್ತಡ/ಹಿಂಸೆ ಆಗಲಾರದಂತೆ ನೋಡಿಕೊಳ್ಳಬಲ್ಲರು

ಕೌಟುಂಬಿಕ ಹಿಂಸೆಯ ಕಾರಣ ನ್ಯಾಯಾಲಯಕ್ಕೆ ಹೇಗೆ ಹೋಗಬಹುದು?

ನೀವು ಕೌಟುಂಬಿಕ ಹಿಂಸೆಯನ್ನು ಅನುಭವಿಸಿದ್ದಲ್ಲಿ, ತಕ್ಷಣದ ಸಹಾಯ ಮತ್ತು ರಕ್ಷಣೆಗಾಗಿ ನ್ಯಾಯಾಲಯದಲ್ಲಿ (ಸಿವಿಲ್ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ಅಥವಾ ಸತ್ರ ನ್ಯಾಯಾಲಯ) ಅರ್ಜಿ ಸಲ್ಲಿಸಬಹುದು. ಇದನ್ನು ಮಾಡಲು ವಕೀಲರ ನೆರವನ್ನು ಪಡೆಯಿರಿ. ನಿಮ್ಮ ಬಳಿ ವಕೀಲರಿಲ್ಲದಿದ್ದರೆ, ರಕ್ಷಣಾಧಿಕಾರಿಗಳನ್ನು, ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ – ಅವರು ನಿಮಗೆ ಕಾನೂನು ನೆರವು ಸೇವೆಯ ಸಂಪರ್ಕ ದೊರಕಿಸಿಕೊಡುತ್ತಾರೆ.

ಕಾನೂನಿನಡಿ ನಿಮ್ಮ ಪ್ರಕರಣ ಕೌಟುಂಬಿಕ ಹಿಂಸೆಯದ್ದಾಗಿದೆಯೋ ಇಲ್ಲವೋ ಎಂದು ನಿರ್ಧರಿಸಲು ನ್ಯಾಯಾಲಯ ಕೆಳಗಿನ ಅಂಶಗಳನ್ನು ಪರಿಗಣಿಸುತ್ತದೆ:

  • ನೀವು ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆಯಾಗಿದ್ದೀರಿ.
  • ಹಿಂಸೆ ನಡೆದಾಗ, ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿತ್ತು
  • ಕಿರುಕುಳ ಕೊಟ್ಟ ವ್ಯಕತಿಯ ಜೊತೆ ನೀವು ಒಂದೇ ಮನೆಯಲ್ಲಿ ಹಿಂದೆ ವಾಸವಾಗಿದ್ದಿರಿ/ ಇನ್ನೂ ವಾಸಿಸುತ್ತಿದ್ದೀರಿ

ಅರ್ಜಿ ಸಲ್ಲಿಸಿದ ೩ ದಿನಗಳೊಳಗೆ, ರಕ್ಷಣಾಧಿಕಾರಿಗಳ ನೆರವಿನಿಂದ, ನಿಮಗೆ ಕಿರುಕುಳ ಕೊಟ್ಟವರಿಗೆ ಸೂಚನೆ ಕಳಿಸಲಾಗುತ್ತದೆ ಮತ್ತು ನಿಮ್ಮ ಪ್ರಕರಣವನ್ನು ದಾಖಲಿಸಲಾಗುತ್ತದೆ. ನಿಮಗೆ ರಕ್ಷಣೆ, ಧನ ಸಹಾಯ, ಅಥವಾ ಇನ್ನಿತರೇ ಸಹಾಯಗಳನ್ನು, ತಾತ್ಕಾಲಿಕ ಆದೇಶಗಳ ಮೂಲಕ ನ್ಯಾಯಾಲಯವು ದೊರಕಿಸಿಕೊಡುತ್ತದೆ.

ನ್ಯಾಯಾಲಯದ ಆದೇಶಗಳು:

ಒಮ್ಮೆ ನಿಮ್ಮ ಪ್ರಕರಣ ಕೌಟುಂಬಿಕ ಹಿಂಸೆಯದ್ದು ಎಂದು ನ್ಯಾಯಾಲಯಕ್ಕೆ ಖಾತರಿ ಆದಾಗ, ನಿಮ್ಮ ವಕೀಲರು ನ್ಯಾಯಾಲಯಕ್ಕೆ ಕೆಳಗಿನ ಮನವಿಗಳನ್ನು ಮಾಡಬಹುದು:

  • ಹಿಂಸೆಯ ವಿರುದ್ಧ ಕಿರುಕುಳ ಕೊಟ್ಟವರಿಂದ ರಕ್ಷಣೆ. ಇದಕ್ಕೆ ರಕ್ಷಣಾ ಆದೇಶ ಎನ್ನುತ್ತಾರೆ.
  • ನಿಮಗೆ ಮತ್ತು ನಿಮ್ಮ ಮಗುವಿಗೆ ಧನ ಸಹಾಯ. ಇದಕ್ಕೆ ಜೀವನೋಪಾಯದ ಆದೇಶ ಎನ್ನುತ್ತಾರೆ.
  • ನಿಮ್ಮ ಮನೆಯಲ್ಲಿ ವಾಸ ಮಾಡುವ ಆದೇಶ. ಇದಕ್ಕೆ ನಿವಾಸದ ಆದೇಶ ಎನ್ನುತ್ತಾರೆ.

ಕೌಟುಂಬಿಕ ಹಿಂಸೆ ಕಾನೂನಿನಡಿ ನಿವಾಸದ ಆದೇಶವೆಂದರೇನು?

ನಿಮ್ಮನ್ನು ಕಿರುಕುಳ ಕೊಡುತ್ತಿರುವವರು ಮನೆಯಿಂದಾಚೆ ತಳ್ಳುತ್ತಿದ್ದಲ್ಲಿ, ಅಥವಾ ನಿಮಗೆ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂದು ಅನಿಸಿದ್ದಲ್ಲಿ, ನಿಮ್ಮ ವಕೀಲರು ಅಥವಾ ರಕ್ಷಣಾಧಿಕಾರಿಗಳ ಸಹಾಯದಿಂದ ನ್ಯಾಯಾಲಯದ ಸಹಾಯ ಪಡೆಯಬಹುದು. ನಿವಾಸದ ಆದೇಶ ಕೆಳಗಿನಂತೆ ನಿಮಗೆ ಅನುಕೂಲವಾಗುತ್ತದೆ:

೧. ಮನೆಯಲ್ಲಿ ವಾಸ ಮಾಡುವುದು:

ನಿವಾಸದ ಆದೇಶದ ಮೇರೆಗೆ, ಕಿರುಕುಳ ಕೊಡುತ್ತಿರುವವರು ನಿಮ್ಮನ್ನು ಮನೆಯಿಂದ ಆಚೆ ತಳ್ಳುವಂತಿಲ್ಲ, ಅಥವಾ ಆಚೆ ಹೋಗು ಅಂತ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿಸಬಹುದು. ನೀವು ದಂಪತಿಗಳಾಗಿ (ಗಂಡ-ಹೆಂಡತಿ, ಅಥವಾ ಲಿವ್-ಇನ್ ಸಂಗಾತಿಗಳಾಗಿ) ಯಾವ ಮನೆಯಲ್ಲಿ ವಾಸವಾಗಿದ್ದಿರೋ, ಆ ಮನೆಯಲ್ಲಿ ವಾಸಿಸುವ ಹಕ್ಕು, ಕೆಳಗಿನ ಸಂದರ್ಭಗಳಲ್ಲೂ ನಿಮಗಿದೆ:

  • ಆ ಮನೆಯ ಮೇಲೆ ನಿಮಗೆ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ
  • ಕಿರುಕುಳ ಕೊಟ್ಟವರು ಆ ಮನೆಯಲ್ಲಿ ಇನ್ನು ವಾಸವಾಗಿಲ್ಲದಿದ್ದರೂ
  • ಕಿರುಕುಳ ಕೊಟ್ಟವರಿಗೆ ಆ ಮನೆಯಲ್ಲಿ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ

೨. ಕಿರುಕುಳ ಕೊಟ್ಟವರಿಂದ ನಿಮ್ಮನ್ನು ದೂರವಿಡುವುದು:

ಕಿರುಕುಳ ಕೊಟ್ಟವರಿಗೆ ಕೆಳಗಿನ ಆದೇಶಗಳನ್ನು ನ್ಯಾಯಾಲಯ ಕೊಡಬಹುದು:

  • ಮನೆಯನ್ನು ಬಿಟ್ಟು ಹೋಗುವುದಾಗಿ. ಈ ಆದೇಶ ಕಿರುಕುಳ ಕೊಟ್ಟವರ ನೆಂಟರನ್ನುದ್ದೇಶಿಸಿ ಕೂಡ ಕೊಡಬಹುದಾಗಿದೆ. ಆದರೆ, ಕೇವಲ ಪುರುಷರ ವಿರುದ್ಧ ಈ ಆದೇಶವನ್ನು ಹೊರಡಿಸಬಹುದು.
  • ಮನೆಯಲ್ಲಿ ಕಾಲಿಡದಂತೆ ಆದೇಶ ಹೊರಡಿಸುವುದು

೩. ನಿಮಗೆ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಿಕೊಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಸೌಲಭ್ಯಗಳನ್ನು ನಿಮಗೆ ಒದಗಿಸಲಿ ಎಂದು ಆದೇಶ ಹೊರಡಿಸುವುದು:

  • ಆರಾಮದಾಯಕ ಮತ್ತು ಗೌರವಾಂವಿತ ವಸತಿಗೆ ಬೇಕಾದ ಎಲ್ಲ ಅಗತ್ಯವಾದ ಸೌಲಭ್ಯಗಳುಳ್ಳ ಮನೆಯ ಒಂದು ಭಾಗ ನಿಮಗೆ ಕೊಟ್ಟು, ಆ ಭಾಗವನ್ನು ಅವರು ಪ್ರವೇಶಿಸುವಂತಿಲ್ಲ ಎಂದು ಆದೇಶಿಸುವುದು
  • ನಿಮಗೋಸ್ಕರ ಬೇರೆ ಮನೆ ಖರೀದಿಸಿ, ಅಥವಾ ಬಾಡಿಗೆಗೆ ಧನ ಸಹಾಯ ಮಾಡಬೇಕೆಂಬ ಆದೇಶ.

೪. ನಿಮ್ಮ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳನ್ನು ಕಾಪಾಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಕೆಲಸಗಳನ್ನು ಮಾಡಬಾರದೆಂದು ನ್ಯಾಯಾಲಯ ಆದೇಶಿಸಬಹುದು:

  • ಮನೆಯನ್ನು ಮಾರುವುದು, ಗುತ್ತಿಗೆಗೆ ಕೊಡುವುದು, ಅಥವಾ ಅಡುವು ಇಡುವುದು.
  • ಜಂಟಿ-ಮಾಲೀಕತ್ವದಲ್ಲಿನ ಮನೆಯ ಮೇಲಿನ ಹಕ್ಕುಗಳನ್ನು ತ್ಯಜಿಸುವುದು. ಉದಾಹರಣೆಗೆ, ಆ ಮನೆಯನ್ನು ಮಾರುವುದು.

ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗೆ ಬೇಕಾದ ಬೇರೆ ಯಾವ ಶರತ್ತುಗಳನ್ನಾದರೂ ಪಾಲಿಸಬೇಕೆಂದು ನ್ಯಾಯಾಲಯವು ಆದೇಶಿಸಬಹುದು.

ಕೌಟುಂಬಿಕ ಹಿಂಸೆಯಾದಲ್ಲಿ ಧನ ಸಹಾಯ ಅಥವಾ ಜೀವನಾಂಶ ಹೇಗೆ ಪಡೆಯಬಹುದು?

ಕಿರುಕುಳ ನೀಡಿದವರಿಂದ ನಿಮಗೆ ಹಣ/ಜೀವನಾಂಶ ಬೇಕಾದಲ್ಲಿ, ವಕೀಲರ ಅಥವಾ ರಕ್ಷಣಾಧಿಕಾರಿಗಳ ನೆರವಿನಿಂದ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ನಿಮಗೆ ಮತ್ತು ನಿಮ್ಮ ಮಗುವಿಗೆ, ಹಿಂಸೆ ಮತ್ತು ಅತ್ಯಾಚಾರದಿಂದಾದ ಎಲ್ಲ ಹಾನಿ ಮತ್ತು ಅನ್ಯಾಯಗಳನ್ನು ಸರಿದೂಗಿಸಲು ನ್ಯಾಯಾಲಯ ಜೀವನಾಂಶದ ಆದೇಶವನ್ನು ಹೊರಡಿಸುತ್ತದೆ. ಈ ಹಣ ನಿಮಗೆ ನ್ಯಾಯಾಲಯದ ಆದೇಶದಂತೆ, ಮಾಸಿಕವಾಗಿ, ಅಥವಾ ಒಮ್ಮೆಲೇ ಭಾರಿ ಮೊತ್ತವಾಗಿ ಲಭಿಸಬಲ್ಲುದು. ನಿಮ್ಮ ಜೀವನಶೈಲಿಯ ಗುಣಮಟ್ಟದನುಸಾರ ಈ ಹಣದ ಮೊತ್ತವನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಕೆಳಗಿನ ಹಾನಿಗಳನ್ನು ಸರಿಪಡಿಸಲು ನಿಮಗೆ ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡಬೇಕೆಂದು ನ್ಯಾಯಾಲಯ ನಿರ್ಧರಿಸುತ್ತದೆ:

  • ನೀವು ಕಳೆದುಕೊಂಡ ಆದಾಯ: ಉದಾಹರಣೆಗೆ, ನಿಮಗೆ ಕೆಲಸ ಮಾಡಲು ಅನುಮತಿ ನೀಡದಿದ್ದ ಕಾರಣ, ಅಥವಾ ಹಿಂಸೆಗೆ ಬಲಿಯಾಗಿ ನೀವು ಒಂದು ತೊಂಗಲು ಆಸ್ಪತ್ರೆಯಲ್ಲಿ ದಾಖಲಿದ್ದಾಗಾದ ಆದಾಯದ ನಷ್ಟ
  • ಶಾರೀರಿಕ ಪೆಟ್ಟುಗಳು ಮತ್ತು ವೈದ್ಯಕೀಯ ಖರ್ಚು: ಉದಾಹರಣೆಗೆ, ಆಸ್ಪತ್ರೆ ಬಿಲ್ ಮತ್ತು ಔಷಧಿಗಳಿಗೆ ದುಡ್ಡು
  • ಆಸ್ತಿಗೆ ಆದ ನಷ್ಟ ಅಥವಾ ಆಸ್ತಿ ಕಸೆದುಕೊಂಡಿದ್ದರಿಂದಾದ ಹಾನಿ: ಉದಾಹರಣೆಗೆ, ನಿಮ್ಮ ಒಡವೆಗಳು ಅಥವಾ ಜಾಮೀನು. ನಿಮಗೆ ಇಂತಹ ಬೆಲೆ ಬಾಳುವ ವಸ್ತುಗಳನ್ನು ತಿರುಗಿ ಕೊಡುವುದಾಗಿ ನ್ಯಾಯಾಲಯ ಆದೇಶಿಸಬಲ್ಲುದು.
  • ನಿಮ್ಮ ಜೀವನ ನಿರ್ವಹಣೆಗೆ: ಉದಾಹರಣೆಗೆ, ಮನೆ ಬಾಡಿಗೆ, ನಿಮ್ಮ ಮತ್ತು ನಿಮ್ಮ ಮಗುವಿನ ದೈನಂದಿನ ಖರ್ಚುಗಳು, ಇತ್ಯಾದಿ.
  • ಮಾನಸಿಕ ಕಿರುಕುಳ ಮತ್ತು ಭಾವನಾತ್ಮಕ ಯಾತನೆ: ನಿಮ್ಮ ಜೀವನಕ್ಕೆ ಮತ್ತು ಉದ್ಯೋಗಕ್ಕೆ ಧಕ್ಕೆ ತರುವಂತೆ ನಿಮಗಾದ ಯಾತನೆ.

ನೀವು ಉಪಯೋಗಿಸಬಹುದಾದ ಕಾನೂನುಗಳು:

ಕೆಳಗಿನ ಈ ಎರಡು ಕಾನೂನುಗಳಡಿ, ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡಬೇಕೆಂದು ನೀವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು: ಕೌಟುಂಬಿಕ ಹಿಂಸೆ ಕಾನೂನು (ಸೆಕ್ಷನ್ ೨೦/೨೨) ಮತ್ತು ಅಪರಾಧಿಕ ಕಾನೂನು (ಸೆಕ್ಷನ್ ೧೨೫, ದಂಡ ಪ್ರಕ್ರಿಯೆ ಸಂಹಿತೆ).ಈ ಎರಡೂ ಕಾನೂನುಗಳನ್ನು ಬಳಸಿ ಜೀವನಾಂಶ ಪಡೆಯಲು ನಿಮ್ಮ ವಕೀಲರ ನೆರವು ಪಡೆಯಿರಿ.

ಹಣ ಪಾವತಿ ವಿಫಲವಾದಲ್ಲಿ:

ನ್ಯಾಯಾಲಯದ ಆದೇಶದ ಮೇರೆಗೆ ನಿಮಗೆ ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡದಿದ್ದಲ್ಲಿ, ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಈ ವಿಷಯವನ್ನು ತಿಳಿಸಬೇಕು. ಆವಾಗ, ಕೆಳಗಿನವರಿಂದ ನ್ಯಾಯಾಲಯ ಜೀವನಾಂಶ ವಸೂಲಿ ಮಾಡುತ್ತದೆ:

  • ಕಿರುಕುಳ ಕೊಟ್ಟವರ ಆದಾಯದಿಂದ ಜೀವನಾಂಶದ ಹಣವನ್ನು ಕಡಿದು ನೇರವಾಗಿ ನ್ಯಾಯಾಲಯಕ್ಕೆ ಪಾವತಿಸಬೇಕಾಗಿ ಅವರ ಉದ್ಯೋಗದಾತರಿಗೆ ಆದೇಶಿಸುತ್ತದೆ.
  • ಕಿರುಕುಳ ಕೊಟ್ಟವರ ಸಾಲಗಾರರಿಂದ ನೇರವಾಗಿ ನ್ಯಾಯಾಲಯ ಹಣ ಪಡೆದು, ಅದನ್ನು ನಿಮಗೆ ಕೊಡುವುದಾಗಿ ಆದೇಶಿಸುತ್ತದೆ.