ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನ

ವಿವಾಹ ಸಂಬಂಧಿತ ಕಾನೂನುಗಳು, ಹಲವಾರು ವೈವಾಹಿಕ ಹಾಗು ಭಾವನಾತ್ಮಕ ಹಕ್ಕುಗಳನ್ನು ಗುರುತಿಸುತ್ತವೆ. ಇವುಗಳಲ್ಲಿ ಕೆಲವು ವಿಷಯಗಳು: ಆಸ್ತಿ ವಿಭಜನೆ, ಮಕ್ಕಳ ಜವಾಬ್ದಾರಿ, ಇತ್ಯಾದಿ. ವಿಚ್ಛೇದನ ಪಡೆದಲ್ಲಿ ವೈವಾಹಿಕ ಸಂಬಂಧ ಅಂತ್ಯಗೊಂಡರೂ ಕೆಲವು ಕಾನೂನಾತ್ಮಕ ಬಾಧ್ಯತೆಗಳು ಮುಂದುವರೆಯಬಹುದು.

ವೈವಾಹಿಕ ಸಂಬಂಧ:

ಕಾನೂನಿನ ಪ್ರಕಾರ ಮದುವೆಯೆಂದರೆ:

  • ಭಾವನಾತ್ಮಕ ಆಸರೆ
  • ಲೈಂಗಿಕ ಸಂಬಂಧ
  • ಮಕ್ಕಳ ಹಾಗು ಸಾಂಸಾರಿಕ ಜವಾಬ್ದಾರಿ, ಹಾಗು
  • ಆರ್ಥಿಕ ಬೆಂಬಲ
  • ಇವೆಲ್ಲ ಅಂಶಗಳ ಇರುವಿಕೆ.

ಕಾನೂನಾತ್ಮಕ ಬಾಧ್ಯತೆಗಳು:

ನೀವು ಮತ್ತು ನಿಮ್ಮ ಸಂಗಾತಿಯ ನಡುವೆ, ವಿವಾಹದ ಅಂತರ್ಗತವಾಗಿ, ಹಲವಾರು ನ್ಯಾಯಿಕ ಬಾಧ್ಯತೆಗಳಿರುವುದುಂಟು. ಇವುಗಳಲ್ಲಿ ಕೆಲವು ವಿಚ್ಛೇದನ ಆದಮೇಲೂ ಸಹ ಮುಂದುವರೆಯುತ್ತವೆ. ಅವೇನೆಂದರೆ:

ಜೀವನಾಂಶ:

ನ್ಯಾಯಾಲಯವು ವಿಚ್ಛೇದನದ ವೇಳೆ, ನೀವು ನಿಮ್ಮ ಸಂಗಾತಿಗೆ ಹಣ ಕೊಡುವುದಾಗಿ ಆದೇಶಿಸಬಹುದು. ಈ ಹಣಕ್ಕೆ ಜೀವನಾಂಶ ಎಂದು ಕರೆಯುತ್ತಾರೆ.

ಮಕ್ಕಳನ್ನು ಪೋಷಿಸುವ ಜವಾಬ್ದಾರಿ:

ನ್ಯಾಯಾಲಯವು ನಿಮ್ಮ ಮಕ್ಕಳು ಯಾರ ಜೊತೆ ಇರಬಹುದು, ಹಾಗು ಅವರ ಆರ್ಥಿಕ ಹೊಣೆಗಾರಿಕೆ ಯಾರು ವಹಿಸುತ್ತಾರೆ ಎಂಬುದನ್ನು ವಿಚ್ಛೇದನದ ಸಮಯದಲ್ಲಿ ನಿರ್ಧರಿಸುತ್ತದೆ.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನಾ ಅರ್ಜಿ ಸಲ್ಲಿಸುವಿಕೆ

ವಿಚ್ಛೇದನ ಎಂದರೆ ನೀವು ನಿಮ್ಮ ಸಂಗಾತಿಯಿಂದ ಅಂತಿಮವಾಗಿ ಹಾಗು ಮಾರ್ಪಡಿಸಲಾಗದಂತೆ ಬೇರ್ಪಡೆ ಹೊಂದುವುದು. ಕಾನೂನಿನಡಿಯಲ್ಲಿ ಬೇರೆ ತರಹಗಳ, ಅಂತಿಮವಲ್ಲದ ವೈವಾಹಿಕ ಬೇರ್ಪಡೆಗಳೂ ಸಂಭವವಿವೆ.

ನಿಮ್ಮ ವಿವಾಹವು ಮಾನ್ಯವಿದ್ದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ನಿಮ್ಮ ವಿವಾಹವು ಅಮಾನ್ಯವಿದ್ದಲ್ಲಿ, ನಿಮ್ಮ ಸಂಬಂಧವನ್ನು ಕಾನೂನಾತ್ಮಕವಾಗಿ ರದ್ದುಗೊಳಿಸಲು ಕೋರ್ಟಿಗೆ ಅರ್ಜಿಸಲ್ಲಿಸಬೇಕಾಗುತ್ತದೆ.

ಕೋರ್ಟಿಗೆ ಹೋಗುವುದು:

ನಿಮಗೆ ವಿಚ್ಛೇದನ ಬೇಕಾದಲ್ಲಿ ಕೋರ್ಟಿಗೆ ಹೋಗಬೇಕಾಗುತ್ತದೆ. ನಿಮ್ಮ ವಿಚ್ಛೇದನದ ಪ್ರಕರಣ ಕೋರ್ಟಿನಲ್ಲಿ ನಡೆಯುತ್ತಿರುವಾಗಲೂ ಸಹ, ನಿಮ್ಮ ಸಂಗಾತಿ ಹಾಗು ಮಕ್ಕಳನ್ನು ಸಂಬಂಧಿಸಿದ ಕೆಲವು ಕರ್ತವ್ಯಗಳನ್ನು ನಿಭಾಯಿಸಬೇಕಾಗುತ್ತದೆ. ಉದಾಹರಣೆಗೆ, ಅವರಿಗೆ ಆರ್ಥಿಕ ಬೆಂಬಲ ನೀಡುವುದು.

ಪತಿ ಯಾ ಪತ್ನಿಗೆ ಮಾತ್ರ ಹಿಂದೂ ವೈವಾಹಿಕ ಕಾನೂನಿನಡಿ ವಿಚ್ಛೇದನ ಬೇಕಾದಾಗ

ಹಲವು ಸಂದರ್ಭಗಳಲ್ಲಿ, ಕೇವಲ ಪತಿ ಯಾ ಪತ್ನಿಗೆ ಮಾತ್ರ ವಿಚ್ಛೇದನ ಬೇಕು ಎಂದು ಎನಿಸುವುದುಂಟು. ಕಾನೂನಿನಡಿ, ಕೇವಲ ಕೆಲವು ಸಂದರ್ಭಗಳಲ್ಲಿ ಮಾತ್ರ ಇಂತಹ ಏಕಪಕ್ಷೀಯ ವಿಚ್ಛೇದನ ಲಭಿಸುತ್ತದೆ. ಉದಾಹರಣೆಗೆ, ವಿವಾಹದಲ್ಲಿ ದೌರ್ಜನ್ಯ/ಕ್ರೌರ್ಯ ಇದ್ದಾಗ, ಅಥವಾ ನಿಮ್ಮ ಸಂಗಾತಿಗೆ ಮಾನಸಿಕ ರೋಗವಿದ್ದಾಗ. ಇಂತಹ ಸಂದರ್ಭಗಳಲ್ಲಿ, ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ, ನಿಮ್ಮ ಸಂಗಾತಿ ಈ ಆರೋಪಗಳನ್ನು ನಿರಾಕರಿಸಿ, ಅವರಿಗೆ ಯಾಕೆ ಈ ವಿಚ್ಛೇದನಕ್ಕೆ ಒಪ್ಪಿಗೆ ಇಲ್ಲ ಎಂದು ಕೋರ್ಟಿಗೆ ಹೇಳಬಹುದಾಗಿದೆ.

ಕಾನೂನಿನಡಿಯಲ್ಲಿ, ಮದುವೆಯಾಗಿ ಒಂದು ವರ್ಷವಾದ ನಂತರ ಮಾತ್ರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಒಂದು ವರ್ಷದ ಸಮಯ:

ನಿಮಗೆ ವಿಚ್ಛೇದನದ ಅರ್ಜಿ ಸಲ್ಲಿಸುವುದಿದ್ದಲ್ಲಿ, ನಿಮ್ಮ ಮದುವೆಯಾದ ದಿನಾಂಕದಿಂದ ಹಿಡಿದು ಒಂದು ವರ್ಷದ ವರೆಗೆ ನೀವು ಕಾಯಬೇಕಾಗುತ್ತದೆ. ಉದಾಹರಣೆಗೆ, ಜಿತೇಂದ್ರ ಹಾಗು ವಹೀದಾ ಜನೆವರಿ ೯, ೨೦೧೮ರಂದು ಮದುವೆಯಾದರು. ಜಿತೇಂದ್ರ ಕಡೆ ಪಕ್ಷ ಜನೆವರಿ ೯, ೨೦೧೯ರ ವರೆಗೆ ವಿಚ್ಛೇದನದ ಅರ್ಜಿ ಸಲ್ಲಿಸಲು ಕಾಯಬೇಕಾಗುತ್ತದೆ.

ಒಂದು ವರ್ಷದ ನಿಯಮಕ್ಕೆ ಅಪವಾದಗಳು:

ಕಾನೂನಿನಡಿಯಲ್ಲಿ ಮದುವೆಯ ನಂತರ ಒಂದು ವರ್ಷದ ಬಳಿಕ ಮಾತ್ರವೇ ವಿಚ್ಛೇದನ ಸಿಗುವುದಾದರೂ, ಈ ನಿಯಮಕ್ಕೆ ಕೆಲವು ಅಪವಾದಗಳಿವೆ. ಉದಾಹರಣೆಗೆ:

  • ಅಸಾಧಾರಣ ಕಷ್ಟ ಅನುಭವಿಸುತ್ತಿದ್ದಲ್ಲಿ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ದಿನವೂ ನಿಮಗೆ ಶಾರೀರಿಕವಾಗಿ ಕಿರುಕುಳ ಕೊಡುತ್ತಿದ್ದಲ್ಲಿ, ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.
  • ಅಸಾಧಾರಣ ನೈತಿಕ ಭ್ರಷ್ಟತೆ: ಉದಾಹರಣೆಗೆ, ನಿಮ್ಮ ಪತಿ ಯಾ ಪತ್ನಿ ಅವಮಾನಕರ ಲೈಂಗಿಕ ಕ್ರಿಯೆಗಳನ್ನು ಮಾಡುವುದಾಗಿ ನಿಮ್ಮನ್ನು ಪೀಡಿಸುತ್ತಿದ್ದಲ್ಲಿ , ನೀವು ಕೋರ್ಟಿನ ಮೊರೆ ಹೋಗಬಹುದಾಗಿದೆ.

ಹಿಂದೂ ವಿವಾಹ ಕಾನೂನಿನಡಿ ಪರಸ್ಪರ ಒಪ್ಪಿಗೆಯ ವಿಚ್ಛೇದನ

ನೀವು ಮತ್ತು ನಿಮ್ಮ ಸಂಗಾತಿ, ಇಬ್ಬರಿಗೂ ವಿಚ್ಛೇದನ ಬೇಕೆನಿಸಿದ್ದಲ್ಲಿ, ಪರಸ್ಪರ ಒಪ್ಪಿಗೆಯ ಅರ್ಜಿಯನ್ನು ಕೋರ್ಟಿನಲ್ಲಿ ಸಲ್ಲಿಸಬಹುದು.

ನೀವು ಮತ್ತು ನಿಮ್ಮ ಸಂಗಾತಿ ಈ ಕೆಳಕಂಡ ಪರಿಸ್ಥಿತಿಗಳಲ್ಲಿ ಕೋರ್ಟಿನ ಮೊರೆ ಹೋಗಬಹುದು:

  • ನೀವು ಒಂದು ವರ್ಷ ಬೇರೆ-ಬೇರೆಯಾಗಿ ವಾಸ ಮಾಡುತ್ತಿದ್ದರೆ
  • ನೀವಿಬ್ಬರೂ ಜೊತೆಯಲ್ಲಿ ಇರಲಾರದಂತಿದ್ದರೆ
  • ನೀವಿಬ್ಬರೂ ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ್ದಲ್ಲಿ

ಕಾನೂನಿನಡಿಯಲ್ಲಿ ಇಂತಹ ವಿಚ್ಛೇದನ ಕೇವಲ ಮದುವೆಯಾಗಿ ಒಂದು ವರ್ಷದ ನಂತರವೇ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಿದ ಮೇಲೆಯೂ ಸಹ, ಕೋರ್ಟು ನಿಮಗೆ ಕನಿಷ್ಠ ೬ ತಿಂಗಳಿಂದ ಗರಿಷ್ಟ ೧೮ ತಿಂಗಳುಗಳ ಕಾಲ ಪರಸ್ಪರ ರಾಜಿಯಾಗಲು ಕೊಡುತ್ತದೆ – ಇದು ನಿಜವಾಗಿಯೂ ನಿಮಗೆ ವಿಚ್ಛೇದನ ಬೇಕಿದೆಯೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕಾಗಿ.

ಹೀಗಿದ್ದರೂ ಸಹ, ವಿಚ್ಛೇದನಕ್ಕೆ ಕಾಯಬೇಕಾದ ಕನಿಷ್ಠ ೬ ತಿಂಗಳ ಕಾಲವನ್ನೂ ಸಹ ಕೋರ್ಟುಗಳು ಎಷ್ಟೋ ಸಲ ಈ ಕೆಳಗಿನ ಸಂದರ್ಭಗಳಲ್ಲಿ ಮನ್ನಾ ಮಾಡಿವೆ:

  • ನೀವು ಹಾಗು ನಿಮ್ಮ ಸಂಗಾತಿ ಮರಳಿ ಒಂದಾಗಲು ಸಾಧ್ಯವೇ ಇಲ್ಲದಿದ್ದಾಗ
  • ಎಲ್ಲ ಮಧ್ಯಸ್ಥಿಕೆ ಹಾಗು ಸಂಧಾನದ ಪ್ರಯತ್ನಗಳು ವಿಫಲವಾದಾಗ
  • ವಿಚ್ಛೇದನದ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹುಟ್ಟುವ ಸಮಸ್ಯೆಗಳನ್ನು ನೀವು ಮತ್ತು ನಿಮ್ಮ ಸಂಗಾತಿ ಪರಸ್ಪರ ಪರಿಹರಿಸಿದಾಗ. ಉದಾಹರಣೆ: ಜೀವನಾಂಶ ಕೊಡುವುದು, ಮಕ್ಕಳ ಹೊಣೆಗಾರಿಕೆ
  • ೬ರಿಂದ ೧೮ ತಿಂಗಳುಗಳವರೆಗೆ ಕಾಯುವುದು ನಿಮಗೆ ಇನ್ನೂ ಹೆಚ್ಚು ಸಂಕಟ ಹಾಗು ದುಃಖ ಕೊಡುವಂತಿದ್ದರೆ
  • ನೀವು ನಿಮ್ಮ ಸಂಗಾತಿಯಿಂದ ವಿಚ್ಛೇದನ ಬೇಕೆಂದು ಅರ್ಜಿ ಸಲ್ಲಿಸಿದ್ದಲ್ಲಿ, ನಂತರ ನೀವಿಬ್ಬರೂ ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆಯುವುದಾಗಿ ನಿರ್ಧರಿಸಿದ್ದಲ್ಲಿ.

ಹಿಂದೂ ವಿವಾಹ ಕಾನೂನಿನಡಿ ವಿಚ್ಛೇದನವನ್ನು ಎಲ್ಲಿ ಪಡೆಯಬಹುದು?

ನೀವು ಹಾಗು ನಿಮ್ಮ ಸಂಗಾತಿ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಬಹುದು. ವಿಚ್ಛೇದನದ ಪ್ರಕರಣಗಳನ್ನು “ಕುಟುಂಬ ನ್ಯಾಯಾಲಯ” ಎಂಬ ಪ್ರತ್ಯೇಕ ನ್ಯಾಯಾಲಯಗಳು ನಿರ್ಧರಿಸುತ್ತವೆ. ಈ ಕೆಳಕಂಡ ಸ್ಥಳಗಳ ಕುಟುಂಬ ನ್ಯಾಯಾಲಯಗಳಲ್ಲಿ ನೀವು ವಿಚ್ಛೇದನದ ಅರ್ಜಿ ಸಲ್ಲಿಸಬಹುದು:

೧. ನಿಮ್ಮ ಮದುವೆಯಾದ ಊರು:

ನೀವು ಅಥವಾ ನಿಮ್ಮ ಸಂಗಾತಿ, ನೀವು ಮದುವೆಯಾದ ಊರಿನಲ್ಲಿರುವ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಹಾಗು ನಿಮ್ಮ ಸಂಗಾತಿ ಬೆಂಗಳೂರಿನಲ್ಲಿ ಮದುವೆಯಾಗಿದ್ದಲ್ಲಿ, ಬೆಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿ ಸಲ್ಲಿಸಬಹುದು.

೨. ನಿಮ್ಮ ಸಂಗಾತಿ ವಾಸಿಸುವ ಊರು:

ನಿಮ್ಮ ಸಂಗಾತಿಯು ವಾಸಿಸುವ ಊರಿನಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು. ಉದಾಹರಣೆಗೆ, ನಿಮ್ಮ ಸಂಗಾತಿಯು ಹುಬ್ಬಳ್ಳಿಯಲ್ಲಿ ವಾಸಿಸುತ್ತಿದ್ದಲ್ಲಿ, ಹುಬ್ಬಳ್ಳಿಯ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಲ್ಲಿಸಬಹುದು.

೩. ನೀವಿಬ್ಬರೂ ಕೊನೆಯದಾಗಿ ಜೊತೆಗೆ ವಾಸಿಸಿದ್ದ ಊರು:

ನೀವು ಅಥವಾ ನಿಮ್ಮ ಸಂಗಾತಿಯು, ನೀವಿಬ್ಬರೂ ಕೊನೆಯದಾಗಿ ಜೊತೆಗೆ ವಾಸಿಸಿದ್ದ ಊರಿನಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಹಾಗು ನಿಮ್ಮ ಸಂಗಾತಿ ಮೈಸೂರಿನಲ್ಲಿ ಕೊನೆಯದಾಗಿ ಜೊತೆಗೆ ವಾಸಿಸಿದ್ದಲ್ಲಿ, ಮೈಸೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು ಸಲ್ಲಿಸಬಹುದು.

೪. ನೀವು ವಾಸಿಸುವ ಊರು:

ಹೆಂಡತಿ: ನೀವು ನಿಮ್ಮ ಗಂಡನಿಂದ ವಿಚ್ಛೇದನ ಬಯಸಿದ್ದಲ್ಲಿ, ನೀವು ವಾಸಿಸಿರುವ ಊರಿನಲ್ಲೇ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ, ನೀವು ಮಂಗಳೂರಿನಲ್ಲಿ ನೆಲೆಸಿದ್ದರೆ, ಮಂಗಳೂರಿನ ಕುಟುಂಬ ನ್ಯಾಯಾಲಯದಲ್ಲಿ ನಿಮ್ಮ ವಿಚ್ಛೇದನಾ ಅರ್ಜಿಯನ್ನು, ನಿಮ್ಮ ಪತಿ ಮಂಗಳೂರಿನಲ್ಲಿ ಇಲ್ಲದಿದ್ದರೂ ಸಹ, ಸಲ್ಲಿಸಬಹುದು. ಗಂಡ ಹಾಗು ಹೆಂಡತಿ: ನಿಮ್ಮ ಸಂಗಾತಿ ವಿದೇಶಕ್ಕೆ ಹೋಗಿದ್ದಾಗ, ನೀವು ನೆಲೆಸಿದ್ದ ಊರಿನ ಕೋರ್ಟಿನಲ್ಲಿ ನಿಮ್ಮ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ದಯವಿಟ್ಟು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ವಕೀಲರೊಂದಿಗೆ ವಿಚಾರಿಸಿ.

ಕ್ರೂರ ನಡವಳಿಕೆ ಹಾಗು ಹಿಂದೂ ವಿವಾಹ ಕಾಯಿದೆ

ಕ್ರೂರ ನಡವಳಿಕೆ ವಿಚ್ಛೇದನಕ್ಕೆ ಆಧಾರ. ಯಾವುದೇ ಒಂದು ನಡವಳಿಕೆ ಅಥವಾ ನಡತೆಯು ನಿಮಗೆ ಕಿರುಕುಳ ನೀಡುವಂತಿದ್ದರೆ, ಅದು ಕಾನೂನಿನಡಿ ಕ್ರೌರ್ಯ ಎಂದು ಕರೆಯಲ್ಪಡುತ್ತದೆ. ಕ್ರೌರ್ಯ ಎರಡು ಪ್ರಕರದ್ದಾಗಿರಬಹುದು:

೧. ಶಾರೀರಿಕ:

ನಿಮ್ಮ ಸಂಗಾತಿಯು ನಿಮಗೆ ಶಾರೀರಿಕವಾಗಿ ನೋವು ಅಥವಾ ಹಾನಿ ಉಂಟು ಮಾಡಿದರೆ ನೀವು ಕೋರ್ಟಿನಿಂದ ವಿಚ್ಛೇದನ ಪಡೆಯಬಹುದು. ಇಂತಹ ನಡವಳಿಕೆಗೆ ಶಾರೀರಿಕ ಕ್ರೌರ್ಯ ಎನ್ನುತ್ತಾರೆ. ಇದನ್ನು ಸುಲಭವಾಗಿ ಕೋರ್ಟಿನ ಮುಂದೆ ಸಾಬೀತುಪಡಿಸಬಹುದು.

೨. ಮಾನಸಿಕ:

ನಿಮ್ಮ ಸಂಗಾತಿಯು, ಅವರ ನಡತೆ ಅಥವಾ ಮಾತುಗಳ ಮೂಲಕ, ನಿಮಗೆ ಮಾನಸಿಕ ಯಾತನೆ ನೀಡುತ್ತಿದ್ದಲ್ಲಿ, ಅವರ ಈ ನಡವಳಿಕೆಗೆ ಮಾನಸಿಕ ಕ್ರೌರ್ಯ ಎನ್ನುತ್ತಾರೆ. ಉದಾಹರಣೆಗೆ, ನಿಮ್ಮ ಸಂಗಾತಿಯು ನಿಮಗೆ ಮಾತುಗಳಿಂದ ನಿಂದಿಸುತ್ತಿದ್ದಲ್ಲಿ, ಅಥವಾ ನಿಮ್ಮ ಸ್ನೇಹಿತರ/ಸಹೋದ್ಯೋಗಿಗಳ ಮುಂದೆ ನಿಮ್ಮ ಗೌರವಕ್ಕೆ ಧಕ್ಕೆ ತರುವಂತೆ ವರ್ತಿಸುತ್ತಿದ್ದಲ್ಲಿ, ಈ ಅವರ ನಡುವಳಿಕೆಗಳಿಗೆ ಮಾನಸಿಕ ಕ್ರೌರ್ಯ ಎನ್ನಬಹುದು.

ಶಾರೀರಿಕ ಕ್ರೌರ್ಯಕ್ಕೆ ಹೋಲಿಸಿದರೆ, ಇದನ್ನು ಕೋರ್ಟಿನಲ್ಲಿ ಸಾಬೀತುಪಡಿಸುವುದು ಕಷ್ಟ. ಕ್ರೌರ್ಯವು ಲಿಂಗ-ತಟಸ್ಥವಾಗಿದೆ. ಅಂದರೆ, ಕ್ರೌರ್ಯದ ಆಧಾರದ ಮೇಲೆ ಪತಿ ಯಾ ಪತ್ನಿ, ಇಬ್ಬರೂ ವಿಚ್ಛೇದನಕ್ಕೆ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು.

ಸಂಗಾತಿಯಿಂದ ನಂಬಿಕೆ ದ್ರೋಹ ಹಾಗು ಹಿಂದೂ ವಿವಾಹ ಕಾಯಿದೆ

ನಿಮ್ಮ ಸಂಗಾತಿಯು ನಿಮಗೆ ನಂಬಿಕೆ ದ್ರೋಹ ಬಗೆದಲ್ಲಿ ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದು. ವಿವಾಹದ ಸನ್ನಿವೇಶದಲ್ಲಿ ನಂಬಿಕೆ ದ್ರೋಹವೆಂದರೆ ನಿಮ್ಮ ಸಂಗಾತಿಯು ಸ್ವಯಂ ಪ್ರೇರಿತವಾಗಿ ಬೇರೆಯವರ ಜೊತೆ ಅನೈತಿಕ ಲೈಂಗಿಕ ಸಂಬಂಧ ಬೆಳೆಸುವುದು ಎಂದರ್ಥ.

ಇದನ್ನು ವ್ಯಭಿಚಾರ ಎಂದೂ ಕರೆಯಬಹುದು. ಇದರಡಿ ನಿಮಗೆ ವಿಚ್ಛೇದನ ಬೇಕಾದಲ್ಲಿ, ನಿಮ್ಮ ಸಂಗಾತಿ ಹಾಗು ಬೇರೆಯವರ ನಡುವೆ ಸ್ವಯಂ ಪ್ರೇರಿತವಾಗಿ, ಲೈಂಗಿಕ ಸಂಭೋಗ ನಡೆದಿದೆ ಎಂದು ಕೋರ್ಟಿನೆದುರು ನೀವು ಸಾಬೀತುಪಡಿಸಬೇಕಾಗುತ್ತದೆ. ಕೆಲವೇ ದಿನಗಳ ಹಿಂದಿನವರೆಗೆ ವಿವಾಹೇತರ ಅನೈತಿಕ ಲೈಂಗಿಕ ಸಂಬಂಧ ಬೆಳೆಸುವುದು ಅಪರಾಧವಾಗಿತ್ತು.

ಆದರೆ ಈಗ, ಅದು ಕಾನೂನಿನಡಿಯಲ್ಲಿ ಅಪರಾಧವಲ್ಲ. ಇದಾಗ್ಯೂ ನೀವು ಈ ಕಾರಣಕ್ಕಾಗಿ ವಿಚ್ಛೇದನವನ್ನು ಪಡೆಯಬಹುದಾಗಿದೆ.

ಸಂಗಾತಿಯು ನಿಮ್ಮನ್ನು ಬಿಟ್ಟು ಹೋಗಿದ್ದಲ್ಲಿ ಹಿಂದೂ ವಿಚ್ಛೇದನ

ನಿಮ್ಮ ಸಂಗಾತಿಯು ನಿಮ್ಮನ್ನು ಬಿಟ್ಟು ಹೋಗಿದ್ದಲ್ಲಿ ನೀವು ವಿಚ್ಛೇದನ ಪಡೆಯಬಹುದು. ಇದನ್ನುವೈವಾಹಿಕ ಜೀವನವನ್ನು ತೊರೆದು ಹೋಗುವುದು/ಪರಿತ್ಯಾಗ ಮಾಡುವುದು ಎಂದೂ ಎನ್ನಬಹುದು.

ಬಿಟ್ಟು ಹೋಗುವ ತತ್ಕ್ಷಣದ ಪರಿಣಾಮ:

ನಿಮ್ಮ ಸಂಗಾತಿಯು, ನಿಮ್ಮ ಒಪ್ಪಿಗೆ ಇಲ್ಲದೆ, ಎಂದೂ ಹಿಂದಿರುಗಿ ಬರದ ಉದ್ದೇಶದಿಂದ ನಿಮ್ಮನ್ನು ಬಿಟ್ಟು ಹೋದರೆ ಅದನ್ನು ಕಾನೂನಿನಡಿಯಲ್ಲಿ ವೈವಾಹಿಕ ಜೀವನವನ್ನು ಪರಿತ್ಯಾಗ ಮಾಡುವುದು ಎಂದು ಎನ್ನುತ್ತಾರೆ. ಇದನ್ನು ಆಯಾ ಪ್ರಕರಣಗಳ ಸಂದರ್ಭಾನುಸಾರ ನಿರ್ಧರಿಸಲಾಗುತ್ತದೆ. ನಿಮ್ಮ ಸಂಗಾತಿಯು, ತಾತ್ಕಾಲಿಕವಾಗಿ, ಅಥವಾ, ಕೋಪದ ಸನ್ನಿವೇಶದಲ್ಲಿ, ನಿಮ್ಮನ್ನು ಶಾಶ್ವತವಾಗಿ ಅಗಲುವ ಉದ್ದೇಶವಿಲ್ಲದೆ ನಿಮ್ಮಿಂದ ದೂರ ಹೋದರೆ, ಅದು ಕಾನೂನಿನಡಿ ವಿಚ್ಛೇದನಕ್ಕೆ ಆಧಾರವಾಗದು.

ಉದಾಹರಣೆಗೆ, ನಿಮ್ಮ ಗಂಡ ನಿಮ್ಮ ಜೊತೆ ಜಗಳವಾಡಿ ಕೋಪದಿಂದ ಮನೆ ಬಿಟ್ಟು ಹೊರಗೆ ಹೋದರೆ, ಅದು ಕಾನೂನಿನಡಿ ವಿವಾಹವನ್ನು ತೊರೆದು ಹೋಗುವುದು ಎಂದು ಎನಿಸಿಕೊಳ್ಳುವುದಿಲ್ಲ.

ನಿಮ್ಮನ್ನು ನಿಮ್ಮ ಸಂಗಾತಿ ತೊರೆದು ಹೋಗುವ ಹಾಗೆ ನೀವೇ ಮಾಡುವುದು:

ಆದಾಗ್ಯೂ, ಯಾವ ಸಂವೇದನಾಶೀಲ ವ್ಯಕ್ತಿಯೂ ಸಹ ನಿಮ್ಮ ಜೊತೆ ಇರಲಾರ ಎಂಬ ಪರಿಸ್ಥಿತಿಯನ್ನು ನೀವೇ ತಂದೊಡ್ಡಿಲ್ಲ ಎಂದು ಪರಿಶೀಲಿಸುವುದು ಇಂತಹ ಪ್ರಕರಣಗಳಲ್ಲಿ ಬಹಳ ಮುಖ್ಯವಾಗುತ್ತದೆ. ನೀವೇ ಇಂತಹ ಪರಿಸ್ಥಿತಿಯನ್ನು ಹುಟ್ಟಿಸಿದ್ದಲ್ಲಿ, ಕೋರ್ಟು ನಿಮ್ಮ ಸಂಗಾತಿಯು ವಿವಾಹವನ್ನು ತ್ಯಜಿಸಿ ಹೋದರು ಎಂಬ ಆಧಾರದ ಮೇಲೆ ನಿಮ್ಮ ವಿಚ್ಛೇದನದ ಅರ್ಜಿ ಸ್ವೀಕರಿಸುವುದಿಲ್ಲ.

ವಿವಾಹವನ್ನು ಪರಿತ್ಯಜಿಸುವ ಬೇರೆ ರೀತಿಗಳು:

ನಿಮ್ಮನ್ನು ಒಮ್ಮೆಲೇ ಬಿಟ್ಟುಹೋಗುವ ಕ್ರಿಯೆಯಲ್ಲದೆ, ಕಾಲಾಂತರದಲ್ಲಿ ನಿಮ್ಮ ಸಂಗಾತಿಯ ಹಲವಾರು ನಡವಳಿಕೆಗಳ ಪುನರಾವರ್ತನೆಯೂ ಸಹ ವೈವಾಹಿಕ ಪರಿತ್ಯಾಗ ಎಂದು ಕರೆಯಲ್ಪಡಬಹುದು.

ನಿಮ್ಮ ಸಂಗಾತಿಯು ಕಾಲಾಂತರದಲ್ಲಿ ನಿಮ್ಮ ಹಾಗು ನಿಮ್ಮ ನೆಂಟರ/ಸ್ನೇಹಿತರ ಸಂಪರ್ಕ ನಿಲ್ಲಿಸಿದ್ದಲ್ಲಿ, ಅಥವಾ, ನಿಮ್ಮ ಜೊತೆ ವಾಸಿಸಿದ್ದರೂ ಸಹ, ನಿಮ್ಮ / ನಿಮ್ಮ ಕುಟುಂಬದವರೊಂದಿಗೆ ಮಾತು ಬಿಟ್ಟಿದ್ದರೆ, ಅಥವಾ ವೈವಾಹಿಕ ಜೀವನದಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದರೆ, ಆರ್ಥಿಕವಾಗಿ ಮನೆಯ ಖರ್ಚು-ವೆಚ್ಚದಲ್ಲಿ ಏನೂ ಸಹಾಯ ಮಾಡದಿದ್ದಲ್ಲಿ, ಈ ಎಲ್ಲ ನಡವಳಿಕೆಗಳಿಗೆ ಕಾನೂನು ವೈವಾಹಿಕ ಪರಿತ್ಯಾಗ ಎಂದು ಅರ್ಥೈಸುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಸಂಗಾತಿಯು ನಿಮ್ಮನ್ನು ದೈಹಿಕವಾಗಿ ಬಿಟ್ಟು ಹೋಗಿರಬೇಕು ಎಂದೇನಿಲ್ಲ. ಆಯಾ ಪ್ರಕರಣಗಳ ಸಂದರ್ಭಾನುಸಾರ ಕೋರ್ಟು ವೈವಾಹಿಕ ಪರಿತ್ಯಾಗವು ಇಂತಹ ನಡವಳಿಕೆ ಶುರುವಾದಾಗಿನಿಂದ ಪ್ರಾರಂಭವಾಗಿದೆ ಎಂದು ನಿರ್ಧರಿಸಬಹುದು. ನ್ಯಾಯಾಲಯವು ಎಲ್ಲ ಸಂದರ್ಭ-ಸನ್ನಿವೇಶಗಳನ್ನು ಪರಿಶೀಲಿಸಿ ವಿಚ್ಛೇದನವನ್ನು ನೀಡುತ್ತದೆ.

ವೈವಾಹಿಕ ಪರಿತ್ಯಾಗದ ಸಮಯಾವಧಿ:

ಪರಿತ್ಯಾಗವನ್ನು ವಿಚ್ಛೇದನದ ಆಧಾರವನ್ನಾಗಿಸುವುದಾದರೆ:

  • ನಿಮ್ಮ ಸಂಗಾತಿಯು ನಿಮ್ಮನ್ನು ತ್ಯಜಿಸಿ ಕನಿಷ್ಠ ಎರಡು ವರ್ಷಗಳಾಗಿರಬೇಕು
  • ಈ ಎರಡು ವರ್ಷಗಳ ಕಾಲ ನಿರಂತರವಾಗಿರಬೇಕು

ಹಿಂದೂ ವಿವಾಹ ಮತ್ತು ಮಾನಸಿಕ ರೋಗ

ನೀವು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಲ್ಲಿ, ನಿಮ್ಮ ಸಂಗಾತಿಯು ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ, ಅದು ವಿಚ್ಛೇದನಕ್ಕೆ ಆಧಾರವಾಗಬಹುದು.

ನೀವು ವಿಚ್ಛೇದನಾ ಅರ್ಜಿ ಈ ಕೆಳಕಂಡ ಸಂದರ್ಭಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬಹುದು:

  • ನಿಮ್ಮ ಸಂಗಾತಿಯು ಗುಣಪಡಿಸಲಾಗದಂತಹ ಮಾನಸಿಕ ರೋಗದಿಂದ ಬಳಲುತ್ತಿದ್ದಲ್ಲಿ
  • ನಿಮ್ಮ ಸಂಗಾತಿಯು ಮಾನಸಿಕ ರೋಗದಿಂದ ಅನಿಯಮಿತವಾಗಿ ಅಥವಾ ನಿರಂತರವಾಗಿ ಬಳಲುತ್ತಿದ್ದು, ಈ ಸಂಗತಿಯಿಂದ ನಿಮಗೆ ಅವರೊಡನೆ ಇರಲು ಸಾಧ್ಯವಿಲ್ಲವಾದಾಗ ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಅವರಲ್ಲಿ ಕೆಲವು ಮುಂಗೋಪದ ಅಥವಾ ಸಿಟ್ಟಿನ ನಡತೆಗಳು/ಗುಣಲಕ್ಷಣಗಳು ಇವೆ ಅಂದ ಮಾತ್ರಕ್ಕೆ ಅವರಿಗೆ ಮಾನಸಿಕ ರೋಗವಿದೆ ಎಂದು ಅರ್ಥ ಅಲ್ಲ.

ಯಾವಾಗ ಅವರ ನಡತೆ ಯಾವ ಸಂವೇದನಾಶೀಲ ವ್ಯಕ್ತಿಗೂ ಸಹ ಅವರೊಂದಿಗೆ ಇರದ ಹಾಗೆ ಮಾಡುತ್ತದೆಯೋ, ಆವಾಗ ಮಾನಸಿಕ ರೋಗದ ಆಧಾರದ ಮೇಲೆ ವಿಚ್ಛೇದನ ಬೇಡಬಹುದು.

ನಿಮ್ಮ ಸಂಗಾತಿಯು ಅಸ್ವಸ್ಥ ಮನಸ್ಸಿನಿಂದ ಬಳಲುತ್ತಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಲು ವೈದ್ಯಕೀಯ ತಪಾಸಣೆಗಾಗಿ ಅವರನ್ನು ಕೊಂಡೊಯ್ಯಬೇಕು ಎಂದು ನ್ಯಾಯಾಲಯವು ನಿರ್ದೇಶಿಸಬೇಕು ಎಂದು ನೀವು ಮನವಿ ಸಲ್ಲಿಸಬಹುದು.

ಮತಾಂತರ

ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಿಸಿದಾಗ ಹಿಂದೂ ಧರ್ಮದಿಂದ ಮತಾಂತರ:

ಮತಾಂತರ:

ನಿಮ್ಮ ಸಂಗಾತಿ ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮಕ್ಕೆ ಮತಾಂತರಿಸಿದ್ದಾಗ ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಕರಣ ಹೂಡುವುದು: ಗಮನಿಸಬೇಕಾದ ವಿಷಯವೇನೆಂದರೆ, ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಿಸಿದ್ದಾರೆ ಎಂದ ಮಾತ್ರಕ್ಕೆ ನಿಮ್ಮ ಮದುವೆ ಅಂತ್ಯಗೊಳ್ಳದು. ನೀವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಸಂಗಾತಿ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದರೂ ಸಹ ವಿಚ್ಛೇದನದ ಪ್ರಕರಣವು ಹಿಂದೂ ವಿವಾಹ ಕಾನೂನಿನಡಿ ಜರುಗುತ್ತದೆ. ಏಕೆಂದರೆ, ನಿಮ್ಮಿಬ್ಬರ ಮದುವೆ ಹಿಂದೂ ಕಾನೂನಿನಡಿ ನೆರವೇರಿತ್ತು.

ವಿಚ್ಛೇದನದ ಅರ್ಜಿ ಸಲ್ಲಿಸುವು ಮುನ್ನ ಪುನರ್ವಿವಾಹ:

ನ್ಯಾಯಾಲಯವು ವಿಚ್ಛೇದನದ ಅಂತಿಮ ತೀರ್ಪು ನೀಡುವ ತನಕ ನಿಮ್ಮ ಮದುವೆ ಅಸ್ತಿತ್ವದಲ್ಲಿರುತ್ತದೆ. ನಿಮ್ಮ ಸಂಗಾತಿ ಇದರ ಮುನ್ನ ಪುನರ್ವಿವಾಹವಾಗುವಂತಿಲ್ಲ. ಒಂದು ವೇಳೆ ಅವರು ಪುನರ್ವಿವಾಹವಾದರೂ ಅದು ಕಾನೂನಿನಡಿ ಅಮಾನ್ಯವಾಗಿರುತ್ತದೆ.

ಶಿಕ್ಷೆ:

ಒಂದು ವೇಳೆ ವಿಚ್ಛೇದನದ ಮುನ್ನ ನಿಮ್ಮ ಸಂಗಾತಿ ಪುನರ್ವಿವಾಹವಾದರೆ ನೀವು ಅವರನ್ನು ದ್ವಿಪತ್ನಿತ್ವ/ದ್ವಿಪತಿತ್ವದ ಅಪರಾಧದಡಿ ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು ದಂಡದಿಂದ ಶಿಕ್ಷಿಸಬೇಕೆಂದು ಕೋರ್ಟಿನಲ್ಲಿ ಮನವಿ ಸಲ್ಲಿಸಬಹುದು.