ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ ಶಿಕ್ಷೆಗಳು

ನೀವು ಯಾವುದೇ ಕಾನೂನಿನಡಿಯಲ್ಲಿ ದತ್ತು ತೆಗೆದುಕೊಂಡಿರಲಿ, ಕೆಳಗಿನವುಗಳನ್ನು ಮಾಡಿದರೆ ನಿಮಗೆ ಶಿಕ್ಷೆಯಾಗುತ್ತದೆ:

೧. ಅಕ್ರಮವಾಗಿ ಮಗುವನ್ನು ಹೊರದೇಶಕ್ಕೆ ಕರೆದೊಯ್ಯುವುದು:

ನ್ಯಾಯಾಲಯದ ಮಾನ್ಯ ಆದೇಶವಿಲ್ಲದೆ ನೀವು ಮಗುವನ್ನು ನಿಮ್ಮ ಜೊತೆ ಅಥವಾ ಬೇರೆಯವರ ಜೊತೆ ಪರದೇಶಕ್ಕೆ ಕರೆದೊಯ್ದರೆ, ಅಥವಾ ಮಗುವನ್ನು ಬೇರೆ ದೇಶಕ್ಕೆ ಕಲಿಸಲು ವ್ಯವಸ್ಥೆಗಳನ್ನು ಮಾಡಿದರೆ, ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು.

೨. ಮಗುವನ್ನು ತ್ಯಜಿಸುವುದು/ ನಿರ್ಲಕ್ಷಿಸುವುದು/ ದೌರ್ಜನ್ಯಕ್ಕೆ ಬಲಿಮಾಡುವುದು:

  • -೧೨ ವರ್ಷಗಳೊಳಗಿನ ಮಗುವನ್ನು ನೀವು ಅದರ ಪೋಷಕರು/ಪಾಲಕರು/ತಂದೆ-ತಾಯಿಯಾಗಿ, ಉದ್ದೇಶಪೂರ್ವಕವಾಗಿ ನೀವು ತ್ಯಜಿಸಿದರೆ, ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ದಂಡ ವಿಧಿಸಲಾಗುವುದು.
  • -ನೀವು ಮಗುವಿನ ತಂದೆ-ತಾಯಿ/ಪಾಲಕರು/ಪೋಷಕರಾಗಿ, ಆ ಮಗುವಿಗೆ ಅನಗತ್ಯವಾದ ಮಾನಸಿಕ ಅಥವಾ ದೈಹಿಕ ನೋವು ಉಂಟಾಗುವಂತೆ, ದಾಳಿ ಮಾಡುವುದು, ತ್ಯಜಿಸುವುದು, ದೌರ್ಜನ್ಯ ಎಸಗುವುದು, ಉದ್ದೇಶಪೂರ್ವಕವಾಗಿ ಮಗುವನ್ನು ನಿರ್ಲಕ್ಷಿಸುವುದು, ಇತ್ಯಾದಿ ಮಾಡಿದರೆ, ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು. ಇಂತಹ ಕ್ರೌರ್ಯದಿಂದ ಆ ಮಗು ದೈಹಿಕವಾಗಿ ಅಶಕ್ತಗೊಂಡಲ್ಲಿ, ಅಥವಾ ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅಥವಾ ಜೀವನದ ಸಾಮಾನ್ಯ ಕಾರ್ಯಗಳನ್ನು ಮಾಡಲು ಆಗಲಾರದಂತೆ ಆದರೆ ನಿಮಗೆ ೩-೧೦ ವರ್ಷಗಳ ಸೆರೆಮನೆ ವಾಸ ಮತ್ತು ೫ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು.

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿಯಲ್ಲಿ ಕೆಳಗಿನ ದುಷ್ಕೃತ್ಯಗಳನ್ನು ಮಾಡಿದರೆ ಉಲ್ಲೇಖಿಸಲಾದ ದಂಡ ವಿಧಿಸಲಾಗುವುದು:

-ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸಿ ನೀವು ಯಾವುದೇ ಅನಾಥ/ತ್ಯಜಿಸಲಾದ/ಬಿಟ್ಟುಕೊಟ್ಟ ಮಗುವನ್ನು ದತ್ತಕ್ಕೆ ತೆಗೆದುಕೊಂಡರೆ/ಕೊಟ್ಟರೆ, ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು/ಅಥವಾ ೧ ಲಕ್ಷ ರೂಪಾಯಿಗಳ ದಂಡ ವಿಧಿಸಲಾಗುವುದು. ಪ್ರಮಾಣೀಕೃತ ದತ್ತು ಸ್ವೀಕೃತಿ ಸಂಸ್ಥೆಯು ಈ ಅಪರಾಧವನ್ನು ಮಾಡಿದರೆ, ಮೇಲೆ ಉಲ್ಲೇಖಿಸಿದ ದಂಡಗಳನ್ನು ಸೇರಿದಂತೆ, ಆ ಸಂಸ್ಥೆಯ ನೋಂದಣಿ ಮತ್ತು ಮಾನ್ಯತೆಯನ್ನು ಕನಿಷ್ಟ ೧ ವರ್ಷದ ವರೆಗೆ ಹಿಂತೆಗೆದುಕೊಳ್ಳಲಾಗುತ್ತದೆ.

ಹಿಂದೂ ದತ್ತು ಸ್ವೀಕಾರ ಕಾನೂನಿನಡಿ ಕೆಳಗಿನ ಅಪರಾಧಗಳನ್ನು ಮಾಡಿದರೆ ನಿಮಗೆ ದಂಡ ವಿಧಿಸಲಾಗುವುದು:

-ದತ್ತು ಸ್ವೀಕೃತಿಯ ಸಲುವಾಗಿ ಹಣದ ಪಾವತಿ, ಅಥವಾ ಇನ್ನಿತರ ಬಹುಮಾನವನ್ನು ಕೊಡುವುದು/ತೆಗೆದುಕೊಳ್ಳುವುದು ಮಾಡಿದರೆ, ರಾಜ್ಯ ಸರ್ಕಾರದ ಅನುಮತಿಯ ಮೇರೆಗೆ, ಗರಿಷ್ಟ ೬ ತಿಂಗಳುಗಳ ಸೆರೆಮನೆ ವಾಸ ಮತ್ತು/ಅಥವಾ ದಂಡ ವಿಧಿಸಲಾಗುವುದು.

ಸಹಾಯ ಮತ್ತು ಸಹಕಾರ

ನಿಮಗೆ ದತ್ತು ಸ್ವೀಕೃತಿಯ ಸಂಬಂಧಪಟ್ಟಂತೆ ಯಾವುದೇ ಸಹಾಯ, ಸಹಕಾರ ಬೇಕಾಗಿದ್ದಲ್ಲಿ, ಅಥವಾ ಯಾವುದೇ ಸಮಸ್ಯೆಗೆ ಪರಿಹಾರ ಬೇಕಿದ್ದಲ್ಲಿ, ಕೆಳಗಿನ ಅಧಿಕಾರಿಗಳನ್ನು ಸಂಪರ್ಕಿಸಿ:

ಮಕ್ಕಳ ದತ್ತು ಸ್ವೀಕಾರ ಸಂಪನ್ಮೂಲ ಅಧಿಕಾರ: ಈ ಸಂಸ್ಥೆಯು ಅದರ ಸಂಬಂಧಿಸಿದ ಮತ್ತು ಅಧಿಕೃತ ದತ್ತು ಸ್ವೀಕೃತಿ ಸಂಸ್ಥೆಗಳ ತರಫಿನಿಂದ ಅನಾಥ, ತ್ಯಜಿಸಲಾದ, ಮತ್ತು ಬಿಟ್ಟುಕೊಡಲಾದ ಮಕ್ಕಳ ಧಾರ್ಮಿಕೇತರ ದತ್ತು ಸ್ವೀಕಾರವನ್ನು ನಿರ್ವಹಿಸುತ್ತದೆ.

  • ಸಂಸ್ಥೆಯ ಸಹಾಯವಾಣಿ ೧೮೦೦-೧೧-೧೩೧೧ಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ೯ರಿಂದ ಸಂಜೆ ೫.೩೦ರವರೆಗೆ ನೀವು ಕರೆ ಮಾಡಬಹುದು.
  • ಸಂಸ್ಥೆಯ ಇಮೇಲ್ ವಿಳಾಸ: carahdesk.wdc@nic.in

ನ್ಯಾಯಾಲಯಗಳ ಪಾತ್ರ

ದತ್ತು ಸ್ವೀಕೃತಿಯ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಮಹತ್ತರ ಪಾತ್ರ ನಿಭಾಯಿಸುತ್ತವೆ. ಈ ಪಾತ್ರಗಳು ಕೆಳಗಿನಂತಿವೆ:

ದತ್ತು ಸ್ವೀಕಾರದ ಆದೇಶ (ಧಾರ್ಮಿಕೇತರ ಕಾನೂನು):

ಧಾರ್ಮಿಕೇತರ ದತ್ತು ಸ್ವೀಕಾರ ಕಾನೂನಿನಡಿಯಲ್ಲಿ ವಿಶೇಷ ದತ್ತು ಸ್ವೀಕಾರ ಸಂಸ್ಥೆಗಳು ನ್ಯಾಯಾಲಯಕ್ಕೆ ಸಂಬಂಧಪಟ್ಟ ದಾಖಲೆಗಳ ಜೊತೆ ದತ್ತು ಸ್ವೀಕಾರದ ಅರ್ಜಿ ಸಲ್ಲಿಸುತ್ತವೆ. ನ್ಯಾಯಾಲಯವು ದತ್ತು ಸ್ವೀಕಾರದ ಆದೇಶ ನೀಡಬೇಕೋ ಬೇಡವೋ ಎಂದು ಈ ದಾಖಲೆಗಳನ್ನು ಪರಿಶೀಲಿಸಿ ನಿರ್ಧರಿಸುತ್ತದೆ. ಇಂತಹ ಅರ್ಜಿ ಕೆಳಗಿನ ದಾಖಲೆಗಳನ್ನು ಹೊಂದಿರುತ್ತದೆ:

  • ವಿಶೇಷ ದತ್ತು ಸ್ವೀಕಾರ ಸಂಸ್ಥೆ ಮತ್ತು ಸಹ ಅರ್ಜಿದಾರರ (ಉದಾಹರಣೆಗೆ, ಮಕ್ಕಳ ಆರೈಕೆ ಸಂಸ್ಥೆಗಳು) ವಿವರಗಳು
  • ಭಾವೀ ದತ್ತು ತಂದೆ-ತಾಯಿಯರ ವಿವರಗಳು – ಹೆಸರು, ಮಗುವಿನ ದತ್ತು ಸ್ವೀಕಾರ ಸಂಪನ್ಮೂಲ ವಿವರಗಳು, ಮತ್ತು ಮಾರ್ಗದರ್ಶನ ವ್ಯವಸ್ಥೆ ನೋಂದಣಿ ಸಂಖ್ಯೆ.
  • ದತ್ತು ಪಡೆಯಬೇಕಾದ ಮಗುವಿನ ವಿವರಗಳು
  • ಮಗು ಕಾನೂನುಬದ್ಧವಾಗಿ ದತ್ತಕ್ಕೆ ಕೊಡಲು ಯೋಗ್ಯವಿದೆ ಎಂದು ಪ್ರಮಾಣೀಕರಿಸಲಾದ ಪುರಾವೆ
  • ವಿಶೇಷ ದತ್ತು ಸ್ವೀಕಾರ ಸಂಸ್ಥೆಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತರಿಂದ ಮನೆ ಭೇಟಿ ನೀಡುವುದಕ್ಕೆ ಅನುಮತಿ ನೀಡುವಂತೆ ಭಾವೀ ದತ್ತು ತಂದೆ-ತಾಯಿಯರು ಸಹಿ ಮಾಡಿದ ದತ್ತು-ಪೂರ್ವ ಅನಾಥಾಲಯದ ಶಪಥಪತ್ರ
  • ದತ್ತು ಸ್ವೀಕೃತಿ ಸಮಿತಿಯ ನಿರ್ಣಯದ ಪ್ರತಿ

ಈ ದತ್ತು ಸ್ವೀಕೃತಿ ಆದೇಶವನ್ನು ಹೊರಡಿಸಿ ನ್ಯಾಯಾಲಯವು ತಂದೆ-ತಾಯಿಯರಿಗೆ ಮಗುವಿನ ದತ್ತು ತಂದೆ-ತಾಯಂದಿರಾಗಲು ಅನುಮತಿ ನೀಡುತ್ತದೆ. ಇಂತಹ ಆದೇಶವನ್ನು ಹೊರಡಿಸುವ ಮೊದಲು ನ್ಯಾಯಾಲಯವು ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡಿರುತ್ತದೆ:

  • ದತ್ತು ಸ್ವೀಕೃತಿಯು ಮಗುವಿನ ಕಲ್ಯಾಣಕ್ಕೆ ಆಗುತ್ತಿದೆ
  • ಮಗುವಿನ ವಯಸ್ಸು ಮತ್ತು ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯಾನುಸಾರ, ದತ್ತು ಸ್ವೀಕೃತಿಗೆ ಮಗುವಿನ ಒಪ್ಪಿಗೆ ಇದೆಯೋ ಇಲ್ಲವೋ
  • ದತ್ತು ತಂದೆ-ತಾಯಿಯರು ಮಗುವನ್ನು ದತ್ತಕ್ಕೆ ತೆಗದುಕೊಳ್ಳಲು ಯಾವುದೇ ಹಣದ ಪಾವತಿ ಅಥವಾ ಬಹುಮಾನವನ್ನು ಸ್ವೀಕರಿಸಿಲ್ಲ
  • ನ್ಯಾಯಾಲಯದಲ್ಲಿ ದತ್ತು ಸ್ವೀಕೃತಿಯ ಪ್ರಕ್ರಿಯೆ ಖಾಸಗಿಯಾಗಿ ನಡೆಯಬೇಕು

ದತ್ತು ಸ್ವೀಕಾರ ಮಾಡಲು ಅನುಮತಿ (ಹಿಂದೂ ಕಾನೂನು):

ಹಿಂದೂ ದತ್ತು ಸ್ವೀಕೃತಿ ಕಾನೂನಿನ ಪ್ರಕಾರ, ಪಾಲಕರು/ಪೋಷಕರಿಗೆ ಕೆಳಗಿನ ಸಂದರ್ಭಗಳಲ್ಲಿ, ಮಗುವನ್ನು ದತ್ತಕ್ಕೆ ತೆಗೆದುಕೊಳ್ಳಲು/ಕೊಡಲು ನ್ಯಾಯಾಲಯದ ಅನುಮತಿ ಬೇಕಾಗುತ್ತದೆ:

  • ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸತ್ತುಹೋಗಿದ್ದರೆ
  • ಮಗುವಿನ ತಂದೆ ಮತ್ತು ತಾಯಿ ಇಬ್ಬರೂ ಸಂಪೂರ್ಣವಾಗಿ ಲೋಕವನ್ನು ತ್ಯಜಿಸಿದ್ದರೆ
  • ಮಗುವನ್ನು ತಂದೆ ಮತ್ತು ತಾಯಿ ಇಬ್ಬರೂ ತ್ಯಜಿಸಿದ್ದಾಗ
  • ಸಂಬಂಧಪಟ್ಟ ನ್ಯಾಯಾಲಯವು ತಂದೆ ಮತ್ತು ತಾಯಿ ಇಬ್ಬರನ್ನೂ ಮಾನಸಿಕವಾಗಿ ಅಸ್ವಸ್ಥರೆಂದು ಘೋಷಿಸಿದ್ದರೆ ೫. ಮಗುವಿನ ತಂದೆ-ತಾಯಿ ಯಾರು ಎಂದು ಗೊತ್ತಿಲ್ಲದಿದ್ದಾಗ

ಮೇಲ್ಮನವಿ (ಧಾರ್ಮಿಕೇತರ ಮತ್ತು ಹಿಂದೂ ಕಾನೂನು):

ಧಾರ್ಮಿಕೇತರ ದತ್ತು ಸ್ವೀಕೃತಿ ಕಾನೂನಿನಡಿಯಲ್ಲಿ, ನೀವು ಮಗುವನ್ನು ದತ್ತು ತೆಗೆದುಕೊಳ್ಳುವಾಗ, ಸಂಬಂಧಪಟ್ಟ ಅಧಿಕಾರಿಗಳ ಆದೇಶಗಳಿಂದ ಅಸಂತೋಷಗೊಂಡಿದ್ದರೆ, ಅಥವಾ ನಿಮ್ಮ ದತ್ತು ಸ್ವೀಕೃತಿ ಅರ್ಜಿ ತಿರಸ್ಕಾರಗೊಂಡಿದ್ದರೆ, ಸಂಬಂಧಿಸಿದ ಆದೇಶ ಹೊರಡಿಸಿದ ೩೦ ದಿನಗಳ ಒಳಗೆ ಮಕ್ಕಳ ನ್ಯಾಯಾಲಯಕ್ಕೆ ನೀವು ಮೇಲ್ಮನವಿ ಮಾಡಬಹುದು. ನಿಗದಿಪಡಿಸಲಾದ ೩೦ ದಿನಗಳ ನಂತರವೂ, ನಿಮಗೆ ಮೇಲ್ಮನವಿ ಮಾಡಲಾಗದ ಹಾಗೆ ಸಾಕಾಷ್ಟು ಕಾರಣಗಳಿದ್ದವು ಎಂದು ನ್ಯಾಯಾಲಯ ನಂಬಿದರೆ, ನಿಮ್ಮ ಮೇಲ್ಮನವಿಯನ್ನು ನ್ಯಾಯಾಲಯವು ಸ್ವೀಕರಿಸಬಹುದು. ನ್ಯಾಯಾಲಯದ ಆದೇಶದಿಂದ ನೀವು ಅಸಂತುಷ್ಟಗೊಂಡಲ್ಲಿ ಸಂಬಂಧಿಸಿದ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ನೀವು ಮನವಿ ಸಲ್ಲಿಸಬಹುದು.

ಕೌಟುಂಬಿಕ ಹಿಂಸೆಯ ಕಾರಣ ನ್ಯಾಯಾಲಯಕ್ಕೆ ಹೇಗೆ ಹೋಗಬಹುದು?

ನೀವು ಕೌಟುಂಬಿಕ ಹಿಂಸೆಯನ್ನು ಅನುಭವಿಸಿದ್ದಲ್ಲಿ, ತಕ್ಷಣದ ಸಹಾಯ ಮತ್ತು ರಕ್ಷಣೆಗಾಗಿ ನ್ಯಾಯಾಲಯದಲ್ಲಿ (ಸಿವಿಲ್ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯ, ಅಥವಾ ಸತ್ರ ನ್ಯಾಯಾಲಯ) ಅರ್ಜಿ ಸಲ್ಲಿಸಬಹುದು. ಇದನ್ನು ಮಾಡಲು ವಕೀಲರ ನೆರವನ್ನು ಪಡೆಯಿರಿ. ನಿಮ್ಮ ಬಳಿ ವಕೀಲರಿಲ್ಲದಿದ್ದರೆ, ರಕ್ಷಣಾಧಿಕಾರಿಗಳನ್ನು, ಅಥವಾ ಸರ್ಕಾರೇತರ ಸಂಸ್ಥೆಗಳನ್ನು ಸಂಪರ್ಕಿಸಿ – ಅವರು ನಿಮಗೆ ಕಾನೂನು ನೆರವು ಸೇವೆಯ ಸಂಪರ್ಕ ದೊರಕಿಸಿಕೊಡುತ್ತಾರೆ.

ಕಾನೂನಿನಡಿ ನಿಮ್ಮ ಪ್ರಕರಣ ಕೌಟುಂಬಿಕ ಹಿಂಸೆಯದ್ದಾಗಿದೆಯೋ ಇಲ್ಲವೋ ಎಂದು ನಿರ್ಧರಿಸಲು ನ್ಯಾಯಾಲಯ ಕೆಳಗಿನ ಅಂಶಗಳನ್ನು ಪರಿಗಣಿಸುತ್ತದೆ:

  • ನೀವು ಕೌಟುಂಬಿಕ ಹಿಂಸೆಗೆ ಒಳಗಾದ ಮಹಿಳೆಯಾಗಿದ್ದೀರಿ.
  • ಹಿಂಸೆ ನಡೆದಾಗ, ನಿಮಗೆ ಕಿರುಕುಳ ಕೊಟ್ಟ ವ್ಯಕ್ತಿಯ ಜೊತೆ ನಿಮಗೆ ಕೌಟುಂಬಿಕ ಸಂಬಂಧವಿತ್ತು
  • ಕಿರುಕುಳ ಕೊಟ್ಟ ವ್ಯಕತಿಯ ಜೊತೆ ನೀವು ಒಂದೇ ಮನೆಯಲ್ಲಿ ಹಿಂದೆ ವಾಸವಾಗಿದ್ದಿರಿ/ ಇನ್ನೂ ವಾಸಿಸುತ್ತಿದ್ದೀರಿ

ಅರ್ಜಿ ಸಲ್ಲಿಸಿದ ೩ ದಿನಗಳೊಳಗೆ, ರಕ್ಷಣಾಧಿಕಾರಿಗಳ ನೆರವಿನಿಂದ, ನಿಮಗೆ ಕಿರುಕುಳ ಕೊಟ್ಟವರಿಗೆ ಸೂಚನೆ ಕಳಿಸಲಾಗುತ್ತದೆ ಮತ್ತು ನಿಮ್ಮ ಪ್ರಕರಣವನ್ನು ದಾಖಲಿಸಲಾಗುತ್ತದೆ. ನಿಮಗೆ ರಕ್ಷಣೆ, ಧನ ಸಹಾಯ, ಅಥವಾ ಇನ್ನಿತರೇ ಸಹಾಯಗಳನ್ನು, ತಾತ್ಕಾಲಿಕ ಆದೇಶಗಳ ಮೂಲಕ ನ್ಯಾಯಾಲಯವು ದೊರಕಿಸಿಕೊಡುತ್ತದೆ.

ನ್ಯಾಯಾಲಯದ ಆದೇಶಗಳು:

ಒಮ್ಮೆ ನಿಮ್ಮ ಪ್ರಕರಣ ಕೌಟುಂಬಿಕ ಹಿಂಸೆಯದ್ದು ಎಂದು ನ್ಯಾಯಾಲಯಕ್ಕೆ ಖಾತರಿ ಆದಾಗ, ನಿಮ್ಮ ವಕೀಲರು ನ್ಯಾಯಾಲಯಕ್ಕೆ ಕೆಳಗಿನ ಮನವಿಗಳನ್ನು ಮಾಡಬಹುದು:

  • ಹಿಂಸೆಯ ವಿರುದ್ಧ ಕಿರುಕುಳ ಕೊಟ್ಟವರಿಂದ ರಕ್ಷಣೆ. ಇದಕ್ಕೆ ರಕ್ಷಣಾ ಆದೇಶ ಎನ್ನುತ್ತಾರೆ.
  • ನಿಮಗೆ ಮತ್ತು ನಿಮ್ಮ ಮಗುವಿಗೆ ಧನ ಸಹಾಯ. ಇದಕ್ಕೆ ಜೀವನೋಪಾಯದ ಆದೇಶ ಎನ್ನುತ್ತಾರೆ.
  • ನಿಮ್ಮ ಮನೆಯಲ್ಲಿ ವಾಸ ಮಾಡುವ ಆದೇಶ. ಇದಕ್ಕೆ ನಿವಾಸದ ಆದೇಶ ಎನ್ನುತ್ತಾರೆ.

ಕೌಟುಂಬಿಕ ಹಿಂಸೆ ಕಾನೂನಿನಡಿ ನಿವಾಸದ ಆದೇಶವೆಂದರೇನು?

ನಿಮ್ಮನ್ನು ಕಿರುಕುಳ ಕೊಡುತ್ತಿರುವವರು ಮನೆಯಿಂದಾಚೆ ತಳ್ಳುತ್ತಿದ್ದಲ್ಲಿ, ಅಥವಾ ನಿಮಗೆ ಮನೆಯಲ್ಲಿರುವುದು ಸುರಕ್ಷಿತವಲ್ಲ ಎಂದು ಅನಿಸಿದ್ದಲ್ಲಿ, ನಿಮ್ಮ ವಕೀಲರು ಅಥವಾ ರಕ್ಷಣಾಧಿಕಾರಿಗಳ ಸಹಾಯದಿಂದ ನ್ಯಾಯಾಲಯದ ಸಹಾಯ ಪಡೆಯಬಹುದು. ನಿವಾಸದ ಆದೇಶ ಕೆಳಗಿನಂತೆ ನಿಮಗೆ ಅನುಕೂಲವಾಗುತ್ತದೆ:

೧. ಮನೆಯಲ್ಲಿ ವಾಸ ಮಾಡುವುದು:

ನಿವಾಸದ ಆದೇಶದ ಮೇರೆಗೆ, ಕಿರುಕುಳ ಕೊಡುತ್ತಿರುವವರು ನಿಮ್ಮನ್ನು ಮನೆಯಿಂದ ಆಚೆ ತಳ್ಳುವಂತಿಲ್ಲ, ಅಥವಾ ಆಚೆ ಹೋಗು ಅಂತ ಒತ್ತಾಯ ಮಾಡುವಂತಿಲ್ಲ ಎಂದು ನ್ಯಾಯಾಲಯ ತೀರ್ಪಿಸಬಹುದು. ನೀವು ದಂಪತಿಗಳಾಗಿ (ಗಂಡ-ಹೆಂಡತಿ, ಅಥವಾ ಲಿವ್-ಇನ್ ಸಂಗಾತಿಗಳಾಗಿ) ಯಾವ ಮನೆಯಲ್ಲಿ ವಾಸವಾಗಿದ್ದಿರೋ, ಆ ಮನೆಯಲ್ಲಿ ವಾಸಿಸುವ ಹಕ್ಕು, ಕೆಳಗಿನ ಸಂದರ್ಭಗಳಲ್ಲೂ ನಿಮಗಿದೆ:

  • ಆ ಮನೆಯ ಮೇಲೆ ನಿಮಗೆ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ
  • ಕಿರುಕುಳ ಕೊಟ್ಟವರು ಆ ಮನೆಯಲ್ಲಿ ಇನ್ನು ವಾಸವಾಗಿಲ್ಲದಿದ್ದರೂ
  • ಕಿರುಕುಳ ಕೊಟ್ಟವರಿಗೆ ಆ ಮನೆಯಲ್ಲಿ ಕಾನೂನಾತ್ಮಕ ಪಾಲು, ಹಕ್ಕು, ಅಥವಾ ಮಾಲೀಕತ್ವ ಇಲ್ಲದಿದ್ದರೂ

೨. ಕಿರುಕುಳ ಕೊಟ್ಟವರಿಂದ ನಿಮ್ಮನ್ನು ದೂರವಿಡುವುದು:

ಕಿರುಕುಳ ಕೊಟ್ಟವರಿಗೆ ಕೆಳಗಿನ ಆದೇಶಗಳನ್ನು ನ್ಯಾಯಾಲಯ ಕೊಡಬಹುದು:

  • ಮನೆಯನ್ನು ಬಿಟ್ಟು ಹೋಗುವುದಾಗಿ. ಈ ಆದೇಶ ಕಿರುಕುಳ ಕೊಟ್ಟವರ ನೆಂಟರನ್ನುದ್ದೇಶಿಸಿ ಕೂಡ ಕೊಡಬಹುದಾಗಿದೆ. ಆದರೆ, ಕೇವಲ ಪುರುಷರ ವಿರುದ್ಧ ಈ ಆದೇಶವನ್ನು ಹೊರಡಿಸಬಹುದು.
  • ಮನೆಯಲ್ಲಿ ಕಾಲಿಡದಂತೆ ಆದೇಶ ಹೊರಡಿಸುವುದು

೩. ನಿಮಗೆ ಪರ್ಯಾಯ ವಸತಿ ಸೌಲಭ್ಯ ಕಲ್ಪಿಸಿಕೊಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಸೌಲಭ್ಯಗಳನ್ನು ನಿಮಗೆ ಒದಗಿಸಲಿ ಎಂದು ಆದೇಶ ಹೊರಡಿಸುವುದು:

  • ಆರಾಮದಾಯಕ ಮತ್ತು ಗೌರವಾಂವಿತ ವಸತಿಗೆ ಬೇಕಾದ ಎಲ್ಲ ಅಗತ್ಯವಾದ ಸೌಲಭ್ಯಗಳುಳ್ಳ ಮನೆಯ ಒಂದು ಭಾಗ ನಿಮಗೆ ಕೊಟ್ಟು, ಆ ಭಾಗವನ್ನು ಅವರು ಪ್ರವೇಶಿಸುವಂತಿಲ್ಲ ಎಂದು ಆದೇಶಿಸುವುದು
  • ನಿಮಗೋಸ್ಕರ ಬೇರೆ ಮನೆ ಖರೀದಿಸಿ, ಅಥವಾ ಬಾಡಿಗೆಗೆ ಧನ ಸಹಾಯ ಮಾಡಬೇಕೆಂಬ ಆದೇಶ.

೪. ನಿಮ್ಮ ಆಸ್ತಿ ಮತ್ತು ಹಣಕಾಸಿನ ವ್ಯವಹಾರಗಳನ್ನು ಕಾಪಾಡುವುದು:

ಕಿರುಕುಳ ಕೊಟ್ಟವರು ಕೆಳಗಿನ ಕೆಲಸಗಳನ್ನು ಮಾಡಬಾರದೆಂದು ನ್ಯಾಯಾಲಯ ಆದೇಶಿಸಬಹುದು:

  • ಮನೆಯನ್ನು ಮಾರುವುದು, ಗುತ್ತಿಗೆಗೆ ಕೊಡುವುದು, ಅಥವಾ ಅಡುವು ಇಡುವುದು.
  • ಜಂಟಿ-ಮಾಲೀಕತ್ವದಲ್ಲಿನ ಮನೆಯ ಮೇಲಿನ ಹಕ್ಕುಗಳನ್ನು ತ್ಯಜಿಸುವುದು. ಉದಾಹರಣೆಗೆ, ಆ ಮನೆಯನ್ನು ಮಾರುವುದು.

ನಿಮ್ಮ ಮತ್ತು ನಿಮ್ಮ ಮಗುವಿನ ರಕ್ಷಣೆಗೆ ಬೇಕಾದ ಬೇರೆ ಯಾವ ಶರತ್ತುಗಳನ್ನಾದರೂ ಪಾಲಿಸಬೇಕೆಂದು ನ್ಯಾಯಾಲಯವು ಆದೇಶಿಸಬಹುದು.

ಕೌಟುಂಬಿಕ ಹಿಂಸೆಯಾದಲ್ಲಿ ಧನ ಸಹಾಯ ಅಥವಾ ಜೀವನಾಂಶ ಹೇಗೆ ಪಡೆಯಬಹುದು?

ಕಿರುಕುಳ ನೀಡಿದವರಿಂದ ನಿಮಗೆ ಹಣ/ಜೀವನಾಂಶ ಬೇಕಾದಲ್ಲಿ, ವಕೀಲರ ಅಥವಾ ರಕ್ಷಣಾಧಿಕಾರಿಗಳ ನೆರವಿನಿಂದ, ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ನಿಮಗೆ ಮತ್ತು ನಿಮ್ಮ ಮಗುವಿಗೆ, ಹಿಂಸೆ ಮತ್ತು ಅತ್ಯಾಚಾರದಿಂದಾದ ಎಲ್ಲ ಹಾನಿ ಮತ್ತು ಅನ್ಯಾಯಗಳನ್ನು ಸರಿದೂಗಿಸಲು ನ್ಯಾಯಾಲಯ ಜೀವನಾಂಶದ ಆದೇಶವನ್ನು ಹೊರಡಿಸುತ್ತದೆ. ಈ ಹಣ ನಿಮಗೆ ನ್ಯಾಯಾಲಯದ ಆದೇಶದಂತೆ, ಮಾಸಿಕವಾಗಿ, ಅಥವಾ ಒಮ್ಮೆಲೇ ಭಾರಿ ಮೊತ್ತವಾಗಿ ಲಭಿಸಬಲ್ಲುದು. ನಿಮ್ಮ ಜೀವನಶೈಲಿಯ ಗುಣಮಟ್ಟದನುಸಾರ ಈ ಹಣದ ಮೊತ್ತವನ್ನು ನ್ಯಾಯಾಲಯ ತೀರ್ಮಾನಿಸುತ್ತದೆ. ಕೆಳಗಿನ ಹಾನಿಗಳನ್ನು ಸರಿಪಡಿಸಲು ನಿಮಗೆ ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡಬೇಕೆಂದು ನ್ಯಾಯಾಲಯ ನಿರ್ಧರಿಸುತ್ತದೆ:

  • ನೀವು ಕಳೆದುಕೊಂಡ ಆದಾಯ: ಉದಾಹರಣೆಗೆ, ನಿಮಗೆ ಕೆಲಸ ಮಾಡಲು ಅನುಮತಿ ನೀಡದಿದ್ದ ಕಾರಣ, ಅಥವಾ ಹಿಂಸೆಗೆ ಬಲಿಯಾಗಿ ನೀವು ಒಂದು ತೊಂಗಲು ಆಸ್ಪತ್ರೆಯಲ್ಲಿ ದಾಖಲಿದ್ದಾಗಾದ ಆದಾಯದ ನಷ್ಟ
  • ಶಾರೀರಿಕ ಪೆಟ್ಟುಗಳು ಮತ್ತು ವೈದ್ಯಕೀಯ ಖರ್ಚು: ಉದಾಹರಣೆಗೆ, ಆಸ್ಪತ್ರೆ ಬಿಲ್ ಮತ್ತು ಔಷಧಿಗಳಿಗೆ ದುಡ್ಡು
  • ಆಸ್ತಿಗೆ ಆದ ನಷ್ಟ ಅಥವಾ ಆಸ್ತಿ ಕಸೆದುಕೊಂಡಿದ್ದರಿಂದಾದ ಹಾನಿ: ಉದಾಹರಣೆಗೆ, ನಿಮ್ಮ ಒಡವೆಗಳು ಅಥವಾ ಜಾಮೀನು. ನಿಮಗೆ ಇಂತಹ ಬೆಲೆ ಬಾಳುವ ವಸ್ತುಗಳನ್ನು ತಿರುಗಿ ಕೊಡುವುದಾಗಿ ನ್ಯಾಯಾಲಯ ಆದೇಶಿಸಬಲ್ಲುದು.
  • ನಿಮ್ಮ ಜೀವನ ನಿರ್ವಹಣೆಗೆ: ಉದಾಹರಣೆಗೆ, ಮನೆ ಬಾಡಿಗೆ, ನಿಮ್ಮ ಮತ್ತು ನಿಮ್ಮ ಮಗುವಿನ ದೈನಂದಿನ ಖರ್ಚುಗಳು, ಇತ್ಯಾದಿ.
  • ಮಾನಸಿಕ ಕಿರುಕುಳ ಮತ್ತು ಭಾವನಾತ್ಮಕ ಯಾತನೆ: ನಿಮ್ಮ ಜೀವನಕ್ಕೆ ಮತ್ತು ಉದ್ಯೋಗಕ್ಕೆ ಧಕ್ಕೆ ತರುವಂತೆ ನಿಮಗಾದ ಯಾತನೆ.

ನೀವು ಉಪಯೋಗಿಸಬಹುದಾದ ಕಾನೂನುಗಳು:

ಕೆಳಗಿನ ಈ ಎರಡು ಕಾನೂನುಗಳಡಿ, ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡಬೇಕೆಂದು ನೀವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು: ಕೌಟುಂಬಿಕ ಹಿಂಸೆ ಕಾನೂನು (ಸೆಕ್ಷನ್ ೨೦/೨೨) ಮತ್ತು ಅಪರಾಧಿಕ ಕಾನೂನು (ಸೆಕ್ಷನ್ ೧೨೫, ದಂಡ ಪ್ರಕ್ರಿಯೆ ಸಂಹಿತೆ).ಈ ಎರಡೂ ಕಾನೂನುಗಳನ್ನು ಬಳಸಿ ಜೀವನಾಂಶ ಪಡೆಯಲು ನಿಮ್ಮ ವಕೀಲರ ನೆರವು ಪಡೆಯಿರಿ.

ಹಣ ಪಾವತಿ ವಿಫಲವಾದಲ್ಲಿ:

ನ್ಯಾಯಾಲಯದ ಆದೇಶದ ಮೇರೆಗೆ ನಿಮಗೆ ಕಿರುಕುಳ ಕೊಟ್ಟವರು ನಿಮಗೆ ಜೀವನಾಂಶ ಕೊಡದಿದ್ದಲ್ಲಿ, ನಿಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಈ ವಿಷಯವನ್ನು ತಿಳಿಸಬೇಕು. ಆವಾಗ, ಕೆಳಗಿನವರಿಂದ ನ್ಯಾಯಾಲಯ ಜೀವನಾಂಶ ವಸೂಲಿ ಮಾಡುತ್ತದೆ:

  • ಕಿರುಕುಳ ಕೊಟ್ಟವರ ಆದಾಯದಿಂದ ಜೀವನಾಂಶದ ಹಣವನ್ನು ಕಡಿದು ನೇರವಾಗಿ ನ್ಯಾಯಾಲಯಕ್ಕೆ ಪಾವತಿಸಬೇಕಾಗಿ ಅವರ ಉದ್ಯೋಗದಾತರಿಗೆ ಆದೇಶಿಸುತ್ತದೆ.
  • ಕಿರುಕುಳ ಕೊಟ್ಟವರ ಸಾಲಗಾರರಿಂದ ನೇರವಾಗಿ ನ್ಯಾಯಾಲಯ ಹಣ ಪಡೆದು, ಅದನ್ನು ನಿಮಗೆ ಕೊಡುವುದಾಗಿ ಆದೇಶಿಸುತ್ತದೆ.