ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿಯಿಂದ ಮದುವೆ ನೆರವೇರಿಸುವ ಕಾರ್ಯವಿಧಾನ

ಕಾನೂನಿನ ಪ್ರಕಾರ, ವಿವಾಹ ಪ್ರಮಾಣಪತ್ರವನ್ನು ನೀಡುವ ಅಧಿಕಾರವುಳ್ಳ ವ್ಯಕ್ತಿಯು ರೋಮನ್ ಕ್ಯಾಥೋಲಿಕ್ ಧರ್ಮದವರಲ್ಲದ ಭಾರತೀಯ ಕ್ರಿಶ್ಚಿಯನ್ನರ ಮದುವೆಯನ್ನು ಮಾತ್ರ ಪ್ರಮಾಣೀಕರಿಸಬಹುದು. ಈ ನಿಬಂಧನೆಗಳ ಪ್ರಕಾರ, ಯಾವುದೇ ಇಬ್ಬರು ಭಾರತೀಯ ಕ್ರಿಶ್ಚಿಯನ್ನರು, ಪೂರ್ವಾಭಾವಿ ಸೂಚನೆಯನ್ನು ನೀಡದೆ, ಕೆಳಗಿನ ಷರತ್ತುಗಳನ್ನು ಪೂರೈಸಿ ಮದುವೆಯಾಗಬಹುದು:

  • ೧. ವರ ೨೧ರ ಮೇಲಿದ್ದು, ವಧು ೧೮ರ ಮೇಲಿರಬೇಕು.
  • ೨. ಇವರಿಬ್ಬರಿಗೂ ಜೀವಂತ ಗಂಡ/ಹೆಂಡತಿ ಇರಬಾರದು.
  • ೩. ಕಾನೂನು ನಿಗದಿಪಡಿಸಿದ ಪ್ರಮಾಣವಚನವನ್ನು ಇವರಿಬ್ಬರೂ, ವಿವಾಹ ಪ್ರಮಾಣಪತ್ರಗಳನ್ನು ನೀಡುವ ಅಧಿಕೃತ ವ್ಯಕ್ತಿ ಹಾಗು ಇಬ್ಬರು ಸಾಕ್ಷಿದಾರರ ಸಮಕ್ಷಮ ಸ್ವೀಕರಿಸಬೇಕು.

ಒಂದು ಪಕ್ಷದಿಂದ ಅರ್ಜಿಯನ್ನು ಸ್ವೀಕರಿಸಿದ್ದಲ್ಲಿ, ಪರವನಾಗಿ ಪಡೆದ ವ್ಯಕ್ತಿಯು ಮೇಲಿನ ಷರತ್ತುಗಳು ಈಡೇರಿವೆಯೋ ಇಲ್ಲವೋ ಎಂದು ಪರಿಶೀಲಿಸಿ, ಮದುವೆಯಾಗಲು ಪ್ರಮಾಣಪತ್ರವನ್ನು ನೀಡುತ್ತಾರೆ. ಇಂತಹ ಪ್ರಮಾಣಪತ್ರವನ್ನು ಪಡೆಯಲು ನೀಡಬೇಕಾದ ಶುಲ್ಕ ೨೫ ಪೈಸೆಯಾಗಿದೆ. ಈ ಪ್ರಮಾಣಪತ್ರವು ಮದುವೆಯ ನಿರ್ಣಾಯಕ ಪುರಾವೆಯಾಗಿದೆ.

ಬಾಲ್ಯ ವಿವಾಹದಿಂದ ಹುಟ್ಟಿದ ಮಕ್ಕಳು

ಬಾಲ್ಯ ವಿವಾಹವು ರದ್ದುಗೊಂಡಿದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ, ಕಾನೂನು, ಬಾಲ್ಯ ವಿವಾಹದಿಂದಾಗಿ ಹುಟ್ಟಿದ ಎಲ್ಲ ಮಕ್ಕಳನ್ನು ಧರ್ಮಜ ಮಕ್ಕಳನ್ನಾಗಿ ಪರಿಗಣಿಸುತ್ತದೆ.

ಮಕ್ಕಳ ಪಾಲನೆ-ಪೋಷಣೆ:

ಮಕ್ಕಳ ಪಾಲನೆ-ಪೋಷಣೆಯ ಹೊಣೆ ಯಾರದ್ದಾಗಿರಬೇಕು ಎಂಬುದನ್ನು ಜಿಲ್ಲಾ ನ್ಯಾಯಾಲಯವು ಮದುವೆ ರದ್ದು ಮಾಡುವ ಮನವಿಯನ್ನು ಕೇಳುವ ಸಮಯದಲ್ಲಿ ತೀರ್ಮಾನಿಸುತ್ತದೆ. ಈ ನಿರ್ಣಯವನ್ನು ಮಾಡುವ ಹೊತ್ತಿನಲ್ಲಿ ನ್ಯಾಯಾಲಯವು ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬಹುದು:

  • ನ್ಯಾಯಾಲಯವು ಪಾಲನೆ-ಪೋಷಣೆಯ ನಿರ್ಣಯವನ್ನು ಮಾಡುತ್ತಿರುವಾಗ ಅತಿಮುಖ್ಯವಾಗಿ ಮಗುವಿನ ಕಲ್ಯಾಣ ಮತ್ತು ಯೋಗಕ್ಷೇಮಕ್ಕೆ ಒತ್ತು ನೀಡುತ್ತದೆ.
  • ಮಗುವಿನ ಯೋಗಕ್ಷೇಮಕ್ಕೆ ಸರಿ ಎನಿಸಿದರೆ ವಿರುದ್ಧ ಪಕ್ಷದವರಿಗೆ ಮಗುವನ್ನುಆಗಾಗ್ಗೆ ಭೇಟಿಯಾಗಲು ಅನುಮತಿ ನೀಡುತ್ತದೆ.
  • ಜಿಲ್ಲಾ ನ್ಯಾಯಾಲಯವು ಗಂಡನಿಗೆ, ಅಥವಾ ಅವನ ತಂದೆ-ತಾಯಿ/ಪೋಷಕರಿಗೆ (ಗಂಡ ಅಪ್ರಾಪ್ತ ವಯಸ್ಕನಿದ್ದಾಗ), ಅವನ ಹೆಂಡತಿಯಾದ ಹುಡುಗಿಗೆ ಜೀವನಾಂಶ ಕೊಡುವುದಾಗಿ ಆದೇಶಿಸಬಹುದು.

ಭಾರತದಾದ್ಯಂತವೂ ಕ್ರಿಶ್ಚಿಯನ್ ಮದುವೆಯ ಕಾರ್ಯವಿಧಾನವು ಒಂದೇ ತರಹವಿದೆಯೇ?

ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ ಕ್ರಿಶ್ಚಿಯನ್ ಮದುವೆಗಳಿಗೆ ಸಂಬಂದ್ಧಿಸಿದ್ದು, ಟ್ರಾವಂಕೋರ್-ಕೊಚಿನ್ ಮತ್ತು ಮಣಿಪುರ್ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲ ಕಡೆ ಅನ್ವಯವಾಗುತ್ತದೆ.

  • ಮಣಿಪುರದಲ್ಲಿ ಕ್ರಿಶ್ಚಿಯನ್ ಮದುವೆಗಳು ಸಾಂಪ್ರದಾಯಿಕ ನಿಯಮಗಳು ಮತ್ತು ವೈಯಕ್ತಿಕ ಕಾನೂನುಗಳ ಆಧಾರದ ಮೇಲೆ ನಡೆಯುತ್ತವೆ.
  • ಟ್ರಾವಂಕೋರ್-ಕೊಚಿನ್ ಪ್ರಸ್ತುತದಲ್ಲಿ ಕೇರಳ ಮತ್ತು ತಮಿಳು ನಾಡು ರಾಜ್ಯಗಳ ಭಾಗವಾಗಿದೆ. ಕೇರಳದ ಕೊಚಿನ್ ಪ್ರದೇಶದಲ್ಲಿ ಕ್ರಿಶ್ಚಿಯನ್ ಮದುವೆಗಳು ಕೊಚಿನ್ ಕ್ರಿಶ್ಚಿಯನ್ ನಾಗರಿಕ ವಿವಾಹ ಕಾಯಿದೆ, ೧೯೨೦ರ ಪ್ರಕಾರ ನಡೆಯುತ್ತವೆ. ಮಾಜಿ ರಾಜ್ಯದ ಟ್ರಾವಂಕೋರ್ ಪ್ರದೇಶ ಕೇರಳ ಹಾಗು ತಮಿಳು ನಾಡಿನ ದಕ್ಷಿಣ ಭಾಗದಲ್ಲಿ ವಿಸ್ತಾರಗೊಂಡಿದೆ. ಹೀಗಿರುವಾಗ, ತಮಿಳು ನಾಡು ಭಾರತೀಯ ಕ್ರಿಶ್ಚಿಯನ್ ವಿವಾಹ ಕಾನೂನನ್ನು ಅದರ ಟ್ರಾವಂಕೋರ್ ಭಾಗವನ್ನು ಸೇರಿಸಿ ಇಡೀ ರಾಜ್ಯಕ್ಕೆ ಅನ್ವಯಿಸಿದರೆ, ಕೇರಳ ಹಾಗೆ ಮಾಡಿಲ್ಲ. ಆದ್ದರಿಂದ ಕೇರಳದ ದಕ್ಷಿಣ ಭಾಗದಲ್ಲಿ (ಮಾಜಿ ಟ್ರಾವಂಕೋರ್) ಕ್ರಿಶ್ಚಿಯನ್ ಮದುವೆಗಳು ಬೇರೆ-ಬೇರೆ ಪಂಗಡಗಳ ಚರ್ಚುಗಳ ಆಂತರಿಕ ಕಾನೂನುಗಳನ್ನಾಧರಿಸಿ ನಡೆಯುತ್ತವೆ.

 

ಬಾಲ್ಯ ವಿವಾಹವಾದ ಹೆಣ್ಣು ಮಕ್ಕಳಿಗೆ ರಕ್ಷಣೆ

೧೮ರ ಕೆಳಗಿನ ಹೆಣ್ಣು ಮಕ್ಕಳು ಮದುವೆಯಾದಲ್ಲಿ, ಹಾಗು ಅವರು ಮದುವೆಯನ್ನು ರದ್ದು ಮಾಡುವುದಾಗಿ ಮನವಿ ಸಲ್ಲಿಸಿದಲ್ಲಿ, ಅವರಿಗೆ ಕಾನೂನು ರಕ್ಷಣೆ ನೀಡುತ್ತದೆ.

ಜೀವನಾಂಶ ಕೊಡುವುದು:

ಅವಳ ಗಂಡ, ಅಥವಾ ಗಂಡನ ತಂದೆ-ತಾಯಿ/ಪೋಷಕರು (ಗಂಡ ಅಲ್ಪವಯಸ್ಕನಿದ್ದಾಗ) ಅವಳಿಗೆ ನಿಗದಿ ಪಡಿಸಿದ ಹಣವನ್ನು ಜೀವನಾಂಶವಾಗಿ ಕೊಡುವುದಾಗಿ ಜಿಲ್ಲಾ ನ್ಯಾಯಾಲಯವು ನಿರ್ದೇಶಿಸಬಹುದು.

ಈ ಜೀವನಾಂಶದ ಮೊತ್ತವನ್ನು ನಿರ್ಧರಿಸುವಾಗ, ಆಕೆಯ ಜೀವನಶೈಲಿ ಮತ್ತು ಜೀವನಾಂಶ ಕೊಡುವವರ ಆದಾಯವನ್ನು ನ್ಯಾಯಾಲಯವು ಪರಿಗಣಿಸುತ್ತದೆ. ಆ ಹುಡುಗಿ ಪುನರ್ವಿವಾಹವಾಗುವ ತನಕ ಈ ಜೀವನಾಂಶ ಕೊಡಬೇಕಾಗುತ್ತದೆ.

ನಿವಾಸಕ್ಕಾಗಿ ವ್ಯವಸ್ಥೆ:

ಆ ಹುಡುಗಿ ಪುನರ್ವಿವಾಹವಾಗುವವರೆಗೆ ಅವಳಿಗೆ ಸೂಕ್ತ ನಿವಾಸದ ವ್ಯವಸ್ಥೆ ಮಾಡಬೇಕೆಂದೂ ಸಹ ನ್ಯಾಯಾಲಯವು ನಿರ್ದೇಶಿಸಬಹುದು.

ಕ್ರಿಶ್ಚಿಯನ್ ಕಾನೂನಿನಡಿ ಅಲ್ಪವಯಸ್ಕರು ಹೇಗೆ ಮದುವೆಯಾಗಬಹುದು?

ಕ್ರಿಶ್ಚಿಯನ್ ಕಾನೂನಿನ ಪ್ರಕಾರ ಯಾರು ೨೧ರ ಕೆಳಗಿದ್ದು, ವಿಧವೆ/ವಿಧುರರಲ್ಲವೋ, ಅವರು ಅಲ್ಪವಯಸ್ಕರು. ಒಂದು ವೇಳೆ ಮದುವೆ ಆಗಲಿಚ್ಛಿಸುವ ಒಬ್ಬರು ಅಲ್ಪವಯಸ್ಕರಿದ್ದರೆ, ಅವರ ತಂದೆಯ ಅನುಮತಿ ಬೇಕಾಗುತ್ತದೆ. ತಂದೆ ಜೀವಂತವಿಲ್ಲದಿದ್ದರೆ, ರಕ್ಷಕರ, ಮತ್ತು ರಕ್ಷಕರಿಲ್ಲದಿದ್ದರೆ ತಾಯಿಯ ಅನುಮತಿ ಬೇಕಾಗುತ್ತದೆ. ಒಂದು ವೇಳೆ ಇವರ್ಯಾರೂ ಮದುವೆಯ ಸಮಯದಲ್ಲಿ ಭಾರತದಲ್ಲಿ ವಾಸಮಾಡುತ್ತಿಲ್ಲವಾದರೆ, ಅವರ ಅನುಮತಿ ಬೇಕಾಗುವುದಿಲ್ಲ.

ಆದಾಗ್ಯೂ, ಬಾಲ್ಯ ವಿವಾಹ ನಿಷೇಧ ಕಾಯಿದೆಯ ಪ್ರಕಾರ ಎಲ್ಲ ಮಕ್ಕಳ (೧೮ರ ಕೆಳಗಿನವರು) ಮದುವೆಗಳು, ಅವರ ಆಯ್ಕೆಯಂತೆ ಅನೂರ್ಜಿತವಾಗಿವೆ. ಕಾನೂನಿನ ಪ್ರಕಾರ, ಮಕ್ಕಳು ವಯಸ್ಕರಾದ ಎರಡು ವರ್ಷಗಳ ಒಳಗೆ ಮದುವೆಯನ್ನು ರದ್ದುಗೊಳಿಸಲು ಕೋರ್ಟಿಗೆ ಮನವಿ ಸಲ್ಲಿಸಬಹುದು.

ಪರವಾನಗಿ ಪಡೆದ ಧರ್ಮ ಸಚಿವರಿಂದ, ಅಥವಾ ಅವರ ಉಪಸ್ಥಿತಿಯಲ್ಲಿ ನೆರವೇರಿಸುವ ಮದುವೆಯ ಕಾರ್ಯವಿಧಾನ:

ಅಲ್ಪವಯಸ್ಕರು ಕಾನೂನಿನಡಿ ಮದುವೆಯಾಗಬೇಕೆಂದಲ್ಲಿ, ಧರ್ಮ ಸಚಿವರು ಕೆಳಗಿನ ಕಾರ್ಯವಿಧಾನ ಅನುಸರಿಸುತ್ತಾರೆ:

  • ೧. ಧರ್ಮ ಸಚಿವರು ಅಲ್ಪವಯಸ್ಕರಿಂದ ಮದುವೆಯಾಗಬಯಸುವ ಸೂಚನೆ ಪಡೆದಲ್ಲಿ ಅದನ್ನು ಜಿಲ್ಲಾ ವಿವಾಹ ಕುಲಸಚಿವರಿಗೆ ಕಳಿಸಬೇಕು.
  • ೨. ಇದಾದ ಮೇಲೆ, ಆ ಸೂಚನೆಯನ್ನು ಆ ಜಿಲ್ಲೆಯ ಇನ್ನೆಲ್ಲ ವಿವಾಹ ಕುಲಸಚಿವರಿಗೆ ಕಳಿಸಲಾಗುತ್ತದೆ, ಹಾಗು ಅವರ ಕಚೇರಿಗಳಲ್ಲಿನ ಸಾರ್ವಜನಿಕ ಸ್ಥಳದಲ್ಲಿ, ಎಲ್ಲರಿಗೂ ಕಾಣಿಸುವಂತೆ ಪ್ರದರ್ಶಿಸಲಾಗುತ್ತದೆ.
  • ೩. ಮದುವೆಗೆ ಮನ್ನಣೆ ಕೊಡುವ ಅಧಿಕಾರ ಯಾರಿಗಿದೆಯೋ, ಅವರು ಮದುವೆಗೆ ಒಪ್ಪದಿದ್ದರೆ, ಲಿಖಿತ ರೂಪದಲ್ಲಿ ಅವರ ತಿರಸ್ಕಾರವನ್ನು ಧರ್ಮ ಸಚಿವರಿಗೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ, ಆ ಧರ್ಮ ಸಚಿವರು ಸಮರ್ಪಕ ವಿಚಾರಣೆ ನಡೆಸದೆ ವಿವಾಹ ಪ್ರಮಾಣ ಪತ್ರವನ್ನು ಕೊಡಲಾರರು. ಇಂತಹ ಆಕ್ಷೇಪಣೆ ವಿವಾಹ ಸೂಚನೆ ಪಡೆದ ಪ್ರಮಾಣ ಪತ್ರ ಪಡೆಯುವ ಮುನ್ನವೇ ವ್ಯಕ್ತ ಪಡಿಸಬೇಕು.
  • ೪. ಯಾವ ಆಕ್ಷೇಪಣೆಯೂ ಇಲ್ಲದಿದ್ದರೂ ಕೂಡ, ಧರ್ಮ ಸಚಿವರು ಪ್ರಮಾಣ ಪತ್ರ ನೀಡಲು, ಮದುವೆಯಾಗಬಯಸುವ ಸೂಚನೆ ಪಡೆದು ೧೪ ದಿನಗಳ ವರೆಗೆ ಕಾಯಬಹುದು. ೫. ವಿವಾಹ ಪ್ರಮಾಣ ಪತ್ರ ಒಮ್ಮೆ ಕೊಟ್ಟ ಮೇಲೆ ಮದುವೆಯ ಸಮಾರಂಭ ಮತ್ತು ನೋಂದಣಿಯ ಕಾರ್ಯವಿಧಾನ ಮೇಲ್ಕಂಡಂತೆ ಇರುತ್ತದೆ.

ವಿವಾಹ ಕುಲಸಚಿವರಿಂದ ಅಥವಾ ಅವರ ಉಪಸ್ಥಿತಿಯಲ್ಲಿ ಮದುವೆ ನೆರವೇರಿಸುವ ಕಾರ್ಯವಿಧಾನ:

ಅಲ್ಪವಯಸ್ಕರು ಕಾನೂನುಬದ್ಧವಾಗಿ ಮದುವೆಯಾಗಬಯಸಲು, ವಿವಾಹ ಕುಲಸಚಿವರು ಕೆಳಗಿನ ಕಾರ್ಯವಿಧಾನವನ್ನು ಪಾಲಿಸುತ್ತಾರೆ:

  • ೧. ಅಲ್ಪವಯಸ್ಕರು ಮದುವೆಯಾಗಬಯಸುವ ಸೂಚನೆಯನ್ನು ವಿವಾಹ ಕುಲಸಚಿವರಿಗೆ ಸಲ್ಲಿಸಿದಾಗ ಅವರು ಆ ಜಿಲ್ಲೆಯ ಇನ್ನೆಲ್ಲ ವಿವಾಹ ಕುಲಸಚಿವರಿಗೆ ಆ ಸೂಚನೆಯನ್ನು ಕಳಿಸುತ್ತಾರೆ, ಮತ್ತು ಅವರೆಲ್ಲರ ಕಚೇರಿಗಳ ಸಾರ್ವಜನಿಕ ಸ್ಥಳದಲ್ಲಿ, ಎಲ್ಲರಿಗೂ ಕಾಣಿಸುವಂತೆ ಆ ಸೂಚನೆಯನ್ನು ಪ್ರದರ್ಶಿಸಲಾಗುತ್ತದೆ.
  • ೨. ಮದುವೆಗೆ ಮನ್ನಣೆ ಕೊಡುವ ಅಧಿಕಾರ ಯಾರಿಗಿದೆಯೋ, ಅವರು ಮದುವೆಗೆ ಒಪ್ಪದಿದ್ದರೆ, ಲಿಖಿತ ರೂಪದಲ್ಲಿ ಅವರ ತಿರಸ್ಕಾರವನ್ನು ವಿವಾಹ ಕುಲಸಚಿವರಿಗೆ ಸಲ್ಲಿಸಬೇಕು. ಈ ಸಂದರ್ಭದಲ್ಲಿ, ಆ ಕುಲಸಚಿವರು ಸಮರ್ಪಕ ವಿಚಾರಣೆ ನಡೆಸದೆ ವಿವಾಹ ಪ್ರಮಾಣ ಪತ್ರವನ್ನು ಕೊಡಲಾರರು. ಇಂತಹ ಆಕ್ಷೇಪಣೆ ವಿವಾಹ ಸೂಚನೆ ಪಡೆದ ಪ್ರಮಾಣ ಪತ್ರ ಪಡೆಯುವ ಮುನ್ನವೇ ವ್ಯಕ್ತ ಪಡಿಸಬೇಕು.
  • ೩. ಒಂದು ವೇಳೆ ಒಪ್ಪಿಗೆಯನ್ನು ಕೊಡದಿದ್ದವರು ಮಾನಸಿಕವಾಗಿ ಅಸ್ವಸ್ಥವಾಗಿದ್ದರೆ, ಅಥವಾ (ತಂದೆಯಲ್ಲದವರು) ಅನ್ಯಾಯವಾಗಿ ಒಪ್ಪಿಗೆಯನ್ನು ನೀಡದಿದ್ದರೆ, ಮದುವೆಯಾಗಬಯಸುವ ದಂಪತಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಮುಂಬೈ, ಚೆನ್ನೈ, ಮತ್ತು ಕೋಲ್ಕತಾದಲ್ಲಿ ವಾಸಿಸುವ ದಂಪತಿಗಳು ಆಯಾ ಉಚ್ಚ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಬಹುದು, ಮತ್ತಿನ್ನಿತರರು ಅವರವರ ಜಿಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಬಹುದು.
  • ೪. ಇನ್ನು, ವಿವಾಹ ಕುಲಸಚಿವರಿಗೆ ಒಪ್ಪಿಗೆ ನೀಡದಿದ್ದ ವ್ಯಕ್ತಿಯ ಅಧಿಕಾರದ ಮೇಲೆ ಸಂದೇಹವಿದ್ದಲ್ಲಿ, ಅವರು ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.
  • ೫. ಯಾವ ಆಕ್ಷೇಪಣೆಯೂ ಇಲ್ಲದಿದ್ದರೂ ಕೂಡ, ವಿವಾಹ ಕುಲಸಚಿವರು ಪ್ರಮಾಣ ಪತ್ರ ನೀಡಲು, ಮದುವೆಯಾಗಬಯಸುವ ಸೂಚನೆ ಪಡೆದು ೧೪ ದಿನಗಳ ವರೆಗೆ ಕಾಯಬಹುದು.
  • ೬. ವಿವಾಹ ಪ್ರಮಾಣ ಪತ್ರ ಒಮ್ಮೆ ಕೊಟ್ಟ ಮೇಲೆ ಮದುವೆಯ ಸಮಾರಂಭ ಮತ್ತು ನೋಂದಣಿಯ ಕಾರ್ಯವಿಧಾನ ಮೇಲ್ಕಂಡಂತೆ ಇರುತ್ತದೆ.

 

ಬಾಲ್ಯ ವಿವಾಹದ ದೂರು ನೀಡುವುದು

ಸಂಬಂಧಪಟ್ಟ ಮಗು ಅಥವಾ ಇನ್ಯಾರಾದರೂ ಕೂಡ ಬಾಲ್ಯ ವಿವಾಹದ ವಿರುದ್ಧ ದೂರು ನೀಡಬಹುದು. ಬಾಲ್ಯ ವಿವಾಹ ಈಗಾಗಲೇ ನಡೆದಿದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಯಾಕೆಂದರೆ ಈ ದೂರು ಮದುವೆಯ ಮುಂಚೆ ಅಥವಾ ಆದಮೇಲೆ ಯಾವಾಗಾದರೂ ದಾಖಲಿಸಬಹುದು. ಕೆಳಕಂಡ ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು:

೧೦೯೮ಕ್ಕೆ ಕರೆ ಮಾಡಿ:

೧೦೯೮ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಶುಲ್ಕರಹಿತ ದೂರವಾಣಿ ಸಂಖ್ಯೆಯಾಗಿದೆ. ಇದನ್ನು ಮಕ್ಕಳ ಹಕ್ಕು ಹಾಗು ಸಂರಕ್ಷಣೆಯತ್ತ ಕೆಲಸ ಮಾಡುತ್ತಿರುವ “ಚೈಲ್ಡ್ ಲೈನ್ ಇಂಡಿಯಾ ಫೌಂಡೇಶನ್” ಎಂಬ ಸರ್ಕಾರೇತರ ಸಂಸ್ಥೆ ನಿರ್ವಹಿಸುತ್ತಿದೆ. ಈ ದೂರವಾಣಿ ಸಂಖ್ಯೆಗೆ, ಖುದ್ದಾಗಿ ಮಕ್ಕಳೇ, ಅಥವಾ ಇನ್ಯಾರಾದರೂ ಸಹ ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಆದ್ದರಿಂದ ನೀವು ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳು, ಅಥವಾ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಈ ದೂರವಾಣಿ ಸಂಖ್ಯೆಯ ಬಗ್ಗೆ ಹೇಳಿದರೆ, ಬಾಲಕಾರ್ಮಿಕ ಪಧ್ಧತಿಯಂತಹ ಅನೈತಿಕ ಚಟುವಟಿಕೆಗಳನ್ನು ನಾವು ನಿಯಂತ್ರಿಸಬಹುದಾಗಿದೆ.

ಪೊಲೀಸ್:

೧೦೦ ಸಂಖ್ಯೆಗೆ ಕರೆ ಮಾಡಿ ನೀವು:

  • ನಡೆಯುತ್ತಿರುವ ಬಾಲ್ಯ ವಿವಾಹದ ಬಗ್ಗೆ ದೂರು ನೀಡಬಹುದು, ಅಥವಾ
  • ನಡೆಯಲಿರುವ ಬಾಲ್ಯ ವಿವಾಹದ ಬಗ್ಗೆ ಕೂಡ ದೂರು ನೀಡಬಹುದು. ಇದಲ್ಲದೆ, ಖುದ್ದಾಗಿ ಪೊಲೀಸ್ ಠಾಣೆಗೆ ಹೋಗಿ ಎಫ್.ಐ.ಆರ್.ಅನ್ನು ದಾಖಲಿಸಬಹುದು.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳು:

ನೀವು ಸ್ಥಳೀಯ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೂ ದೂರು ನೀಡಬಹುದು. ಅವರು ಅಪರಾಧಿಗಳ ವಿರುದ್ಧ ತಕ್ಷಣವೇ ಕ್ರಮ ಕೈತೆಗೆದುಕೊಳ್ಳುತ್ತಾರೆ.

ಮಕ್ಕಳ ಕಲ್ಯಾಣ ಸಮಿತಿ:

ನೀವು ಬಾಲಾಪರಾಧಿ ನ್ಯಾಯಕ್ಕೆ ಸಂಬಂಧಪಟ್ಟ ಕಾನೂನಿನಡಿ ರಚಿಸಿದ ಸ್ಥಳೀಯ ಮಕ್ಕಳ ಕಲ್ಯಾಣ ಸಮಿತಿಯಲ್ಲೂ ತಮ್ಮ ದೂರು ಸಲ್ಲಿಸಬಹುದು. ಉದಾಹರಣೆಗೆ, ಕರ್ನಾಟಕದಲ್ಲಿ ಆಯಾ ಜಿಲ್ಲೆಗೆ ಸಂಬಂಧಿಸಿದ ಸಮಿತಿಗಳನ್ನು ನೀವು ಈ ಪಟ್ಟಿಯ ಪ್ರಕಾರ ಸಂಪರ್ಕಿಸಬಹುದು.

ಕೋರ್ಟಿನಲ್ಲಿ ದೂರು ದಾಖಲಿಸುವುದು:

ನೀವು ನೇರವಾಗಿ ನ್ಯಾಯಿಕ ದಂಡಾಧಿಕಾರಿ (ಮೊದಲನೇ ಶ್ರೇಣಿ) (Judicial Magistrate First Class), ಅಥವಾ ಮಹಾನಗರ ದಂಡಾಧಿಕಾರಿ (Metropolitan Magistrate) ಗಳ ಬಳಿ ಕೂಡ ದೂರು ಸಲ್ಲಿಸಬಹುದು. ಈ ಸಂದರ್ಭದಲ್ಲಿ, ನ್ಯಾಯಾಲಯವು ಪೊಲೀಸ್ ಅಥವಾ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ ಸಮಂಜಸ ಕ್ರಮ ಕೈಗೊಳ್ಳಲು ಆದೇಶಿಸುತ್ತದೆ.

ಎಲ್ಲಿ ಮತ್ತು ಯಾವಾಗ ಕ್ರಿಶ್ಚಿಯನ್ ಮದುವೆಗಳು ನಡೆಯಬಹುದು?

ಮದುವೆಯ ಸಮಯ:

ಕ್ರಿಶ್ಚಿಯನ್ ಮದುವೆಯನ್ನು ಕೇವಲ ಬೆಳಿಗ್ಗೆ ೬ರಿಂದ ಸಂಜೆ ೭ರ ವರೆಗೆ ನೆರವೇರಿಸಬಹುದು. ಆದಾಗ್ಯೂ, ಇಂಗ್ಲೆಂಡ್, ರೋಮ್, ಮತ್ತು ಸ್ಕಾಟ್ಲೆಂಡ್ ಚರ್ಚುಗಳ ಪಾದ್ರಿಗಳು ಅವರವರ ಚರ್ಚುಗಳ ನಿಯಮಗಳು ಮತ್ತು ಸಂಪ್ರದಾಯಗಳನುಸಾರ ಈ ಸಮಯಾವಧಿಯನ್ನು ಮೀರಿ ಮದುವೆಯನ್ನು ನಡೆಸಬಹುದಾಗಿದೆ. ಮತ್ತಿನ್ನು, ಇಂಗ್ಲೆಂಡ್ ಮತ್ತು ರೋಮ್ ಚರ್ಚುಗಳ ಪಾದ್ರಿಗಳು, ಈ ಸಮಯಾವಧಿಯನ್ನು ಮೀರಿ ಮದುವೆಯನ್ನು ನಡೆಸಲು, ಅವರವರ ಧರ್ಮಾಧಿಪತಿಗಳಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ.

ಮದುವೆಯ ಸ್ಥಳ:

ಕ್ರಿಶ್ಚಿಯನ್ ಮದುವೆಯನ್ನು ಚರ್ಚಿನಲ್ಲಿ, ವೈಯಕ್ತಿಕ ನಿವಾಸದಲ್ಲಿ, ಅಥವಾ ವಿವಾಹ ಕುಲಸಚಿವರ ಉಪಸ್ಥಿತಿಯಲ್ಲಿ ನೆರವೇರಿಸಬಹುದು. ಆದರೆ, ಇಂಗ್ಲೆಂಡ್ ಚರ್ಚಿನ ಪಾದ್ರಿಗಳಿಂದ ವಿವಾಹ ನಡೆಯುತ್ತಿದ್ದರೆ, ಅದು ಚರ್ಚಿನಲ್ಲಿ ನಡೆಯಬೇಕು. ಒಂದು ವೇಳೆ ೫ ಮೈಲಿ ತ್ರಿಜ್ಯದಲ್ಲಿ ಚರ್ಚುಗಳಿಲ್ಲದಿದ್ದರೆ, ಧರ್ಮಾಧಿಪತಿಗಳಿಂದ ಚರ್ಚಿನ ಪಾದ್ರಿಗಳು ವಿಶೇಷ ಪರವಾನಗಿ ಪಡೆದಿದ್ದರೆ ಈ ನಿಯಮವನ್ನು ಉಲ್ಲಂಘಿಸಬಹುದು.

ಕಾನೂನಿನಡಿ ಅಪರಾಧಗಳು ಮತ್ತು ಶಿಕ್ಷೆಗಳು ಯಾವುವು?

ಕ್ರಿಶ್ಚಿಯನ್ ವಿವಾಹ ಕಾನೂನಿನಡಿ ಅಪರಾಧಗಳು ಕೆಳಗಿನಂತಿವೆ:

೧. ಸುಳ್ಳು ಪ್ರಮಾಣವಚನ ಅಥವಾ ಧೃಢೀಕರಣ ನೀಡುವುದು:

ಯಾರಾದರೂ ಮದುವೆಯಾಗಲು ಸುಳ್ಳು ಪ್ರಮಾಣವಚನ ಅಥವಾ ಧೃಢೀಕರಣ ನೀಡಿದರೆ, ಅಥವಾ ನಕಲಿ ವಿವಾಹ ಸೂಚನೆ/ಪ್ರಮಾಣ ಪತ್ರಕ್ಕೆ ಸಹಿ ಹಾಕಿದರೆ, ಅವರಿಗೆ ಗರಿಷ್ಟ ೩ ವರ್ಷಗಳ ವರೆಗೆ ಸೆರೆಮನೆ ವಾಸ ಮತ್ತು ದಂಡ ವಿಧಿಸಲಾಗುವುದು.

೨. ಅಲ್ಪವಯಸ್ಕರ ಸಂಬಂಧಿತ ಅಪರಾಧಗಳು:

ಯಾರದಾರೂ ಅಲ್ಪವಯಸ್ಕರ ಮದುವೆಗೆ ಒಪ್ಪಿಗೆ ಕೊಡಲು ಅವರಿಗೆ ಹಕ್ಕಿದೆ ಎಂದು ಸುಳ್ಳು ಹೇಳಿದರೆ, ಸುಳ್ಳು ವೇಷಧಾರಣೆಯ ಅಪರಾಧಕ್ಕೆ ತಪ್ಪಿತಸ್ಥರಾಗುತ್ತಾರೆ. ಈ ಅಪರಾಧಕ್ಕೆ

ಶಿಕ್ಷೆ – ೩ ವರ್ಷ ಸೆರೆಮನೆ ವಾಸ, ಅಥವಾ ದಂಡ, ಅಥವಾ ಎರಡೂ.

ಧರ್ಮ ಸಚಿವರು ೧೪ ದಿನಗಳ ಸೂಚನಾ ಸಮಯಾವಧಿಯ ಮೊದಲೇ ಅಲ್ಪವಯಸ್ಕರ ಮದುವೆ ನೆರವೇರಿಸಿದಲ್ಲಿ, ಅವರಿಗೆ ಶಿಕ್ಷೆ – ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ, ಮತ್ತು ದಂಡ.

೩. ಅಧಿಕಾರವಿಲ್ಲದೆ ಮದುವೆಯನ್ನು ನೆರವೇರಿಸುವುದು:

ಯಾರಾದರೂ ಅಗತ್ಯವಾದ ಅಧಿಕಾರವಿಲ್ಲದೆ ಮದುವೆಯನ್ನು ನೆರವೇರಿಸಿದರೆ ಅವರಿಗೆ ಶಿಕ್ಷೆ – ಗರಿಷ್ಟ ೧೦ ವರ್ಷಗಳ ಸೆರೆಮನೆ ವಾಸ ಮತ್ತು ದಂಡ

೪. ನಿಯಮಗಳನ್ನು ಪಾಲಿಸದೆ ಮದುವೆಯನ್ನು ನೆರವೇರಿಸುವುದು:

ಯಾರಾದರೂ ಕ್ರಿಶ್ಚಿಯನ್ ಮದುವೆಯನ್ನು ನಿಗದಿಪಡಿಸಲಾದ ಸಮಯಾವಧಿಯ ಬಾಹಿರವಾಗಿ, ಅಥವಾ ಸಾಕ್ಷಿದಾರರ ಅನುಪಸ್ಥಿತಿಯಲ್ಲಿ ಮದುವೆಯನ್ನು ನೆರವೇರಿಸಿದರೆ, ಅವರಿಗೆ ಶಿಕ್ಷೆ – ಗರಿಷ್ಟ ೩ ವರ್ಷಗಳ ಸೆರೆಮನೆ ವಾಸ ಮತ್ತು ದಂಡ.

ವಿವಾಹ ಕುಲಸಚಿವರು ಕೆಳಕಂಡ ಅಪರಾಧಗಳನ್ನು ಮಾಡಿದರೆ ಅವರಿಗೆ ವಿಧಿಸಲಾಗುವ ಶಿಕ್ಷೆ – ಗರಿಷ್ಟ ೫ ವರ್ಷಗಳ ಸೆರೆಮನೆ ವಾಸ ಮತ್ತು ದಂಡ:

  • ೧. ಪೂರ್ವಭಾವಿ ಸೂಚನೆಯಿಲ್ಲದೆ ಮದುವೆ ನೆರವೇರಿಸುವುದು, ಅಥವಾ ಸೂಚನೆ ಪಡೆದ ಪ್ರಮಾಣಪತ್ರವನ್ನು ನೀಡುವುದು
  • ೨. ವಿವಾಹ ಸೂಚನೆ ಸಿಕ್ಕ ಮೇಲೆ ೨ ತಿಂಗಳುಗಳಾದ ನಂತರ ಮದುವೆ ನೆರವೇರಿಸುವುದು
  • ೩. ವಿವಾಹ ಸೂಚನೆ ಸಿಕ್ಕು ೧೪ ದಿನಗಳ ಕಾಲ ತಡೆಯದೆ, ಮತ್ತು ನ್ಯಾಯಾಲಯದ ಆದೇಶಕ್ಕೆ ತಡೆಯದೆ ಅಲ್ಪವಯಸ್ಕರ ಮದುವೆಯನ್ನು ಮಾಡುವುದು
  • ೪. ಒಪ್ಪಿಗೆ ಇಲ್ಲದಿರುವ ಕಾರಣ ವಿವಾಹ ಸೂಚನೆ ಸಿಕ್ಕಿದೆ ಎಂಬ ಪ್ರಮಾಣ ಪತ್ರ ಕೊಡದಿರುವಂತೆ ಅರ್ಜಿ ಸಲ್ಲಿಸಿದ್ದರೂ ಕೂಡ ಇಂತಹ ಪ್ರಮಾಣಪತ್ರವನ್ನು ಕೊಡುವುದು

ತಪ್ಪಾಗಿ ವಿವಾಹ ಪ್ರಮಾಣಪತ್ರವನ್ನು ನೀಡುವುದು:

ಭಾರತೀಯ ಕ್ರಿಶ್ಚಿಯನ್ನರಿಗೆ ಪರವಾನಗಿ ಪಡೆಯದ ವ್ಯಕ್ತಿ ವಿವಾಹ ಪ್ರಮಾಣಪತ್ರ ನೀಡಿದರೆ ಅವರಿಗೆ ಶಿಕ್ಷೆ – ಗರಿಷ್ಟ ೫ ವರ್ಷ ಸೆರೆಮನೆ ವಾಸ ಮತ್ತು ದಂಡ.

ವಿವಾಹ ದಾಖಲಾ ಪುಸ್ತಕವನ್ನು ಅಕ್ರಮವಾಗಿ ತಿದ್ದುವುದು ಅಥವಾ ನಾಶಮಾಡುವುದು:

ಯಾರಾದರೂ ವಿವಾಹ ದಾಖಲಾ ಪುಸ್ತಕದಲ್ಲಿ ತಪ್ಪು ದಾಖಲೆಯನ್ನು ಬರೆಯುವುದು, ಅಕ್ರಮವಾಗಿ ಯಾವುದೇ ದಾಖಲೆಯನ್ನು ತಿದ್ದುವುದು, ಅಥವಾ ಈ ಪುಸ್ತಕವನ್ನು ನಾಶಮಾಡುವುದು ಮಾಡಿದರೆ ಅವರಿಗೆ ಶಿಕ್ಷೆ – ಗರಿಷ್ಟ ೭ ವರ್ಷಗಳ ಸೆರೆಮನೆ ವಾಸ ಮತ್ತು ದಂಡ.

ಈ ಎಲ್ಲ ಮೇಲ್ಕಂಡ ಪ್ರಕರಣಗಳಲ್ಲಿ, ಅಪರಾಧಿಗಳ ವಿರುದ್ಧ ನ್ಯಾಯಾಲಯಗಳಲ್ಲಿ ಕಾನೂನು ಕ್ರಮ ಅಪರಾಧವಾದ ೨ ವರ್ಷಗಳೊಳಗೆ ಶುರುವಾಗಬೇಕು.

ಬಾಲ್ಯ ವಿವಾಹ ತಡೆಗಟ್ಟಲು ನ್ಯಾಯಾಲಯದ ಅಧಿಕಾರ

ಬಾಲ್ಯ ವಿವಾಹ ನೆರವೇರಲಿದೆ, ಅಥವಾ ನೆರವೇರಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ನಂಬಲರ್ಹ ಮಾಹಿತಿ ನ್ಯಾಯಾಲಯಕ್ಕೆ ಸಿಕ್ಕರೆ, ಕೂಡಲೇ ಸಂಬಂಧಪಟ್ಟ ವ್ಯಕ್ತಿಗಳ ವಿರುಧ್ಧ ಅದು ನಿಷೇಧಾಜ್ಞೆಯನ್ನು ಹೊರಡಿಸಬಲ್ಲದು.

ಆರೋಪಿಗಳು ಈ ನಿಷೇಧಾಜ್ಞೆಯನ್ನು ರದ್ದುಪಡಿಸಲು ಅಥವಾ ಬದಲಾಯಿಸಲು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು. ನ್ಯಾಯಾಲಯವು ಖುದ್ದಾಗಿಯೂ ಕೂಡ ಆಜ್ಞೆಯನ್ನು ಹಿಂತೆಗೆದುಕೊಳ್ಳಬಹುದು ಅಥವಾ ಬದಲಾಯಿಸಬಹುದು.

ಇಂತಹ ನಿಷೇಧಾಜ್ಞೆ ಹೊರಡಿಸಿದ ಬಳಿಕ ಯಾವುದೇ ಬಾಲ್ಯ ವಿವಾಹ ನೆರವೇರಿದಲ್ಲಿ ಅದು ಕಾನೂನಿನ ಕಣ್ಣಿನಲ್ಲಿ ಅಮಾನ್ಯವಾಗಿರುತ್ತದೆ.

ನ್ಯಾಯಾಲಯ ಹಸ್ತಕ್ಷೇಪ ಮಾಡಬಲ್ಲ ಸನ್ನಿವೇಶಗಳು:

ನ್ಯಾಯಾಲಯವು ಬಾಲ್ಯ ವಿವಾಹಗಳಲ್ಲಿ ಈ ಕೆಳಗಿನ ಸಂದರ್ಭಗಳಲ್ಲಿ ಹಸ್ತಕ್ಷೇಪ ಮಾಡಬಹುದು:

  • ಸ್ವಯಂ ಪ್ರೇರಿತವಾಗಿ
  • ಬಾಲ್ಯ ವಿವಾಹ ನಿಷೇಧಾಧಿಕಾರಗಳು ಅಥವಾ ಇನ್ನೋರ್ವ ಸರ್ಕಾರೇತರ ಸಂಸ್ಥೆಯ ದೂರಿನ ಆಧಾರದ ಮೇಲೆ
  • ಅಕ್ಷಯ ತೃತಿಯಾಗಳಂತಹ ಮದುವೆಗೆ ಮಂಗಳಕರ ದಿನಗಳಂದು, ನ್ಯಾಯಾಲಯವೇ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಬಹುದು. ಈ ಸಂದರ್ಭಗಳಲ್ಲಿ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು, ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಎಲ್ಲ ಅಧಿಕಾರಗಳೂ ಸಹ ನ್ಯಾಯಾಲಯಕ್ಕೆ ಇರುತ್ತವೆ.
  • ನಡೆಯಲಿರುವ ಬಾಲ್ಯ ವಿವಾಹದ ಬಗ್ಗೆ ಯಾವುದೇ ವ್ಯಕ್ತಿಯ ಬಳಿ ವೈಯಕ್ತಿಕ ಮಾಹಿತಿ ಇದ್ದಾಗ

ನ್ಯಾಯಾಲಯವು ಹೊರಡಿಸುವ ಸೂಚನೆ:

ನಿಷೇಧಾಜ್ಞೆಯನ್ನು ಜಾರಿಗೆ ತರುವ ಮುನ್ನ, ನ್ಯಾಯಾಲಯವು ಆರೋಪಿಗಳ ವಿರುಧ್ಧ ಸೂಚನೆಯನ್ನು ಹೊರಡಿಸಬೇಕಾಗುತ್ತದೆ. ಇದು ಅವರಿಗೆ ಪ್ರತಿರಕ್ಷೆ ಮಾಡಿಕೊಳ್ಳಲು ಅವಕಾಶ ನೀಡುವುದಕ್ಕಾಗಿ. ಆದರೆ, ತುರ್ತು ಸಂದರ್ಭಗಳಲ್ಲಿ, ಆರೋಪಿಗಳಿಗೆ ಇಂತಹ ಸೂಚನೆ ನೀಡದೆ ನ್ಯಾಯಾಲಯಗಳು ಬಾಲ್ಯ ವಿವಾಹದ ವಿರುಧ್ಧ ಮಧ್ಯಂತರ ಆದೇಶವನ್ನು ಹೊರಡಿಸಬಹುದು.

ಶಿಕ್ಷೆ:

ನಿಮ್ಮ ವಿರುಧ್ಧ ನ್ಯಾಯಾಲಯವು ತಾತ್ಕಾಲಿಕ ಆದೇಶವನ್ನು ಹೊರಡಿಸಿದ್ದಲ್ಲಿ, ಮತ್ತು ನೀವು ಅದನ್ನು ಅನುಸರಿಸದಿದ್ದಲ್ಲಿ, ನಿಮಗೆ ಗರಿಷ್ಟ ೨ ವರ್ಷಗಳ ಸೆರೆಮನೆ ವಾಸ ಹಾಗು/ಅಥವಾ ಗರಿಷ್ಟ ೧ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗುವುದು.

ಕಾನೂನಿನಡಿ ಏನಾದರೂ ದೂರು ಮಾಡುವುದಿದ್ದರೆ ಯಾರಿಗೆ ಮಾಡಬೇಕು?

ವಿವಾಹ ಕುಲಸಚಿವರಿಂದ ಅಥವಾ ಅವರ ಉಪಸ್ಥಿತಿಯಲ್ಲಿ ಮದುವೆ ನೆರವೇರಬೇಕು ಎಂದು ಯಾರಾದರೂ ವಿವಾಹ ಸೂಚನೆಯ ಅರ್ಜಿ ಸಲ್ಲಿಸಿದ್ದಲ್ಲಿ, ಹಾಗು ಹೀಗಿರುವಾಗ ಕುಲಸಚಿವರು ವಿವಾಹ ಪ್ರಮಾಣಪತ್ರವನ್ನು ನೀಡದಿದ್ದಲ್ಲಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ಮುಂಬೈ, ಕೊಲ್ಕತ್ತಾ, ಮತ್ತು ಚೆನ್ನೈನಲ್ಲಿ ವಾಸಿಸುವರು ನೇರವಾಗಿ ತಮ್ಮ ತಮ್ಮ ಉಚ್ಚ ನ್ಯಾಯಾಲಯಕ್ಕೆ ಹೋಗಬಹುದಾದರೆ, ಇನ್ನಿತರರು ತಮ್ಮ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು.

ಅಲ್ಪವಯಸ್ಕರ ಮದುವೆಯ ವಿರುದ್ಧ ದೂರುಗಳು:

ಓರ್ವ ಕಕ್ಷಿದಾರರು ಅಲ್ಪವಯಸ್ಕರಿದ್ದಲ್ಲಿ (ಕ್ರಿಶ್ಚಿಯನ್ ಮದುವೆಗಳಿಗನ್ವವಯಾಗಿ ೨೧ರ ಕೆಳಗಿದ್ದಲ್ಲಿ), ಸೂಚನೆ ಸಿಕ್ಕ ಮೇಲೆ ಕನಿಷ್ಠ ೧೪ ದಿನಗಳವರೆಗೆ ವಿವಾಹ ಕುಲಸಚಿವರು, ಸೂಚನೆ ಸಿಕ್ಕ ಪ್ರಮಾಣಪತ್ರ ನೀಡಲು ಕಾಯಬೇಕು. ಆದಾಗ್ಯೂ, ಒಂದು ವೇಳೆ ಕಕ್ಷಿದಾರರಿಗೆ ೧೪ ದಿನಗಳ ವರೆಗೆ ಕಾಯಲು ಆಗದಿದ್ದಲ್ಲಿ ಸಂಬಂಧಿಸಿದ ಉಚ್ಚ ನ್ಯಾಯಾಲಯದಲ್ಲಿ ಸೂಚನೆ ಸಿಕ್ಕ ಪ್ರಮಾಣಪತ್ರವನ್ನು ೧೪ ದಿನಗಳವೊಳಗೆ ಪಡೆಯುವಂತೆ ಮನವಿ ಸಲ್ಲಿಸಬಹುದು. ಆದಾಗ್ಯೂ, ಈ ಆಯ್ಕೆಯು ಕೇವಲ ಕಲ್ಕತ್ತಾ, ಮುಂಬೈ, ಮತ್ತು ಚೆನ್ನೈನ ನಿವಾಸಿಗಳಿಗೆ ಲಭ್ಯವಿದೆ.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳು

ಭಾರತದಲ್ಲಿ ರಾಜ್ಯ ಸರ್ಕಾರಗಳು ಬಾಲ್ಯ ವಿವಾಹ ನಿಷೇಧಾಧಿಕಾರಿಗಳನ್ನು ಬಾಲ್ಯ ವಿವಾಹಗಳನ್ನು ತಡೆಗಟ್ಟಲು ನೇಮಿಸಿವೆ. ಈ ಅಧಿಕಾರಿಗಳ ಜವಾಬ್ದಾರಿ ಬಾಲ್ಯ ವಿವಾಹಗಳ ಬಗ್ಗೆ ವರದಿ ಮಾಡುವುದು ಮತ್ತು ಅವುಗಳನ್ನು ತಡೆಗಟ್ಟುವುದಾಗಿದೆ. ಪ್ರತಿ ರಾಜ್ಯ ಸರ್ಕಾರವು ಈ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕರ್ತವ್ಯಗಳನ್ನು ನಿರ್ಧರಿಸಿ ನಿಗದಿಪಡಿಸುತ್ತದೆ. ಈ ಕರ್ತವ್ಯಗಳು ಕೆಳಗಿನಂತಿವೆ:

  1. ಸಮಂಜಸ ಕ್ರಮಗಳನ್ನು ಕೈಗೊಂಡು ಬಾಲ್ಯ ವಿವಾಹಗಳನ್ನು ತಡೆಗಟ್ಟುವುದು
  2. ಆರೋಪಿಗಳ ಮೇಲೆ ಮೊಕದ್ದಮೆ ಹೂಡುವುದಕ್ಕೆ ಅವರ ವಿರುಧ್ಧ ಪುರಾವೆ ಸಂಗ್ರಹಿಸುವುದು
  3. ಸ್ಥಳೀಯ ಜನರಿಗೆ ಬಾಲ್ಯ ವಿವಾಹದಲ್ಲಿ ಭಾಗವಹಿಸದಿರಿ ಹಾಗು ಇಂತಹ ವಿವಾಹಗಳಿಗೆ ಬೆಂಬಲ ನೀಡದಿರಿ ಎಂದು ಸಲಹೆ ಹಾಗು ಸಮಾಲೋಚನೆ ನೀಡುವುದು
  4. ಬಾಲ್ಯ ವಿವಾಹಗಳಿಂದ ಆಗುವ ಸಮಸ್ಯೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು. ಉದಾಹರಣೆಗೆ, ಪ್ರಸವದ ವೇಳೆ ತಾಯಿಯ ಮರಣ, ಅಪೌಷ್ಟಿಕತೆ, ಕೌಟುಂಬಿಕ ಹಿಂಸೆ, ಇತ್ಯಾದಿ.
  5. ಬಾಲ್ಯ ವಿವಾಹ ಸಮಸ್ಯೆಯ ಬಗ್ಗೆ ಸಮುದಾಯವನ್ನು ಸಂವೇದನಾಶೀಲಗೊಳಿಸುವುದು.
  6. ಬಾಲ್ಯ ವಿವಾಹದ ಘಟನೆಗಳು ಎಷ್ಟರ ಮಟ್ಟಿಗೆ, ಯಾವಾಗ, ಮತ್ತು ಎಲ್ಲೆಲ್ಲಿ ಸಂಭವಿಸುತ್ತಿವೆ ಎಂಬ ಅಂಕಿಅಂಶಗಳನ್ನು ನಿಯತಕಾಲಿಕವಾಗಿ ರಾಜ್ಯ ಸರ್ಕಾರಕ್ಕೆ ವರದಿ ಮಾಡುವುದು.

ತಮ್ಮ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು, ರಾಜ್ಯ ಸರ್ಕಾರವು ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ, ಕೆಲವು ಷರತ್ತುಗಳು ಮತ್ತು ಮಿತಿಗಳೊಂದಿಗೆ, ಪೊಲೀಸ್ ಅಧಿಕಾರಿಗಳ ಅಧಿಕಾರಗಳನ್ನು ನೀಡಬಹುದು. ಇಂತಹ ಅಧಿಕಾರಗಳನ್ನು ರಾಜ್ಯದ ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆಯೊಂದನ್ನು ಪ್ರಕಟಿಸಿ ನೀಡಬಹುದಾಗಿದೆ.

ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ಕೆಲಸ ಕಾರ್ಯಗಳ ಬಗ್ಗೆ ಹೆಚ್ಚು ಮಾಹಿತಿ ಬೇಕಾದಲ್ಲಿ, ದಯವಿಟ್ಟು ಈ ಸರ್ಕಾರಿ ದಾಖಲೆಯನ್ನು ಓದಿ (೧೯-೨೨ ಪುಟಗಳು)